ಕೇಂದ್ರಕ್ಕೆ ದೀದಿ ತಿರುಗೇಟು: ಸಿಎಸ್ ಸ್ಥಾನದಿಂದ ಬಂಡೋಪಾಧ್ಯಾಯ್ ನಿವೃತ್ತಿ, ಹೊಸ ಹುದ್ದೆ
ಕೊಲ್ಕತ್ತಾ, ಮೇ 31: ಹಠಾತ್ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಸ್ಥಾನದಿಂದ ಸೋಮವಾರ ಮಧ್ಯಾಹ್ನ ಅಲಪನ್ ಬಂಡೋಪಾಧ್ಯಾಯ್ ನಿವೃತ್ತಿ ಪಡೆದುಕೊಂಡಿದ್ದಾರೆ. ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ.
ಹೊಸ ಆದೇಶದ ಪ್ರಕಾರ ಬಂಡೋಪಾಧ್ಯಾಯ್ ಜೂನ್ 1ರಿಂದ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದು ಮೂರು ವರ್ಷಗಳ ಕಾಲ ಮುಂದುವರಿಯಲಿದ್ದಾರೆ. ಹೆಚ್ಕೆ ದ್ವಿವೇದಿ ಅವರನ್ನು ಪಶ್ಚಿಮ ಬಂಗಾಳದ ಹೊಸ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಮುಖ್ಯಕಾರ್ಯದರ್ಶಿ ವರ್ಗಾವಣೆ ವಿಚಾರವಾಗಿ ಕೇಂದ್ರ vs ಪ.ಬಂಗಾಳ ಹಗ್ಗಜಗ್ಗಾಟ
ಈ ನಿರ್ಧಾರವನ್ನು ಮಮತಾ ಬ್ಯಾನರ್ಜಿ ಮಾಧ್ಯಮಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ. "ಅಲಪನ್ ಬಂಡೋಪಾಧ್ಯಾಯ್ ಅವರು ಮುಖ್ಯ ಕಾರ್ಯದರ್ಶಿಯಾಗಿ ನೀಡಿದ ಸೇವೆ ನಾನು ಧನ್ಯವಾದವನ್ನು ಸಲ್ಲಿಸುತ್ತೇನೆ. ಪಶ್ಚಿಮ ಬಂಗಾಳಕ್ಕೆ ಅವರ ಕೊಡುಗೆ ಅತ್ಯುತ್ತಮವಾಗಿದೆ. ಅವರ ಸೇವೆಯನ್ನು ಗಣನೆಗೆ ತೆಗೆದುಕೊಂಡು ಮುಖ್ಯಮಂತ್ರಿಯ ಮುಖ್ಯಸಲಹೆಗಾರರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಅಲಪನ್ ಬಂಡ್ಯೋಪಾದ್ಯಾಯ ನಿವೃತ್ತಿಗೆ ಇಂದೇ(ಮೇ 31) ದಿನಾಂಕವಾಗಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಕಾರ್ಯಾವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಲು ಪಶ್ಚಿಮ ಬಂಗಾಳ ಸರ್ಕಾರ ಮನವಿ ಮಾಡಿತ್ತು. ಅದಕ್ಕೆ ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ ಆಗಸ್ಟ್ 31ರವರೆಗೆ ಅಲಪನ್ ಬಂಡ್ಯೋಪಾದ್ಯಾಯ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಿತ್ತು. ಆದರೆ ಕೇಂದ್ರಕ್ಕೆ ವಾಪಾಸ್ ಕರೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ.
ಕಳೆದ ಶುಕ್ರವಾರ ಪ್ರಧಾನಿ ಮೋದಿ ಯಾಸ್ ಚಂಡಮಾರುತದ ಹಾನಿ ವೀಕ್ಷಿಸಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿಗಳ ನೇತೃತ್ವದಲ್ಲಿ ನಡೆದ ಹಾನಿ ಪರಾಮರ್ಶೆಯ ಸಭೆಗೆ ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿ ಇಬ್ಬರೂ ಗೈರಾಗಿದ್ದರು. ಈ ಘಟನೆಯ ನಂತರ ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿಯನ್ನು ವಾಪಾಸ್ ಕರೆಸಿಕೊಳ್ಳಲು ಕೇಂದ್ರ ಸೂಚಿಸಿತ್ತು. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಳೆದ ಶುಕ್ರವಾರ ಬಂಡೋಪಾಧ್ಯಾಯ್ ಬೆಳಿಗ್ಗೆ 10 ಗಂಟೆಯೊಳಗೆ ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ತನ್ನ ಕಚೇರಿಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಗ್ಭ್ರಮೆ ಮತ್ತು ಆಘಾತ ವ್ಯಕ್ತಪಡಿಸಿ ಪತ್ರ ಬರೆದಿದ್ದು ಮುಖ್ಯಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸುವುದಿಲ್ಲ ಎಂದು ತಿಳಿಸಿದ್ದರು. ಅದಾದ ನಂತರ ಮಧ್ಯಾಹ್ನ ಈ ಬೆಳವಣಿಗೆಯಾಗಿದ್ದು ಅಲಪನ್ ಬಂಡೋಪಾಧ್ಯಾಯ್ ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕವಾಗಿದ್ದಾರೆ.