ಪಶ್ಚಿಮ ಬಂಗಾಳದಲ್ಲಿ ವಿಜಯ ಪತಾಕೆ; ವೈರಲ್ ಆಯ್ತು ಮಮತಾ ಹಳೇ ಫೋಟೊ
ಕೋಲ್ಕತ್ತಾ, ಮೇ 3: ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿಯ ಕಣವಾಗಿದ್ದ ಪಶ್ಚಿಮ ಬಂಗಾಳ ನೆಲದಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಮಮತಾಗೆ ಪ್ರತಿಷ್ಠೆಯ ಕಣ ಎಂದೇ ಕರೆಸಿಕೊಂಡಿದ್ದ ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು 1956 ಮತಗಳ ಅಂತರದಲ್ಲಿ ಮಮತಾ ಬ್ಯಾನರ್ಜಿ ಸೋತಿದ್ದರೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಟಿಎಂಸಿ ಬಲವನ್ನು ಕಡೆಗಣಿಸುವಂತಿಲ್ಲ. ಬಹುಮತಗಳ ಅಂತರದಲ್ಲಿ ಬಿಜೆಪಿ ವಿರುದ್ಧ ಗೆಲುವು ಪಡೆದುಕೊಂಡಿರುವುದಕ್ಕೆ ದೇಶಾದ್ಯಂತ ಮಮತಾ ಬ್ಯಾನರ್ಜಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ವಿರೋಧಿ ಪಾಳಯಕ್ಕೆ ನುಗ್ಗಿ ಹೋರಾಡಿ ಗೆದ್ದ ಮಮತಾ ಬ್ಯಾನರ್ಜಿ
ಈ ಗೆಲುವಿನ ಜೊತೆಜೊತೆಗೇ ಮಮತಾ ಬ್ಯಾನರ್ಜಿ ಹಳೇ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 1980ರ ಅವಧಿಯ ಈ ಚಿತ್ರದೊಂದಿಗೆ ಮಮತಾ ಬ್ಯಾನರ್ಜಿಗೆ ಶುಭಾಶಯ ಹರಿದುಬರುತ್ತಿವೆ. ಮುಂದೆ ಓದಿ...
ದೀದಿ ಹಳೆಯ ಫೋಟೊ ಹಂಚಿಕೊಂಡ ಇಂಡಿಯನ್ ಹಿಸ್ಟರಿ ಪಿಕ್ಸ್
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬೆನ್ನಲ್ಲೇ ಇಂಡಿಯನ್ ಹಿಸ್ಟರಿ ಪಿಕ್ಸ್, ಟ್ವಿಟ್ಟರ್ನಲ್ಲಿ ಮಮತಾ ಬ್ಯಾನರ್ಜಿಯ ಹಳೆಯ ಫೋಟೊವೊಂದನ್ನು ಹಂಚಿಕೊಂಡಿದ್ದು, ಈ ಫೋಟೊ ವೈರಲ್ ಆಗಿದೆ. ಮಮತಾ ಬ್ಯಾನರ್ಜಿ ನಿಜಕ್ಕೂ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹಲವರು ಹಾಡಿ ಹೊಗಳಿದ್ದಾರೆ. ಇಂದಿರಾಗಾಂಧಿ ನಂತರ ಭಾರತ ಕಂಡ ಬಲಿಷ್ಠ ನಾಯಕಿ ಮಮತಾ ಬ್ಯಾನರ್ಜಿ ಎಂದು ಕಮೆಂಟ್ ಮಾಡಿದ್ದಾರೆ.
