ಸಂಸ್ಕೃತದಲ್ಲಿ ಮಂತ್ರ ಹೇಳೋಣ ಬನ್ನಿ: ಮೋದಿ, ಅಮಿತ್ ಶಾಗೆ ಮಮತಾ ಸವಾಲು
ಕೋಲ್ಕತಾ, ಮಾರ್ಚ್ 20: ಸಂಸ್ಕೃತದಲ್ಲಿ ಬಹಿರಂಗ ಮಂತ್ರ ಪಠಣ ಮಾಡುವ ಸವಾಲನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಒಡ್ಡಿದ್ದಾರೆ.
'ಪೂಜೆ ಎಂದರೆ ಕೇವಲ ತಿಲಕ ಇಡುವುದಲ್ಲ ಅಮಿತ್ (ಶಾ) ಬಾಬು ಮತ್ತು ಮೋದಿ ಬಾಬು (ನರೇಂದ್ರ ಮೋದಿ). ನನ್ನೊಂದಿಗೆ ಮಂತ್ರಗಳ ಸ್ಪರ್ಧೆ ಮಾಡಿ ಬನ್ನಿ. ಯಾರಿಗೆ ಸಂಸ್ಕೃತದ ಹೆಚ್ಚು ಮಂತ್ರಗಳು ತಿಳಿದಿವೆಯೋ ನೋಡೋಣ' ಎಂದು ಮಮತಾ ಕೋಲ್ಕತಾದಲ್ಲಿ ನಡೆದ ಸಮಾವೇಶದಲ್ಲಿ ಬಹಿರಂಗ ಸವಾಲು ಹಾಕಿದರು.
48 ಗಂಟೆಗಳ ಧರಣಿ ಆರಂಭಿಸಿದ ಟಿಎಂಸಿ, ನಾಟಕ ಎಂದ ಬಿಜೆಪಿ
ಮಮತಾ ಅವರ ಧರ್ಮದ ಬಗ್ಗೆ ಬಿಜೆಪಿ ಪ್ರಶ್ನೆ ಮಾಡಿದ್ದಕ್ಕಾಗಿ ಅವರು ಈ ಸವಾಲು ನೀಡಿದ್ದಾರೆ.
ಮಮತಾಗೆ ಭಾರಿ ಆಘಾತ: ಬಿಜೆಪಿ ಸೇರಿದ ಟಿಎಂಸಿ ಪ್ರಭಾವಿ ಮುಖಂಡ
'ಕೆಲವು ಜನರು ನನ್ನ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮಾನವೀಯತೆಯೇ ನನ್ನ ಧರ್ಮ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಧರ್ಮದ ಬಗ್ಗೆ ಬೇರೆಯವರು ನನಗೆ ಉಪದೇಶ ಮಾಡುವುದನ್ನು ನಾನು ಕೇಳುವ ಅಗತ್ಯವಿಲ್ಲ. ಅವರು (ಬಿಜೆಪಿ) ನನ್ನ ಕಡೆಗೆ ಬೊಟ್ಟು ಮಾಡಿ, ಬಂಗಾಳದಲ್ಲಿ ನಾನು ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಎಷ್ಟು ದೇವಸ್ಥಾನಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಅವರು ಹೋಗಿ ನೋಡಲಿ ಎಂದು ಆಗ್ರಹಿಸಿದರು.
ಯಾವುದೇ ಹೆಸರನ್ನು ಉಲ್ಲೇಖಿಸದ ಮಮತಾ, ಒಂದು ವರ್ಗದ ಜನರು ರಕ್ತದೊಂದಿಗೆ ಹೋಳಿ ಆಡುತ್ತಿದ್ದಾರೆ ಎಂದು ಆರೋಪಿಸಿದರು.
ತೃಣಮೂಲ ಕಾಂಗ್ರೆಸ್ಸಿನ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಮಮತಾ ಬ್ಯಾನರ್ಜಿ
ಬಣ್ಣಗಳೊಂದಿಗೆ ಹೋಳಿ ಮತ್ತು ಪರಿಶುದ್ಧ ಮನಸ್ಸಿನೊಂದಿಗೆ ಆಡುವುದನ್ನು ನಾನು ನಂಬುತ್ತೇನೆ. ಆದರೆ, ಒಂದು ವರ್ಗದ ಜನರು ಇತರರ ರಕ್ತದೊಂದಿಗೆ ಹೋಳಿ ಆಡುವುದನ್ನು ಬಯಸುತ್ತಾರೆ. ಬಿಜೆಪಿಯಂತಹ ಒಡೆಯುವ ಶಕ್ತಿಯಿಂದ ಕೋಮು ಸೌಹಾರ್ದದ ಅರ್ಥವನ್ನು ನಾನು ಕಲಿಯಬೇಕಾಗಿಲ್ಲ ಎಂದು ಖಾರವಾಗಿ ನುಡಿದರು.