ಅಗ್ನಿಪಥ್ ಮೂಲಕ ಬಿಜೆಪಿಗೆ ಸಶಸ್ತ್ರ ಕಾರ್ಯಕರ್ತರ ಪಡೆ: ಮಮತಾ ಬ್ಯಾನರ್ಜಿ
ಕೋಲ್ಕತಾ, ಜೂನ್ 20: ಆರ್ಎಸ್ಎಸ್ ಯುವಕರನ್ನು ಸೇನೆಗೆ ತುಂಬುವ ಹುನ್ನಾರವೇ 'ಅಗ್ನಿಪಥ್' ಯೋಜನೆ ಎಂದು ಮೊನ್ನೆ ಶನಿವಾರದಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಮಮತಾ ಬ್ಯಾನರ್ಜಿ ಅನುಮೋದಿಸಿದ್ದಾರೆ. ಅಗ್ನಿಪಥ್ ಯೋಜನೆ ಮೂಲಕ ಬಿಜೆಪಿಯವರು ತಮ್ಮದೇ ಸಶಸ್ತ್ರ ಕಾರ್ಯತಕರ್ತರ ಪಡೆಯನ್ನು ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಆರೋಪ ಮಾಡಿದ್ದಾರೆ.
ನವಯುವಕರನ್ನು ಸೇನೆಗೆ ಅಲ್ಪಾವಧಿ ಸೇವೆಯಾಗಿ ನೇಮಕಾತಿ ಮಾಡಿಕೊಳ್ಳುವ ಯೋಜನೆಯೇ ಅಗ್ನಿಪಥ್. 17.5ರಿಂದ 21 ವರ್ಷ ವಯೋಮಾನದ ಯುವಕರನ್ನು ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳಿಗೆ ಅಗ್ನಿವೀರರಾಗಿ ನೇಮಕ ಮಾಡಿಕೊಳ್ಳುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಈ ಸಂಬಂಧ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಮತ್ತು ತತ್ಪರಿಣಾಮವಾಗಿ ಹಿಂಸಾಚಾರಗಳು ನಡೆದಿವೆ.
ರಾಷ್ಟ್ರಪತಿ ಚುನಾವಣೆ : ಮಮತಾ ಬ್ಯಾನರ್ಜಿ ಸಭೆಯತ್ತ ಎಲ್ಲರ ಚಿತ್ತ
ಅಗ್ನಿಪಥ್ ಯೋಜನೆಯಿಂದಾಗಿ ನಿಯಮಿತ ಯೋಧರ ಆಯ್ಕೆ ಪ್ರಕ್ರಿಯೆ ಕೈಬಿಡಲಾಗುತ್ತದೆ. ನಾಲ್ಕು ವರ್ಷಗಳ ಅವಧಿ ಬಳಿಕ ಕೆಲಸ ಇಲ್ಲದೇ, ಜೀವನದಲ್ಲಿ ಭದ್ರತೆ ಇಲ್ಲದೆ, ಪಿಂಚಣಿ ಇಲ್ಲದೇ ನಿರುದ್ಯೋಗಿಗಳಾಗಿ ಉಳಿದುಹೋಗಬಹುದು ಎಂಬುದು ಸೇನಾ ಉದ್ಯೋಗಾಕಾಂಕ್ಷಿ ಯುವಕರ ಆತಂಕ. ಹೀಗಾಗಿ ಪ್ರತಿಭಟನೆಗಳು ನಡೆಯುತ್ತಿವೆ.
ಅಗ್ನಿವೀರರಿಗೆ ವಾಚ್ಮನ್ ಕೆಲಸ
ನಾಲ್ಕು ವರ್ಷಗಳ ಸೇವೆ ಬಳಿಕ ಸೇನೆಯಿಂದ ಹೊರಬರುವ ಅಗ್ನಿವೀರರು ಗಾರ್ಡ್ ಇತ್ಯಾದಿ ಕೆಲಸಗಳನ್ನು ಮಾಡಬಹುದು ಎಂದು ಬಿಜೆಪಿಯ ಕೆಲ ನಾಯಕರು ಹೇಳಿಕೆ ಕೊಟ್ಟಿದ್ದಿತ್ತು. ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಅಗ್ನಿವೀರರನ್ನು ಬಿಜೆಪಿ ತನ್ನ ಪಕ್ಷ ಕಚೇರಿಗಳಲ್ಲಿ ವಾಚ್ಮೆನ್ಗಳಾಗಿ ನೇಮಕ ಮಾಡಿಕೊಳ್ಳುವ ಉದ್ದೇಶದಲ್ಲಿದ್ದಂತಿದೆ ಎಂದು ಲೇವಡಿ ಮಾಡಿದ್ದಾರೆ.
