ದೇಶದಲ್ಲಿ ಕೊರೊನಾ ಪರಿಸ್ಥಿತಿ ಮೋದಿ ಸೃಷ್ಟಿಸಿದ ವಿಪತ್ತು; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಏಪ್ರಿಲ್ 21: ದೇಶದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ "ಮೋದಿ ಸೃಷ್ಟಿಸಿದ ವಿಪತ್ತು" ಎಂದು ಕರೆಯುವ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಕೊರೊನಾ ಸೋಂಕಿನ ನಿರ್ವಹಣೆ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.
ಬುಧವಾರ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಪರಿಸ್ಥಿತಿ ಇಷ್ಟು ಮಿತಿ ಮೀರಲು ಕೇಂದ್ರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ನಿಮ್ಮಿಂದ ಈ ಪರಿಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದಾದರೆ ಆ ಸ್ಥಾನ ಬಿಟ್ಟು ಹೋಗಿ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
No Stocks: ಲಸಿಕೆ ಕೇಂದ್ರದ ಎದುರು ಈ ಬೋರ್ಡ್ ಹಾಕಲು ಕಾರಣವೇನು?
ದೇಶದಲ್ಲಿ ಕೊರೊನಾ ಪರಿಸ್ಥಿತಿ ಮೋದಿ ಸೃಷ್ಟಿಸಿದ ವಿಪತ್ತು. ಹಲವು ರಾಜ್ಯಗಳಲ್ಲಿ ಆಮ್ಲಜನಕ, ಲಸಿಕೆ ಅಭಾವ ಹಾಗೂ ಔಷಧಿಗಳ ಕೊರತೆಯಿದೆ. ಅದರೆಡೆಗೆ ಗಮನ ಕೊಡಿ ಎಂದು ವಾಗ್ದಾಳಿ ನಡೆಸಿದರು.
ಮಂಗಳವಾರ ರಾತ್ರಿ 8.45ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ದೇಶದಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಮಾಹಿತಿ ನೀಡಿ, ಕೇಂದ್ರ ಸರ್ಕಾರ ಸೋಂಕು ನಿರ್ವಹಣೆಗೆ ಎಲ್ಲಾ ಮಾರ್ಗಗಳಲ್ಲಿಯೂ ಕೆಲಸ ಮಾಡುತ್ತಿದೆ. ಆಮ್ಲಜನಕ ಹಾಗೂ ಲಸಿಕೆ ಪೂರೈಕೆಗೆ ಶ್ರಮಿಸುತ್ತಿದೆ ಎಂದು ಭರವಸೆ ನೀಡಿದರು. ಜೊತೆಗೆ ಲಾಕ್ಡೌನ್ ಅಗತ್ಯವಿಲ್ಲ ಎಂದು ಹೇಳಿದ್ದರು.
ಲಾಕ್ಡೌನ್ ಅನ್ನು ಕೊನೆಯ ಆಯ್ಕೆಯಾಗಿ ಮಾತ್ರ ಪರಿಗಣಿಸುವಂತೆ ಎಲ್ಲಾ ರಾಜ್ಯಗಳಿಗೂ ಸೂಚಿಸಿದ್ದರು. ಈ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.