"ಇತಿಹಾಸ ಸೃಷ್ಟಿಸಿದ ಮಮತಾ ಬ್ಯಾನರ್ಜಿ"
1980ರಲ್ಲಿ ಟೈಪ್ ರೈಟರ್ ಆಗಿದ್ದ ಮಮತಾ ಬ್ಯಾನರ್ಜಿ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಂಡವರು. ರಾಜೀವ್ ಗಾಂಧಿಯವರು ಮಮತಾ ಬ್ಯಾನರ್ಜಿಯನ್ನು ಆರಿಸಿದರು. 1984ರಲ್ಲಿ ಮಮತಾ ಬ್ಯಾನರ್ಜಿ ಲೋಕಸಭಾ ಚುನಾವಣೆಗೆ ನಿಂತರು. ಅಂದು ಅಲ್ಲಿ ಗೆಲುವು ಸಾಧಿಸಿದರು. ಆನಂತರ ನಡೆದಿದ್ದೆಲ್ಲವೂ ಇತಿಹಾಸವೇ. ಈಗಲೂ ಮತ್ತೊಂದು ಇತಿಹಾಸ ಸೃಷ್ಟಿಯಾಗಿದೆ ಎಂದು ಎಂದು ವಿಶ್ಲೇಷಕ ವಿವೇಕ್ ಸೇನ್ ಗುಪ್ತಾ ಎಂಬುವರು ದೀದಿಯನ್ನು ಕೊಂಡಾಡಿದ್ದಾರೆ.
ಬಂಗಾಳ ಇಂದು ದೇಶವನ್ನು ರಕ್ಷಿಸಿದೆ: ಮಮತಾ ಬ್ಯಾನರ್ಜಿ
|
"ಇಂಥ ಎಷ್ಟೋ ಕಠಿಣ ಸವಾಲುಗಳನ್ನು ದೀದಿ ಎದುರಿಸಿದ್ದಾರೆ"
ಈ ಬಾರಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ಎಲ್ಲವನ್ನೂ ಸಾಬೀತುಪಡಿಸಿದೆ. ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಮಮತಾ ಬ್ಯಾನರ್ಜಿ ಇಂಥ ಎಷ್ಟೋ ಕಠಿಣ ಹಣಾಹಣಿಗಳನ್ನು ಕಂಡಿದ್ದಾರೆ. ಅವರು ಎಂದಿಗೂ ಇತಿಹಾಸ ನಿರ್ಮಿಸುವವರೇ ಎಂದು ರಾಜಕೀಯ ವಿಶ್ಲೇಷಕ ಹಾಗೂ "ದೀದಿ; ದಿ ಅನ್ಟೋಲ್ಡ್ ಮಮತಾ ಬ್ಯಾನರ್ಜಿ" ಪುಸ್ತಕದ ಲೇಖಕ ಶುತಪಾ ಪೌಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video
ದೀದಿಗೆ ಕಠಿಣ ಸವಾಲಾಗಿದ್ದ ಚುನಾವಣೆ
ಮಮತಾ ಬ್ಯಾನರ್ಜಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಕಠಿಣ ಸವಾಲೇ ಆಗಿತ್ತು. ಒಂದೆಡೆ ಬಿಜೆಪಿಯಿಂದ ಪ್ರಬಲ ಸ್ಪರ್ಧೆ, ಮತ್ತೊಂದೆಡೆ ಕೊರೊನಾ ಎರಡನೇ ಅಲೆ. ಈ ಎಲ್ಲಾ ಸವಾಲುಗಳನ್ನು ಮೀರಿ ತೃಣಮೂಲ ಕಾಂಗ್ರೆಸ್ ಬಿಜೆಪಿ ವಿರುದ್ಧ ಗೆಲುವು ಸಾಧಿಸಿರುವುದು ಟಿಎಂಸಿ ಪಾಲಿಗೆ ಚಿಕ್ಕ ವಿಷಯವಾಗಿರಲಿಲ್ಲ. 294 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 213 ಕ್ಷೇತ್ರಗಳು ತೃಣಮೂಲ ಕಾಂಗ್ರೆಸ್ ಪಾಲಾದರೆ, ಬಿಜೆಪಿ ತೆಕ್ಕೆಗೆ 77 ಕ್ಷೇತ್ರಗಳು ಒಲಿದಿವೆ.