ಉತ್ತರಪ್ರದೇಶ ಆಡಳಿತವನ್ನು ಹೊಗಳಿ ಮೋದಿ ಕಾಳೆಲೆದ ದೀದಿ
ಕೋಲ್ಕತ್ತಾ, ಜು. 16: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶ ಸರ್ಕಾರವು ಕೋವಿಡ್ -19 ರ ಎರಡನೇ ಅಲೆಯನ್ನು ನಿಭಾಯಿಸುತ್ತಿರುವ ರೀತಿಯನ್ನು ಮತ್ತು ಉತ್ತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ.
ಪ್ರಧಾನಿ ಮೋದಿ ವಾರಣಾಸಿಯ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿಕೋವಿಡ್ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಶ್ಲಾಘಿಸಿದ್ದರು.
'2 ನೇ ಕೋವಿಡ್ ಅಲೆಯನ್ನು ಯುಪಿ ನಿರ್ವಹಿಸಿದ ರೀತಿಗೆ ಬೇರೆ ಸರಿಸಾಟಿಯಿಲ್ಲ ': ಪ್ರಧಾನಿ ಮೋದಿ
"ಯುಪಿ ಎದ್ದುನಿಂತು ವೈರಸ್ ವಿರುದ್ದ ಸಮರ್ಥವಾಗಿ ಹೋರಾಡಿದೆ. ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದರೂ ಸಾಂಕ್ರಾಮಿಕ ರೋಗವನ್ನು ಉತ್ತರ ಪ್ರದೇಶವು ನಿಭಾಯಿಸಿದ ಮತ್ತು ನಿಯಂತ್ರಿಸಿದ ರೀತಿ ಪ್ರಶಂಸೆಗೆ ಅರ್ಹವಾಗಿದೆ. ಕೋವಿಡ್ ಎರಡನೇ ಅಲೆಯನ್ನು ಯುಪಿ ನಿರ್ವಹಿಸಿದ ರೀತಿಗೆ ಬೇರೆ ಸರಿಸಾಟಿಯಿಲ್ಲ," ಎಂದು ಪ್ರಧಾನಿ ಹೊಗಳಿದ್ದರು. ಹಾಗೆಯೇ ಯುಪಿ ಕಾನೂನು ವ್ಯವಸ್ಥೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಯುಪಿಯನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಯುಪಿ ರಾಜ್ಯವಾಗಿ "ಕಾನೂನಿನ ನಿಯಮದಿಂದ ಹೊರಗುಳಿದಿದೆ" ಎಂದು ಹೇಳಿದರು. ಹಾಗೆಯೇ ದೇಶವನ್ನೇ ಬೆಚ್ಚಿ ಬೀಳಿಸಿದ ಉನ್ನಾವೊ ಮತ್ತು ಹತ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖ ಮಾಡಿದರು.
"ಯುಪಿಯಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿಗೆ ಚೆನ್ನಾಗಿ ತಿಳಿದಿದೆ. ಕಾನೂನಿನ ಪಾಲನೆಯಿಲ್ಲ, ಯುಪಿ, ಇದು ಕಾನೂನಿನಿಂದ ಸಂಪೂರ್ಣವಾಗಿ ಹೊರಗುಳಿದಿದೆ. ಇನ್ನು ಕೋವಿಡ್ ವಿಚಾರಕ್ಕೆ ಬಂದರೆ ಅಲ್ಲಿನ ಕೋವಿಡ್ ಪ್ರಕರಣಗಳ ದಾಖಲೆ ಏನು? ಎಷ್ಟು ಜನರು ಮೃತಪಟ್ಟಿದ್ದಾರೆ? ನಮಗೆ ಯಾವುದೇ ದಾಖಲೆಗಳನ್ನು ತೋರಿಸಬಹುದೇ? ಅಥವಾ ಯುಪಿಯು ಭಾರತ ಸರ್ಕಾರದ ಮಗುವಾಗಿರುವ ಕಾರಣಕ್ಕೆ ಅದು ಸುರಕ್ಷಿತವೇ?," ಎಂದು ಪ್ರಶ್ನಿಸಿದ್ದಾರೆ.
