ವೈದ್ಯರ ಪ್ರತಿಭಟನೆಗೆ ಮಣಿದ ಮಮತಾ, ಎಲ್ಲಾ ಬೇಡಿಕೆಗಳಿಗೂ ಅಸ್ತು
ಕೋಲ್ಕತಾ, ಜೂನ್ 16: ಆಸ್ಪತ್ರೆಯ ಹಾಸ್ಟೆಲ್ ಆವರಣದಲ್ಲೇ ವೈದ್ಯರ ಮೇಲೆ ದಾಳಿ ನಡೆಯುತ್ತಿದ್ದರೂ ರಕ್ಷಣೆಗೆ ಯಾರೂ ಇರಲಿಲ್ಲ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಭದ್ರತೆ ಒದಗಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿರುವ ವೈದ್ಯರ ಆಕ್ರೋಶಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಣಿದಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಭದ್ರತೆ ನೀಡಲು ಸರ್ಕಾರ ಬದ್ಧವಾದರೆ ಮಾತ್ರ ತಾವು ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಮಂಗಳವಾರದಿಂದ ವೈದ್ಯರು ಪಟ್ಟು ಹಿಡಿದಿದ್ದರು.ನ್ಯಾಯಯುತವಾದ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿರುವ ಸರ್ಕಾರ, ಬೇಡಿಕೆ ಈಡೇರಿಸಲು ಬದ್ಧವಾಗಿದೆ ಎಂದು ಸಿಎಂ ಮಮತಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಏಕೆ? ಹಿನ್ನೆಲೆಯೇನು?
ವೈದ್ಯರ ಮೇಲೆ ಹಲ್ಲೆ ನಡೆದ ಮರುದಿನವೆ ನಾನು ಮಾತನಾಡಲು ಮುಂದಾಗಿದ್ದೆ ಆದರೆ, ನನ್ನ ಜತೆ ಚರ್ಚಿಸಲು ಸಿದ್ಧರಿರಲಿಲ್ಲ. ನಮ್ಮ ಸರ್ಕಾರ ವೈದ್ಯರ ಮೇಲೆ ಎಸ್ಮಾ ಜಾರಿ ಮಾಡಿಲ್ಲ. ಎಲ್ಲರ ರಕ್ಷಣೆಯ ಹೊಣೆ ಹೊತ್ತುಕೊಂಡಿದ್ದೇವೆ, ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆ ಉಂಟಾಗಿದೆ ಎಂದು ಮಮತಾ ಹೇಳಿದ್ದಾರೆ.
ಮಮತಾ ಹಾಗೂ ವೈದ್ಯರ ನಡುವಿನ ಮಾತುಕತೆ ಸಫಲವಾಗದಿದ್ದರೆ ಸೋಮವಾರದಂದು ದೇಶದೆಲ್ಲೆಡೆ ಲಕ್ಷಾಂತರ ಮಂದಿ ಕಿರಿಯ ವೈದ್ಯರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಎಚ್ಚರಿಸಿದೆ.