2 ಗಂಟೆಯೊಳಗೆ ಸೇವೆಗೆ ಮರಳಿದರೆ ಸರಿ, ಇಲ್ಲಾಂದ್ರೆ... ವೈದ್ಯರಿಗೆ ಮಮತಾ ವಾರ್ನಿಂಗ್
ಕೋಲ್ಕತ್ತಾ, ಜೂನ್ 13: "2 ಗಂಟೆಯ ಒಳಗೆ ಪ್ರತಿಭಟನೆಯನ್ನು ನಿಲ್ಲಿಸದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನಾನಿರತ ವೈದ್ಯರಿಗೆ ಎಚ್ಚರಿಕೆ ನೀಡಿದ್ದಾರೆ.
ಸಹೋದ್ಯೋಗಿ ವೈದ್ಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ, ಕಳೆದ ಮೂರು ದಿನಗಳಿಂದ ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆಗೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ರೋಗಿಯೊಬ್ಬರ ಸಾವಿಗೆ ಕಿರಿಯ ವೈದ್ಯರೊಬ್ಬರ ನಿರ್ಲಕ್ಶ್ಯವೇ ಕಾರಣ ಎಂದು ದೂರಿ, ರೋಗಿಯ ಸಂಬಂಧಿಗಳು ಪರಿಬೊನೊ ಮುಖರ್ಜಿ ಎಂಬ ವೈದ್ಯರ ಮೇಲೆ ದಾಳಿ ನಡೆಸಿದ್ದರು. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ವೈದ್ಯರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರ ವಿಷಾದದ ಟ್ವೀಟ್
ಈ ಘಟನೆಯ ನಂತರ ಕೋಪಗೊಂಡ ವೈದ್ಯರು ತಮ್ಮ ಸಹೋದ್ಯೋಗಿ ವೈದ್ಯರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಮೇಲಿನ ದೌರ್ಜನ್ಯ ನಿಲ್ಲದೆ ಇದ್ದರೆ ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ, ಸರ್ಕಾರ ನಮಗೆ ರಕ್ಷಣೆ ನೀಡಬೇಕು ಎಂದು ಬೇಡಿಕೆ ಇಟ್ಟು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
"ವೈದ್ಯರು ಕೂಡಲೇ ಪ್ರತಿಭಟನೆಯನ್ನು ವಾಪಸ್ ಪಡೆಯಬೇಕು, ಸೇವೆಗೆ ಮರಳಬೇಕು, ಆಸ್ಪತ್ರೆಯ ಆವರಣದಲ್ಲಿರುವ ಪೊಲೀಸರು ಹಿಂದೆ ಬನ್ನಿ, ಆಸ್ಪತ್ರೆ ಆವರಣಕ್ಕೆ ರೋಗಿ ಮತ್ತು ವೈದ್ಯರನ್ನು ಬಿಟ್ಟರೆ ಮತ್ಯಾರಿಗೂ ಪ್ರವೇಶವಿರಕೂಡದು. ಈ ಬಗ್ಗೆ ಮಾತನಾಡಲು ನಾನು ವೈದ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಆದರೆ ಅವರು ನನ್ನೊಂದಿಗೆ ಮಾತನಾಡಲು ಸಿದ್ಧರಿಲ್ಲ. ಪ್ರತಿಭಟನೆ ಮಾಡುತ್ತಿರುವವರ್ಯಾರೂ ವೈದ್ಯರಲ್ಲ, ಅವರು ರಾಜ್ಯದಲ್ಲಿ ಶಾಂತಿ ಕದಡಲು ಬಿಜೆಪಿಯೇ ನೇಮಿಸಿದ ವ್ಯಕ್ತಿಗಳು" ಎಂದು ಬ್ಯಾನರ್ಜಿ ಕಿಡಿಕಾರಿದ್ದಾರೆ.