ಮಮತಾ ವಿರುದ್ಧ ಕಣಕ್ಕಿಳಿಯಲು ಸಿದ್ಧ ಎಂದ ಆಪ್ತ, ದೀದಿಗೆ ಶಾಕ್!
ಕೋಲ್ಕತ್ತಾ, ಆಗಸ್ಟ್ 21: ಲೋಕಸಭೆ ಚುನಾವಣೆಯ ನಂತರ ಪಶ್ಚಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಒಂದಿಲ್ಲೊಂದು ಆಘಾತ ಎದುರಾಗುತ್ತಲೇ ಇದೆ. ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಆಘಾತಕಾರಿ ಸೋಲುಗಳನ್ನು ಕಂಡ ನಂತರ ದೀದಿ ಅವರ ಆಪ್ತ ವಲಯಲ್ಲಿ ಕಾಣಿಸಿಕೊಂಡ ಹಲವು ನಾಯಕರೇ ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ.
ಹೀಗೆ ಬಿಜೆಪಿ ಸೇರಿದ್ದ ಮಮತಾ ಬ್ಯಾನರ್ಜಿ ಅವರ ಶಿಷ್ಯ, ಆಪ್ತ ಸೋವನ್ ಚಟರ್ಜಿ ತಾವು 2021 ರ ಪಶ್ಚಿಮ ಬಂಗಾಳವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ವಿರುದ್ಧವೇ ಕಣಕ್ಕಿಳಿಯಲು ಸಿದ್ಧ ಎನ್ನುವ ಮೂಲಕ ದೀದಿಗೆ ಭಾರೀ ಆಘಾತ ನೀಡಿದ್ದಾರೆ.
Recommended Video
'ದೀದಿ ಕೆ ಬೊಲೋ' ಅಭಿಯಾನದಲ್ಲಿ ಟಿಎಂಸಿ ನಾಯಕರಿಗೆ ಶೇಮ್ ಶೇಮ್!
ಸೋವನ್ ಚಟರ್ಜಿ ಹಲವು ವರ್ಷಗಳಿಮದಲೂ ಟಿ ಎಂಸಿಯಲ್ಲಿ ಮತ್ತು ದೀದಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದವರು. ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಅವರ ಹಲವು ಗುಟ್ಟುಗಳಲನ್ನು ಬಲ್ಲವರು, ಅವರ ರಾಜಕೀಯ ತಂತ್ರಗಾರಿಕೆಯನ್ನು ಹತ್ತಿರದಿಂದ ಕಂಡವರು. ಈ ಎಲ್ಲವನ್ನೂ ಬಲ್ಲ ಬಿಜೆಪಿ ಸೋವನ್ ಅವರನ್ನು ಸೆಳೆದು, ಪಶ್ಚಿ ಬಂಗಾಳದಲ್ಲಿ ಕಮಲ ಅರಳಿಸಲು ಏನೆಲ್ಲ ಪ್ರಯತ್ನ ಮಾಡಬಹುದೋ ಅವನ್ನೆಲ್ಲ ಮಾಡಲು ಮುಂದಾಗಿದೆ.
ಮೊದಲಿನಿಂದಲೂ ಎಡಪಕ್ಷ ಮತ್ತು ಟಿಎಂಸಿ ಭದ್ರಕೋಟೆಯಾಗಿದ್ದ ಕೋಲ್ಕತ್ತಾದಲ್ಲಿ ಗಟ್ಟಿ ಹೆಜ್ಜೆ ಊರುವ ಪ್ರಯತ್ನವನ್ನು ಬಿಜೆಪಿ ಮಾಡಿರಲೇ ಇಲ್ಲ. ಆದರೆ ಲೋಕಸಭೆ ಚುನಾವಣೆಯಲ್ಲಿ ಮತದಾರ ಬಜೆಪಿಯತ್ತ ವಾಲಿದ್ದು ಮತ್ತು ಅಚ್ಚರಿಯ ರೀತಿಯಲ್ಲಿ 18(42) ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಮತದಾರ ಬಿಜಿಯತ್ತ ಒಲಿಯಬಹುದು ಎಂಬ ಭರವಸೆಯನ್ನು ಹೆಚ್ಚಿಸಿದೆ. ಆದ ಕಾರಣ ಸೋವನ್ ಸೇರಿದಂತೆ ಟಿಎಂಸಿಯ ಹಲವು ಪ್ರಭಾವಿ ನಾಯಕರನ್ನು ಬಿಜೆಪಿ ಯಶಸ್ವಿಯಾಗಿ ಸೆಳೆದಿದೆ.
