ಉಪಚುನಾವಣೆ: 'ಮಮತಾ ನಾಮಪತ್ರದಲ್ಲಿ 5 ಪ್ರಕರಣಗಳನ್ನು ಬಹಿರಂಗಪಡಿಸಿಲ್ಲ': ಬಿಜೆಪಿ ಆರೋಪ
ಕೋಲ್ಕತ್ತಾ, ಸೆಪ್ಟೆಂಬರ್ 14: ಭವಾನಿಪುರದ ಉಪಚುನಾವಣೆಗೂ ಮುನ್ನ ನೀಡುವ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತನ್ನ ವಿರುದ್ದದ ಐದು ಪೊಲೀಸ್ ಪ್ರಕರಣಗಳನ್ನು ಈ ನಾಮಪತ್ರದಲ್ಲಿ ಉಲ್ಲೇಖ ಮಾಡಿಲ್ಲ ಎಂದು ಬಿಜೆಪಿಯು ಆರೋಪ ಮಾಡಿದೆ.
ಈ ಬಗ್ಗೆ ಆರೋಪ ಮಾಡಿರುವ ಬಿಜೆಪಿಯು, "ಸೆಪ್ಟೆಂಬರ್ 30 ರಂದು ನಡೆಯುವ ಭವಾನಿಪುರ ಉಪಚುನಾವಣೆಯ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಇಳಿವ ಪಕ್ಷಗಳು ತಮ್ಮ ಅಭ್ಯರ್ಥಿಯ ನಾಮಪತ್ರವನ್ನು ಸಲ್ಲಿಕೆ ಮಾಡಿದೆ. ಟಿಎಂಸಿಯಿಂದ ಭವಾನಿಪುರದಲ್ಲಿ ಕಣಕ್ಕೆ ಇಳಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ನಾಮಪತ್ರದಲ್ಲಿ ತನ್ನ ವಿರುದ್ದದ ಐದು ಪೊಲೀಸ್ ಪ್ರಕರಣಗಳನ್ನು ಬಹಿರಂಗಪಡಿಸಿಲ್ಲ," ಎಂದು ದೂರಿದೆ. ಆದರೆ ಈ ಆರೋಪವನ್ನು ತೃಣಮೂಲ ಕಾಂಗ್ರೆಸ್ ಮಾತ್ರ ಅಲ್ಲಗಳೆದಿದೆ.
ದೀದಿ ಕ್ಷೇತ್ರದಲ್ಲಿ ಬೆಂಗಾಳಿಯೇತರರ ಬೆಂಬಲಕ್ಕಾಗಿ ಟಿಎಂಸಿ ಮಾಸ್ಟರ್ ಪ್ಲ್ಯಾನ್
ತನ್ನ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದು ಬಿಜೆಪಿಯ ಸುವೇಂದು ಅಧಿಕಾರಿಯ ಎದುರು ಸೋಲು ಕಂಡಿದ್ದಾರೆ. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ತನ್ನ ವಿರುದ್ದದ ಐದು ಪ್ರಕರಣಗಳನ್ನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಲ್ಲೇಖ ಮಾಡಿಲ್ಲ ಅಥವಾ ಬಹಿರಂಗ ಪಡಿಸಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ ನಾಯಕರುಗಳು, "ಚಾರ್ಜ್ಶೀಟ್ನಲ್ಲಿ ಮಮತಾ ಬ್ಯಾನರ್ಜಿ ಹೆಸರು ಇದ್ದರೆ ಮಾತ್ರ ಈ ಪ್ರಕರಣಗಳ ಬಗ್ಗೆ ನಾಮಪತ್ರದಲ್ಲಿ ಉಲ್ಲೇಖ ಮಾಡಬೇಕಾಗಿದೆ," ಎಂದು ಸ್ಪಷ್ಟಪಡಿಸಿದೆ.
