ಶಾಲಾ-ಕಾಲೇಜು ತೆರೆಯುವ ಬಗ್ಗೆ ಮಮತಾ ಪರಿಶೀಲನಾ ಸಭೆ
ಕೊಲ್ಕತ್ತಾ, ಡಿಸೆಂಬರ್ 29: ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಕೆಲ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಓಮಿಕ್ರಾನ್ ಹಾಗೂ ಕೊರೊನಾ ವೈರಸ್ ಹೆಚ್ಚಾಗಿ ಹರಡುವ ಸಾಧ್ಯತೆ ಇದ್ದು ಶಾಲಾ ಕಾಲೇಜುಗಳನ್ನು ತೆರೆಯಲು ಯೋಚಿಸುತ್ತಿದೆ.
ಇಂದು ಗಂಗಾಸಾಗರದಲ್ಲಿ ನಡೆದ ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಕ್ಷಿಣ 24 ಪರಗಣ ಮತ್ತು ಗಂಗಾಸಾಗರಕ್ಕೆ 866 ಕೋಟಿ ರೂಪಾಯಿಗಳ 29 ಯೋಜನೆಗಳನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 'ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯಲು ಅನುಮತಿಸುವ ಬಗ್ಗೆ ನಿರ್ಧರಿಸಲು ಪ್ರತ್ಯೇಕ ಪರಿಶೀಲನಾ ಸಭೆಯನ್ನು ನಡೆಸಲಾಗುವುದು' ಎಂದು ಹೇಳಿದರು.
ವಿದ್ಯಾರ್ಥಿಗಳು ಹೆಚ್ಚು ಕೋವಿಡ್ ಸೋಂಕುಗಳಿಗೆ ಒಳಗಾಗುತ್ತಿರುವುದರಿಂದ ಈಗ ಶಾಲಾ-ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಿದರೆ ಮುಂದೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎನ್ನುವ ಭೀತಿ ಉದ್ಬವವಾಗಿದೆ. ಹೀಗಾಗಿ ಇದರ ಬಗ್ಗೆ ಪ್ರತ್ಯೇಕವಾಗಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಪಶ್ಚಿಮ ಬಂಗಾಳ ವಿದ್ಯಾರ್ಥಿಗಳಿಗೆ 10 ಲಕ್ಷ ಮಿತಿ ಇರುವ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಘೋಷಿಸಿದ್ದಾರೆ. ಹತ್ತು ವರ್ಷವಿದ್ದ ವಿದ್ಯಾರ್ಥಿಗಳಿಗೆ ಈ ಕಾರ್ಡ್ ಲಭ್ಯವಾಗಿದ್ದು, ಇದರಿಂದ ದೇಶ-ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಲ ಪಡೆಯಬಹುದಾಗಿದೆ. ಈ ಕಾರ್ಡ್ ನಿಂದ ಸಾಲ ಪಡೆಯಲು ಜಾಮೀನುದಾರರ ಅಗತ್ಯವಿಲ್ಲ, ರಾಜ್ಯವೇ ಜವಾಬ್ದಾರಿಯಾಗಲಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರಿಗೂ ಹೈಯರ್ ಎಜ್ಯುಕೇಷನ್ ಪಡೆಯೋದಕ್ಕೆ ಸಾಧ್ಯವಾಗಲ್ಲ. ಕೆಲವರಿಗೆ ತುಂಬಾ ಓದಬೇಕಂಬ ಆಸೆಯಿದ್ದರೂ, ಆರ್ಥಿಕ ಬಲವಿಲ್ಲದೇ ತಮ್ಮ ಕನಸನ್ನು ಕೈಬಿಡುತ್ತಾರೆ. ಅದರಲ್ಲೂ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಕಾಣುವ ಅದೆಷ್ಟೋ ಹೆಣ್ಣು ಮಕ್ಕಳು ಅರ್ಧಕ್ಕೆ ವಿದ್ಯಾಭ್ಯಾಸವನ್ನು ನಿಲ್ಲಿಸುತ್ತಾರೆ. ಅಂತ ವಿದ್ಯಾರ್ಥಿಗಳಿಗೆ ಈ ಯೋಜನೆ ಪ್ರಯೋಜನವಾಗಲಿದೆ.
ಇಲ್ಲಿಯವರೆಗೆ ಭಾರತದ 21 ರಾಜ್ಯಗಳು ಮತ್ತು ಯುಟಿಗಳಲ್ಲಿ ಕೊರೊನದ ರೂಪಾಂತರಿ ವೈರಸ್ ಓಮಿಕ್ರಾನ್ 781 ಪ್ರಕರಣಗಳನ್ನು ದಾಖಲಿಸಿದೆ. ಇದರಲ್ಲಿ 241 ಜನರು ಚೇತರಿಸಿಕೊಂಡಿದ್ದಾರೆ. ದೆಹಲಿಯಲ್ಲಿ 238 ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ 167, ಗುಜರಾತ್ 73, ಕೇರಳ 65 ಮತ್ತು ತೆಲಂಗಾಣ 62 ಪ್ರಕರಣಗಳು ದಾಖಲಾಗಿವೆ. ಪಶ್ಚಿಮ ಬಂಗಾಳದಲ್ಲಿ ಕೊರೊನಾವೈರಸ್ನ ಒಮಿಕ್ರಾನ್ ರೂಪಾಂತರದ 11 ಪ್ರಕರಣಗಳು ವರದಿಯಾಗಿವೆ. ಸೋಮವಾರ ಬಂಗಾಳದ ಕೋವಿಡ್ ಸಂಖ್ಯೆ 16,31,065 ಕ್ಕೆ ಏರಿಕೆಯಾಗಿದೆ. ಹೊಸದಾಗಿ 439 ಜನರು ಸೋಂಕಿಗೆ ಒಳಗಾಗಿದ್ದಾರೆ. 10 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 19,726 ಕ್ಕೆ ಏರಿಕೆಯಾಗಿದೆ.