ಆರ್ಎಸ್ಎಸ್ ಯುವಕರನ್ನು ಸೇನೆಗೆ ತುಂಬುವ ಹುನ್ನಾರವೇ 'ಅಗ್ನಿಪಥ್' : ಎಚ್.ಡಿ.ಕುಮಾರಸ್ವಾಮಿ
ಬಿಜೆಪಿಯ ಸಶಸ್ತ್ರ ಕಾರ್ಯಕರ್ತರ ಪಡೆ
"ಅಗ್ನಿಪಥ್ ಯೋಜನೆ ಮೂಲಕ ಬಿಜೆಪಿ ತನ್ನದೇ ಸಶಸ್ತ್ರ ಕಾರ್ಯಕರ್ತರ ಪಡೆಯನ್ನು ರಚಿಸಲು ಯತ್ನಿಸುತ್ತಿದೆ. ಈ ಅಗ್ನವೀರರು ನಾಲ್ಕು ವರ್ಷಗಳ ಬಳಿಕ ಏನು ತಾನೆ ಮಾಡುತ್ತಾರೆ? ಈ ಯುವಕರ ಕೈಗೆ ಶಸ್ತ್ರಗಳನ್ನು ಕೊಟ್ಟು ಕೂರಿಸಬೇಕೆಂದಿದೆ" ಎಂದು ಕೋಲ್ಕತಾ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ಗುಡುಗಿದ್ಧಾರೆ.
ಉದ್ಯೋಗ ಕೊಡುತ್ತೇನೆಂದು ಹೇಳಿ ವಂಚನೆ
2024ರ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಅಗ್ನಿಪಥ್ ಮುಂತಾದ ಯೋಜನೆಗಳ ಮೂಲಕ ಬಿಜೆಪಿ ಜನಸಮೂಹವನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಟೀಕಿಸಿದ್ದಾರೆ.
"ಪ್ರತೀ ವರ್ಷವೂ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅವರು ಭರವಸೆ ನೀಡಿದ್ದರು. ಈಗ ಇಂಥ ಯೋಜನೆಯ ಹೆಸರಿನಲ್ಲಿ ದೇಶದ ಜನರನ್ನು ಏಮಾರಿಸುತ್ತಿದ್ಧಾರೆ" ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಡೆದ ಈ ಮಾತಿನ ಯುದ್ಧದಲ್ಲಿ ಮಮತಾ ಬ್ಯಾನರ್ಜಿ ಮಾತಿಗೆ ಸಿಟ್ಟಾದ ಬಿಜೆಪಿ ಶಾಸಕರು ಪ್ರತಿಭಟನೆಯಾಗಿ ಸದನದಿಂದ ಹೊರನಡೆದರು.
ಹೆಚ್ಡಿಕೆ ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜೂನ್ 19ರಂದು ಚನ್ನಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅಗ್ನಿಪಥ್ ಯೋಜನೆ ಆರ್ಎಸ್ಎಸ್ನ ಹುನ್ನಾರ ಎಂದು ಆರೋಪ ಮಾಡಿದ್ದರು. ಸೇನೆಯ ಮೇಲೆ ಆರ್ಎಸ್ಎಸ್ನ ಹಿಡಿತ ಹೊಂದಲು ಈ ಯೋಜನೆ ರೂಪಿಸಲಾಗಿದೆ ಎಂದಿದ್ದರು.
"ಹಿಟ್ಲರ್ನ ನಾಜಿ ಆಡಳಿತ ಇದ್ದ ವೇಳೆಯಲ್ಲೇ ಆರ್ ಎಸ್ ಎಸ್ ಹುಟ್ಟಿಕೊಂಡಿತ್ತು. ನಾಜಿಯವರ ರೀತಿ ಸೇನೆಯಲ್ಲಿ ಹಿಡಿತ ಸಾಧಿಸಲು ಆರ್ಎಸ್ಎಸ್ನವರು ಹೊರಟಿದ್ದಾರೆ. ಸೇನೆಗೆ ಆರ್ಎಸ್ಎಸ್ನವರನ್ನು ತುಂಬಲು ಚಿತಾವಣಿ ಮಾಡಲಾಗಿದೆ. ಇದು ಆರ್ಎಸ್ಎಸ್ನವರ ಅಗ್ನಿಪಥ್. ಹತ್ತು ಲಕ್ಷ ಆರ್ಎಸ್ಎಸ್ ಕಾರ್ಯಕರ್ತರನ್ನು ಅಯ್ಕೆ ಮಾಡಿ ನಾಲ್ಕು ವರ್ಷಗಳ ನಂತರ ಶೇ. 25ರಷ್ಟು ಯುವಕರನ್ನು ಉಳಿಸಿಕೊಂಡು ಸೇನೆಯನ್ನು ಸಂಘಮಯ ಮಾಡಲಾಗುತ್ತದೆ. ಉಳಿದ ಶೇ ೭೫ರಷ್ಟು ಯುವಕರನ್ನು ದೇಶಕ್ಕೆ ಹಂಚಿ ನಾಜಿ ಸಂಸ್ಕೃತಿ ಹರಡಲು ಬಿಜೆಪಿ ಹೊರಟಿದೆ" ಎಂದು ಕುಮಾರಸ್ವಾಮಿ ಬಹಳ ಗಂಭೀರವಾದ ಆಪಾದನೆ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)