ಇದಕ್ಕೂ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ, ಭವಾನಿಪುರದಲ್ಲಿ ಸ್ಪರ್ಧೆಗೆ ಇಳಿದಿರುವ ಬಿಜೆಪಿ ಅಭ್ಯರ್ಥಿ, ವಕೀಲೆ ಪ್ರಿಯಾಂಕ ಟಿಬ್ರೆವಾಲ್ರ ಮುಖ್ಯ ಚುನಾವಣಾ ಏಜೆಂಟ್ ಭವಾನಿಪುರ ಚುನಾವಣಾಧಿಕಾರಿಗೆ ಈ ವಿಚಾರದಲ್ಲಿ ದೂರು ದಾಖಲು ಮಾಡಲು ಪತ್ರ ಬರೆದಿದ್ದರು. ಮಮತಾ ಬ್ಯಾನರ್ಜಿಯ ವಿರುದ್ದದ ಪ್ರಕರಣಗಳನ್ನು ನಾಮಪತ್ರದಲ್ಲಿ ಉಲ್ಲೇಖ ಮಾಡಿರುವ ಪ್ರಕರಣಗಳ ಹೊರತಾಗಿ ಇನ್ನೂ ಐದು ಪ್ರಕರಣಗಳು ಇವೆ. ಆದರೆ ಅದನ್ನು ಮಮತಾ ಬ್ಯಾನರ್ಜಿ ಉಲ್ಲೇಖ ಮಾಡಿಲ್ಲ ಎಂದು ಆರೋಪ ಮಾಡಿರುವ ಬಿಜೆಪಿ ಅಭ್ಯರ್ಥಿ, ವಕೀಲೆ ಪ್ರಿಯಾಂಕ ಟಿಬ್ರೆವಾಲ್ರ ಮುಖ್ಯ ಚುನಾವಣಾ ಏಜೆಂಟ್ ಇಂಡಿಯಾ ಟುಡೇ ಸೇರಿದಂತೆ ಮೂರು ಮಾಧ್ಯಮಗಳ ವರದಿಯನ್ನು ಉಲ್ಲೇಖ ಮಾಡಿದ್ದಾರೆ. ಈ ಮಾಧ್ಯಮಗಳು ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಮಮತಾ ಬ್ಯಾನರ್ಜಿಯ ವಿರುದ್ದ ಐದು ಪೊಲೀಸ್ ಪ್ರಕರಣಗಳು ಇದೆ ಎಂದು ವರದಿ ಮಾಡಿದೆ.
ಈ ಪತ್ರದಲ್ಲಿ, "ಮಮತಾ ಬ್ಯಾನರ್ಜಿ ಸಲ್ಲಿಸಿದ ನಾಮಪತ್ರಕ್ಕೆ ಆಕ್ಷೇಪಣೆಯನ್ನು ನಾನು ವ್ಯಕ್ತಪಡಿಸುತ್ತೇನೆ. ಅಭ್ಯರ್ಥಿಯು ತನ್ನ ಬಗ್ಗೆಗಿನ ಎಲ್ಲಾ ಮಾಹಿತಿಯನ್ನು ಬಹಿರಂಗ ಪಡಿಸಲು ವಿಫಲವಾದ ಕಾರಣದಿಂದಾಗಿ ನಾನು ನಾಮಪತ್ರಕ್ಕೆ ಆಕ್ಷೇಪಣೆಯನ್ನು ವ್ಯಕ್ತಪಡಿಸುತ್ತೇನೆ. ಮಮತಾ ಬ್ಯಾನರ್ಜಿ ತನ್ನ ವಿರುದ್ದದ ಕ್ರಿಮಿನಲ್ ಪ್ರಕರಣಗಳನ್ನು ನಾಮಪತ್ರದಲ್ಲಿ ಉಲ್ಲೇಖ ಮಾಡಿಲ್ಲ," ಎಂದು ಆರೋಪ ಮಾಡಲಾಗಿದೆ.