ಇಷ್ಟಕ್ಕೆ ನಿಲ್ಲಿಸದೆ ವಾಗ್ದಾಳಿ ಮುಂದುವರಿಸಿದ ದೀದಿ, "ಗಂಗಾ ನದಿಯ ಮೂಲಕ ಮೃತ ದೇಹಗಳು ಹೇಗೆ ಬರುತ್ತಿವೆ? ಮೃತ ದೇಹಗಳನ್ನು ಗಂಗಾ ಮೂಲಕ ಕಳುಹಿಸಿದ್ದಾರೆ. ನಮ್ಮ ಪವಿತ್ರ ಗಂಗಾ, ಎಲ್ಲಾ ಮೃತ ದೇಹಗಳನ್ನು ಒಯ್ಯುತ್ತಾಳೆ. ಅದು ಯುಪಿ ಮೂಲಕ ಬಿಹಾರಕ್ಕೆ ಬಂಗಾಳಕ್ಕೆ ಬರುತ್ತಿದೆ," ಎಂದು ಆರೋಪಿಸಿದ್ದಾರೆ.
ರಾಜಕೀಯ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಮಮತಾ ಬ್ಯಾನರ್ಜಿ: ಬಿಜೆಪಿ ಪಲ್ಟಿ!
"ಉತ್ತರ ಪ್ರದೇಶದಿಂದ ಗಂಗಾ ಮೂಲಕ ತೇಲಿ ಬಂದ ಎಂಟು ಶವಗಳನ್ನು ಬಂಗಾಳ ಸರ್ಕಾರ ವಶಪಡಿಸಿಕೊಂಡಿದೆ. ಅವರ ಹಣೆಬರಹ ತಿಳಿದಿಲ್ಲದ ಅನೇಕರು ಇದ್ದಾರೆ," ಎಂದು ಕಿಡಿಕಾರಿದ್ದಾರೆ. "ಯುಪಿ ಸರ್ಕಾರವು ಶವಗಳಿಗೆ ಅಗೌರವ ತೋರಿದೆ" ಎಂದು ಈ ಸಂದರ್ಭದಲ್ಲೇ ದೂರಿದ ದೀದಿ, "ಶವಗಳನ್ನು ದಹನ ಮಾಡುವ ಬದಲು ಅವುಗಳನ್ನು ನದಿಯಲ್ಲಿ ಎಸೆಯಲಾಗಿದೆ. ಈಗ ಮೋದಿ ಆ ರಾಜ್ಯದ ಆಡಳಿತವನ್ನು ಹೊಗಳಿಸಿದ್ದಾರೆ," ಎಂದು ಟಾಂಗ್ ನೀಡಿದ್ದಾರೆ.
ಇನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡುವುದಾಗಿ ಘೋಷಿಸಿದರು. ತಮ್ಮ ಭೇಟಿಯ ದಿನಾಂಕವನ್ನು ಹೇಳದಿದ್ದರೂ, ಸಂಸತ್ತಿನ ಮಾನ್ಸೂನ್ ಅಧಿವೇಶನ ಪೂರ್ಣಗೊಳ್ಳಲಿರುವ ಸಂದರ್ಭ ಜುಲೈ 24 ಮತ್ತು 30 ರ ನಡುವೆ ಮಮತಾ ದೆಹಲಿಯಲ್ಲಿ ಇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಮಯ ಸಿಕ್ಕರೆ ಮಮತಾ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿಯನ್ನೂ ಭೇಟಿಯಾಗಲಿದ್ದಾರೆ. ಆದರೆ ನಾವು ಯಾರ ಭೇಟಿಗೆ ಅವಕಾಶ ಪಡೆಯುತ್ತೇವೆ ಎಂದು ನೋಡೋಣ ಎಂದು ಹೇಳಿದ್ದಾರೆ.
ಇನ್ನು ಮಮತಾ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಮತ್ತು ಎಎಪಿಯ ಅರವಿಂದ್ ಕೇಜ್ರಿವಾಲ್ರನ್ನು ಭೇಟಿಯಾಗಲಿದ್ದಾರೆ. ಈ ಸಭೆಗಳು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಉಪಸ್ಥಿತಿಯಲ್ಲಿ ನಡೆಯಲಿದ್ದು, ಚುನಾವಣಾ ಚಾಣಕ್ಯ, ಸಲಹೆಗಾರ ಪ್ರಶಾಂತ್ ಕಿಶೋರ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)