ಮಮತಾ ವಿರುದ್ಧ ಸ್ಪರ್ಧೆಗೂ ಸಿದ್ಧ!
"ನಾನು ಟಿಎಂಸಿಯಲ್ಲಿದ್ದಾಗ ಆ ಪಕ್ಷದ ನಿಷ್ಠಾವಂತ ಸೈನಿಕನಾಗಿದ್ದೆ. ಆದರೆ ಈಗ ನಾನು ಬಿಜೆಪಿಯಲ್ಲಿದ್ದೇನೆ. ಆದ್ದರಿಂದ ಬಿಜೆಪಿಯ ನಿಷ್ಠಾವಂತ ಸೈನಿಕನಾಗಿರುತ್ತೇನೆ. ನನಗೆ ನನ್ನ ಪಕ್ಷ ಏನು ಮಾಡುವುದಕ್ಕೆ ಹೇಳುತ್ತದೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಅಕಸ್ಮಾತ್ ಪಕ್ಷ ಮಮತಾ ಬ್ಯಾನರ್ಜಿ ಅವರ ವಿರುದ್ಧ ಚುನಾವಣೆಗೆ ನಿಲ್ಲು ಎಂದರೆ ಅದಕ್ಕೂ ನಾನು ಸಿದ್ಧ" ಎಂದು ಚಟರ್ಜಿ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ, ಚಟರ್ಜಿ ಬೆಹಲಾ ಪುರ್ಬಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಪ್ರಶಾಂತ್ ಕಿಶೋರ್ ನೇಮಕದ ಬಗ್ಗೆ
ಪ್ರಶಾಂತ್ ಕಿಶೋರ್ ಅವರನ್ನು ಚುನಾವಣಾ ತಂತ್ರಗಾರರನ್ನಾಗಿ ನೇಮಿಸಿರುವ ಟಿಎಂಸಿ ನಡೆಯನ್ನು ಕಟುವಾಗಿ ಟೀಕಿಸಿದ ಚಟರ್ಜಿ, "ಟಿಎಂಸಿ ಒಂದು ಮುಳುಗುತ್ತಿರುವ ಹಡಗು. ಅದನ್ನು ತಪ್ಪಿಸಲು ಕಾಂಟ್ರಾಕ್ಟರ್ ನನ್ನು ನೇಮಿಸಿಕೊಂಡರೆ ಮುಳುಗುತ್ತಿರುವ ಹಡಗನ್ನು ಉಳಿಸಲು ಸಾಧ್ಯವಿಲ್ಲ" ಎಂದರು.
ಮಮತಾ ಬ್ಯಾನರ್ಜಿಯ ಮತ್ತೊಬ್ಬ ಆಪ್ತನನ್ನು ಸೆಳೆದ ಬಿಜೆಪಿ
ಟಿಎಂಸಿ ಪ್ರತಿಕ್ರಿಯೆ
ಸೋವನ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಟಿಎಂಸಿ ನಾಯಕರಾದ ಪಾರ್ಥ ಚಟರ್ಜಿ, "ಸೋವನ್ ಅವರ ರಾಜಕೀಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಮತಾ ಬ್ಯಾನರ್ಜಿ ಅವರ ಕೊಡುಗೆ ಎಷ್ಟಿದೆ ಎಂಬುದು ಅವರಿಗೆ ನೆನಪಿಲ್ಲ ಅನ್ನಿಸುತ್ತೆ. ಪಕ್ಷದ ಮೇಲೆ ಆರೋಪ ಮಾಡುವುದನ್ನು ನಾವು ಕ್ಷಮಿಸುವುದಿಲ್ಲ" ಎಂದಿದ್ದಾರೆ.
ಭಾರೀ ಆಘಾತ ನೀಡಿದ ಸೋವನ್
ಮಮತಾ ಬ್ಯಾನರ್ಜಿ ಅವರು ಸೋವನ್ ಅವರ ಮೇಲೆ ಸಾಕಷ್ಟು ವಿಶ್ವಾಸ ಹೊಂದಿದ್ದ ಕಾರಣ ಅವರಿಗೆ ತಮ್ಮ ಸರ್ಕಾರದಲ್ಲಿ ಸಾಕಷ್ಟು ಮಹತ್ವದ ಹುದ್ದೆಗಳನ್ನು ನೀಡಿದ್ದರು. ಆದರೆ ಆಗಸ್ಟ್ 14 ರಂದು ಅವರು ಬಿಜೆಪಿ ಸೇರುವ ಮೂಲಕ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಆಘಾತ ನೀಡಿದ್ದಾರೆ.