ದೇಶಕ್ಕೆ ನಾಲ್ಕು ರಾಜಧಾನಿ ಬೇಕು: ಮಮತಾ ಬ್ಯಾನರ್ಜಿ ಒತ್ತಾಯ
ಕೋಲ್ಕತಾ, ಜನವರಿ 23: ದೇಶದ ನಾಲ್ಕು ದಿಕ್ಕಿಗೆ ನಾಲ್ಕು ರಾಜಧಾನಿಗಳನ್ನು ಮಾಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನೋತ್ಸವ ಆಚರಣೆಯ ವೇಳೆ ಶನಿವಾರ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
'ದೇಶಕ್ಕೆ ಒಂದೇ ಒಂದು ರಾಜಧಾನಿ ಇರುವುದು ಏಕೆ? ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ತಲಾ ಒಂದೊಂದು ರಾಜಧಾನಿಗಳು ಏಕಿಲ್ಲ? ಆವರ್ತನದ ಆಧಾರದಲ್ಲಿ ನಾಲ್ಕು ರಾಷ್ಟ್ರೀಯ ರಾಜಧಾನಿಗಳ ಕಾರ್ಯಾಚರಣೆ ಏಕೆ ಸಾಧ್ಯವಿಲ್ಲ?' ಎಂದು ಪ್ರಶ್ನಿಸಿದರು.
ಇಂದು ನೇತಾಜಿ ಜನ್ಮದಿನ: ಸುಭಾಷ್ ಚಂದ್ರ ಬೋಸ್ ಅವರ ನೆಚ್ಚಿನ ತಿನಿಸು ಯಾವುದು ಗೊತ್ತೇ?
'ಪ್ರತಿಯೊಂದೇ ಏಕೆ ದೆಹಲಿಗೆ ಮಾತ್ರವೇ ಸೀಮಿತವಾಗಿದೆ? ನಾಲ್ಕು ರಾಷ್ಟ್ರೀಯ ರಾಜಧಾನಿಯ ಪರ ಸಂಸತ್ನಲ್ಲಿ ಧ್ವನಿ ಎತ್ತುವಂತೆ ನನ್ನ ಸಂಸತ್ ಸದಸ್ಯರಿಗೆ ಮನವಿ ಮಾಡುತ್ತೇನೆ. ನಮ್ಮ ಆಲೋಚನೆಗಳನ್ನು ಬದಲಿಸಬೇಕಿದೆ. ಕೇವಲ ಒಬ್ಬ ನಾಯಕ, ಒಂದು ದೇಶ ಬದಲಾವಣೆ ಮಾಡಲಾಗದು. ನೇತಾಜಿ ಅವರ 125ನೇ ಜನ್ಮದಿನೋತ್ಸವ ಆಚರಿಸುವಾಗ 'ಪರಾಕ್ರಮ' ಎಂಬ ಪದವನ್ನು ಕೇಂದ್ರ ಸರ್ಕಾರ ಏಕೆ ಬಳಸುತ್ತಿದೆಯೋ ನನಗೆ ಅರ್ಥವಾಗುತ್ತಿಲ್ಲ' ಎಂದು ಕಿಡಿಕಾರಿದ್ದಾರೆ. ಮುಂದೆ ಓದಿ.