ಭವಾನಿಪುರ ಉಪಚುನಾವಣೆ: ಮಮತಾ ಎದುರು ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಕಣಕ್ಕೆ
ಆಗಸ್ಟ್ 2018 ರಲ್ಲಿ ಇಂಡಿಯಾ ಟುಡೇ ಮಾಧ್ಯಮವೊಂದರ ವರದಿಯ ಪ್ರಕಾರ, "ಅಸ್ಸಾಂ ಪೊಲೀಸರು ಮಮತಾ ಬ್ಯಾನರ್ಜಿಯ ವಿರುದ್ದ ದೂರು ದಾಖಲು ಮಾಡಿದ್ದಾರೆ". ಈ ದೂರು ಅಸ್ಸಾಂನ ಎನ್ಆರ್ಸಿ ವಿಚಾರದಲ್ಲಿ ನೀಡಿದ ಹೇಳಿಕೆಯ ವಿರುದ್ದವಾಗಿ ದಾಖಲು ಮಾಡಲಾಗಿದೆ. ಅಸ್ಸಾಂನಲ್ಲಿ ಎನ್ಆರ್ಸಿ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ದ ಮಮತಾ ಬ್ಯಾನರ್ಜಿ ಗಂಭೀರ ಆರೋಪವನ್ನು ಮಾಡಿದ್ದರು. "ಯಾರು ಬಿಜೆಪಿಯ ಮತದಾರರು ಆಗಿರುತ್ತಾರೋ ಅವರ ಹೆಸರನ್ನು ಎನ್ಆರ್ಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆ. ಹಾಗೆಯೇ ಯಾರು ಬಿಜೆಪಿಗೆ ಮತ ಹಾಕುವುದಿಲ್ಲವೋ, ಅವರ ಹೆಸರು ಎನ್ಆರ್ಸಿ ಪಟ್ಟಿಯಿಂದ ಅಳಿಸಲಾಗುತ್ತದೆ," ಎಂದೂ ದೂರಿದ್ದರು.
ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಕೇಂದ್ರ ಸರ್ಕಾರವು ಎನ್ಆರ್ಸಿಯನ್ನು ಜಾರಿಗೆ ತರುವುದನ್ನು ಮಮತಾ ಬ್ಯಾನರ್ಜಿ ವಿರೋಧ ಮಾಡಿದ್ದರು. "ಹೀಗೆ ಎನ್ಆರ್ಸಿ ಜಾರಿ ಮಾಡಿದರೆ, ರಕ್ತಪಾತವಾಗುತ್ತದೆ, ಅಂತರ್ಯುದ್ಧ ಉಂಟಾಗುತ್ತದೆ," ಎಂದು ಎಚ್ಚರಿಕೆಯನ್ನು ನೀಡಿದ್ದರು. ಇನ್ನು ಈ ವಿಚಾರದಲ್ಲಿ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, "ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ. ನಾನು ಆತಂಕಕ್ಕೆ ಒಳಗಾಗಿಲ್ಲ. ನನ್ನ ವಿರುದ್ದ ಅವರು ಮಿಲಿಯನ್ಗಟ್ಟಲೆ ದೂರನ್ನು ದಾಖಲು ಮಾಡಿಕೊಳ್ಳಲಿ. ನಾನು ಆ ವಿಚಾರದಲ್ಲಿ ತಲೆಕೆಡೆಸಿಕೊಳ್ಳುವುದಿಲ್ಲ," ಎಂದು ತಿಳಿಸಿದ್ದಾರೆ. ಇನ್ನು ಇದಕ್ಕೂ ಹಿಂದೆ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯು ಈ ರೀತಿ ನಾಮಪತ್ರ ಸರಿಯಾಗಿ ಸಲ್ಲಿಕೆಯಾಗಿಲ್ಲ ಎಂಬ ಆರೋಪವನ್ನು ಮಾಡಿತ್ತು.
(ಒನ್ ಇಂಡಿಯಾ ಸುದ್ದಿ)