ಮಮತಾ ಬ್ಯಾನರ್ಜಿಗೆ ಭಾರೀ ಅಂತರದಿಂದ ಗೆಲುವು ನಿಶ್ಚಿತ; ಟಿಎಂಸಿ ಭವಿಷ್ಯ
ಕೋಲ್ಕತ್ತಾ, ಅಕ್ಟೋಬರ್ 3: ಸೆಪ್ಟೆಂಬರ್ 30ರಂದು ನಡೆದ ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಮಮತಾ ಬ್ಯಾನರ್ಜಿ ಭಾರೀ ಅಂತರದ ಮತಗಳಿಂದ ಗೆಲುವು ಸಾಧಿಸುವ ಭರವಸೆಯನ್ನು ತೃಣಮೂಲ ಕಾಂಗ್ರೆಸ್ ವ್ಯಕ್ತಪಡಿಸಿದೆ.
ಕಳೆದ ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸೋಭಂದೇವ್ ಚಟ್ಟೋಪಾಧ್ಯಾಯ ಅವರಿಗಿಂತ ಅತಿ ಹೆಚ್ಚಿನ ಮತಗಳನ್ನು ಮಮತಾ ಬ್ಯಾನರ್ಜಿ ಪಡೆಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಭವಾನಿಪುರ ಉಪ ಚುನಾವಣೆ ಮತ ಎಣಿಕೆ ಆರಂಭ; ಮಮತಾ ಭವಿಷ್ಯ ನಿರ್ಧಾರ!
ಸೆಪ್ಟೆಂಬರ್ 30ರಂದು ನಡೆದ ಭವಾನಿಪುರ ಉಪ ಚುನಾವಣೆಯಲ್ಲಿ ಮತದಾನ ಮಾಡಿದವರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿತ್ತು. 206389 ಮತದಾರರಲ್ಲಿ ಕೇವಲ 57.09% ಮತದಾರರು ಮತದಾನ ಮಾಡಿದ್ದರು. ಏಪ್ರಿಲ್ 26ರಂದು ಚಟ್ಟೋಪಾಧ್ಯಾಯ ಸ್ಪರ್ಧಿಸಿದ್ದಾಗ ಈ ಸಂಖ್ಯೆ 61.79% ಆಗಿತ್ತು. ಅವರು 28,719 ಮತಗಳ ಅಂತರದಿಂದ ಗೆದ್ದಿದ್ದರು.
ಈ ಬಾರಿ ಸಿಎಂ ಮಮತಾ ಬ್ಯಾನರ್ಜಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಟಿಎಂಸಿ ನಾಯಕರು ಶನಿವಾರ ರಾತ್ರಿ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಳೆದ ವರ್ಷ 294 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಟಿಎಂಸಿ 213 ಸ್ಥಾನಗಳನ್ನು ಗಳಿಸಿ ಗೆಲುವು ಸಾಧಿಸಿತ್ತು. ಬಿಜೆಪಿ 77 ಸ್ಥಾನಗಳನ್ನು ಪಡೆದುಕೊಂಡಿತ್ತು. ಇದಾಗ್ಯೂ ಮಿಡ್ನಾಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋಲು ಕಂಡಿದ್ದರು.
ಭವಾನಿಪುರ ಉಪ ಚುನಾವಣೆ; ಫಲಿತಾಂಶದ ಬಗ್ಗೆ ಎಚ್ಡಿಕೆ ಭವಿಷ್ಯ!
ಮಮತಾ ಬ್ಯಾನರ್ಜಿ ಹಿನ್ನಡೆಯಿಂದ ಚಟ್ಟೋಪಾಧ್ಯಾಯ ಸದ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಮಮತಾ ಬ್ಯಾನರ್ಜಿ ಮತ್ತೆ ತಮ್ಮ ಹಳೆಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಗೆಲುವು ಪಡೆದರೆ ಮುಖ್ಯಮಂತ್ರಿಯಾಗಿ ಮುಂದುವರೆಯಬಹುದಾಗಿದೆ.
ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಕೆಲವೇ ಮತಗಳಿಂದ ಮಮತಾ ಬ್ಯಾನರ್ಜಿ ಸೋಲು ಕಂಡಿದ್ದರು. ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಉಪಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿದೆ. ಬಿಜೆಪಿಯು ವಕೀಲೆಯಾದ ಪ್ರಿಯಾಂಕಾ ಟಿಬ್ರೆವಾಲ್ರನ್ನು ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಯ ಎದುರು ಕಣಕ್ಕೆ ಇಳಿಸಿದೆ. ತಮ್ಮ ಈ ಮುಖ್ಯಮಂತ್ರಿ ಸ್ಥಾನವನ್ನು ಮಮತಾ ಉಳಿಸಿಕೊಳ್ಳಬೇಕಾದರೆ ನವೆಂಬರ್ 5ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ.
ಮುರ್ಷಿದಾಬಾದ್ ಜಿಲ್ಲೆಯ ಸಂಸರ್ಗಂಜ್ ಹಾಗೂ ಜಂಗೀಪುರದಲ್ಲಿ ಕೂಡ ಈ ಬಾರಿ ಉಪಚುನಾವಣೆ ನಡೆದಿದೆ. ಈ ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ಸಾವಿನಿಂದಾಗಿ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲದ ಕಾರಣ ಈಗ ಚುನಾವಣೆ ನಡೆಸಲಾಗಿದೆ. ಸೆಪ್ಟೆಂಬರ್ 30ರಂದು ಉಪ ಚುನಾವಣೆ ನಡೆದಿದ್ದು, ಸಂಸರ್ಗಂಜ್ನಲ್ಲಿ 79.92%, ಜಂಗೀಪುರದಲ್ಲಿ 77.63% ಮತದಾನವಾಗಿದೆ.
ಇದಕ್ಕೆ ತದ್ವಿರುದ್ಧವಾಗಿ ಭವಾನಿಪುರದಲ್ಲಿ ಕೇವಲ 57.09% ಮತದಾರರು ಮತದಾನ ಮಾಡಿದ್ದಾರೆ.
ಏಪ್ರಿಲ್ 26ರ ಮತದಾನದಲ್ಲಿ ಬಿಜೆಪಿ 35.16% ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿತ್ತು. ಚುನಾವಣಾ ಅಭ್ಯರ್ಥಿಯಾಗಿ ನಟ ರುದ್ರನಿಲ್ ಘೋಷ್ ಅವರನ್ನು 28,719 ಮತಗಳಿಂದ ಟಿಎಂಸಿ ಸೋಲಿಸಿತ್ತು. ಈ ಬಾರಿ ಕಡಿಮೆ ಮತದಾನವಾಗಿದೆ.
'ಕಡಿಮೆ ಮತದಾನದ ನಡುವೆಯೂ ಮಮತಾ ಬ್ಯಾನರ್ಜಿ 50 ರಿಂದ 75 ಸಾವಿರದ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ' ಎಂದು ಸಾರಿಗೆ ಸಚಿವ ಫಿರ್ಹಾದ್ ಹಕೀಮ್ ಭರವಸೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಟಿಬ್ರೆವಾಲ ಕಣದಲ್ಲಿದ್ದು, 'ನಮ್ಮ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಶ್ರಮಿಸಿದ್ದಾರೆ. ಅವರ ಶ್ರಮಕ್ಕೆ ಫಲ ದೊರೆಯುವ ವಿಶ್ವಾಸವಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ.
ಭವಾನಿಪುರ ಕ್ಷೇತ್ರದಲ್ಲಿ 206389 ಮತದಾರರಿದ್ದಾರೆ. 20%ಗಿಂತ ಹೆಚ್ಚು ನಿವಾಸಿಗಳು ಮುಸ್ಲಿಮರಿದ್ದಾರೆ. ಸಿಖ್ಖರು ಹಾಗೂ ಬಂಗಾಳಿಗಳಲ್ಲ ಹಿಂದೂಗಳು 34% ಇದ್ದಾರೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಉಪ ಚುನಾವಣೆಯಿಂದ ಹಿಂದೆ ಸರಿದಿದೆ.
ಇಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಮಮತಾ ಬ್ಯಾನರ್ಜಿ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 21 ಸುತ್ತಿನ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.