ನೇತಾಜಿ ಹೆಸರನ್ನೇ ಬದಲಿಸಿದ್ದಾರೆ
ನೇತಾಜಿ ಬಂದರನ್ನು ಶ್ಯಾಮ ಪ್ರಸಾದ್ ಮುಖರ್ಜಿ ಬಂದರು ಎಂದು ಮರುನಾಮಕರಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಟೀಕಿಸಿದ ಮಮತಾ, ಅವರಿಗೆ ನೇತಾಜಿ ಅವರ ಮೇಲೆ ನಿಜಕ್ಕೂ ಪ್ರೀತಿ ಇದ್ದರೆ ನೇತಾಜಿ ಬಂದರಿನ ಹೆಸರನ್ನು ಶ್ಯಾಮ ಪ್ರಸಾದ್ ಮುಖರ್ಜಿ ಎಂದು ಏಕೆ ಬದಲಿಸುತ್ತಿದ್ದರು? ಸ್ವಾತಂತ್ರ್ಯಕ್ಕೂ ಮುನ್ನ ನೇತಾಜಿ ಅವರು ಯೋಜನಾ ಆಯೋಗ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಪರಿಕಲ್ಪನೆಯನ್ನು ಕಂಡಿದ್ದರು. ತಾವು ನೇತಾಜಿ ಅನುಯಾಯಿಗಳು ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಅದೇ ಸಮಯಕ್ಕೆ ಅವರು ಯೋಜನಾ ಆಯೋಗವನ್ನು ರದ್ದುಗೊಳಿಸುತ್ತಾರೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದ ರಾಜಕೀಯ ಲೆಕ್ಕಾಚಾರ: ಟಿಎಂಸಿ ತೊರೆದ ಸಚಿವ ರಾಜಿಬ್ ಬ್ಯಾನರ್ಜಿ
ಆಜಾದ್ ಹಿಂದ್ ಸ್ಮಾರಕ
ನೇತಾಜಿ ಅವರು ರಾಷ್ಟ್ರೀಯ ಸೇನೆ ಕಟ್ಟಿದರು. ಗುಜರಾತ್, ಬಂಗಾಳ, ತಮಿಳುನಾಡು ಸೇರಿದಂತೆ ಎಲ್ಲ ಭಾಗಗಳ ಜನರನ್ನು ಸೇರಿಸಿಕೊಂಡರು. ಬ್ರಿಟಷರ ಒಡೆದು ಆಳುವ ನೀತಿಯ ವಿರುದ್ಧ ಸೆಟೆದು ನಿಂತರು. ನಾವು ಆಜಾದ್ ಹಿಂದ್ ಸ್ಮಾರಕ ನಿರ್ಮಿಸಲಿದ್ದೇವೆ. ಅದನ್ನು ಹೇಗೆ ಮಾಡುತ್ತೇವೆ ಎಂದು ತೋರಿಸುತ್ತೇವೆ. ಅವರು ಪ್ರತಿಮೆಗಳು ಮತ್ತು ಹೊಸ ಸಂಸತ್ ಕಟ್ಟಡಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ದೇಶನಾಯಕ ದಿನ ಆಚರಣೆ
ನಾವು ಚುನಾವಣಾ ವರ್ಷಗಳಲ್ಲಿ ಮಾತ್ರ ನೇತಾಜಿ ಅವರ ಜನ್ಮದಿನವನ್ನು ಆಚರಿಸುವುದಿಲ್ಲ. ನಾವು ಅವರ 125ನೇ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ನೇತಾಜಿ ಅವರನ್ನು ರವೀಂದ್ರನಾಥ್ ಟ್ಯಾಗೋರ್ ಅವರು ದೇಶನಾಯಕ ಎಂದು ಕರೆದಿದ್ದರು. ಹೀಗಾಗಿಯೇ ನಾವು ಈ ದಿನವನ್ನು ದೇಶನಾಯಕರ ದಿನ ಎಂದು ಆಚರಿಸುತ್ತಿದ್ದೇವೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಮತ್ತೆ ಮತ್ತೆ ಮೊಳಗಿದ 'ಗೋಲಿ ಮಾರೋ' ಘೋಷಣೆ
ರಾಷ್ಟ್ರೀಯ ರಜಾದಿನ ಘೋಷಣೆ
ನೇತಾಜಿ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಕೇಂದ್ರ ಸರ್ಕಾರ ಘೋಷಿಸಬೇಕು. ನೇತಾಜಿ ಬಗ್ಗೆ ಇಷ್ಟು ಮಾತನಾಡುವ ಕೇಂದ್ರ ಸರ್ಕಾರ, ಈ ಬೇಡಿಕೆಯನ್ನೇಕೆ ಇದುವರೆಗೂ ಈಡೇರಿಸಿಲ್ಲ? ಎಂದು ಪ್ರಶ್ನಿಸಿದರು. ನೇತಾಜಿ ಜನ್ಮದಿನದ ಕಾರ್ಯಕ್ರಮವನ್ನು ಅವರು ಕೇಂದ್ರ ಸರ್ಕಾರದ ವಿರುದ್ಧದ ವಾಗ್ದಾಳಿ ಹಾಗೂ ಚುನಾವಣಾ ಪ್ರಚಾರದ ವೇದಿಕೆಯನ್ನಾಗಿ ಬಳಸಿಕೊಂಡರು.