ಪ್ರಧಾನಿ ರೇಸ್ನ ಮುಂಚೂಣಿಯಲ್ಲಿದ್ದಾರೆ ಮಮತಾ ಬ್ಯಾನರ್ಜಿ: ಸುಪ್ರಿಯೋ
ಕೋಲ್ಕತ್ತಾ, ಸೆಪ್ಟೆಂಬರ್ 20: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2024ರ ಪ್ರಧಾನಿ ಹುದ್ದೆಯ ಮುಂಚೂಣಿಯಲ್ಲಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ತಿಳಿಸಿದ್ದಾರೆ.
ಟಿಎಂಸಿಗೆ ಸೇರ್ಪಡೆ ಕುರಿತಂತೆ ಪ್ರತಿಕ್ರಿಯಿಸಿದ ಸುಪ್ರಿಯೋ, ಪಕ್ಷ ಬದಲಾಯಿಸುವ ಮೂಲಕ ನಾನು ಯಾವುದೇ ಇತಿಹಾಸ ನಿರ್ಮಿಸುವುದಿಲ್ಲ,ಬಿಜೆಪಿಯ ಹಿರಿಯ ನಾಯಕರೊಂದಿಗೆ ಭಿನ್ನಾಭಿಪ್ರಾಯವಿತ್ತು, ಬಿಜೆಪಿ ಪಕ್ಷ ಮೊದಲು ಅವರ ಅಸಮಾಧಾನವನ್ನು ಕೇಳಬೇಕು ಎಂದರು.
ಬಿಜೆಪಿ ಮಾಜಿ ನಾಯಕ ಬಾಬುಲ್ ಸುಪ್ರೀಯೋ ಟಿಎಂಸಿ ಸೇರ್ಪಡೆ
ಅಸನ್ಸೋಲ್ ಸಂಸದನಾಗಿ ಕೆಲಸವನ್ನು ನಿರ್ವಹಿಸುತ್ತೇನೆ, ಯಾವುದೇ ಇತರ ಪಕ್ಷವನ್ನು ಸೇರುವುದಿಲ್ಲ, ದೆಹಲಿಯಲ್ಲಿ ನೀಡಲಾಗಿದ್ದ ಬಂಗಲೆಯನ್ನು ಕೂಡಾ ತೆರವುಗೊಳಿಸಲಾಗಿದೆ. ಶೀಘ್ರದಲ್ಲಿಯೇ ಭದ್ರತಾ ಸಿಬ್ಬಂದಿಯನ್ನು ಅವರ ಕರ್ತವ್ಯದಿಂದ ಬಿಡುಗಡೆ ಮಾಡುವುದಾಗಿ ಸುಪ್ರಿಯೋ ತಿಳಿಸಿದರು.
2024ರಲ್ಲಿ ನಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬೇಕು ಎಂದು ಬಯಸುತ್ತೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಧಾನ ಮಂತ್ರಿ ಹುದ್ದೆಗಾಗಿ ಮಮತಾ ಬ್ಯಾನರ್ಜಿ ಮುಂಚೂಣಿಯಲ್ಲಿರುವ ಸತ್ಯವನ್ನು ಯಾರೂ ಕೂಡಾ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಸುಪ್ರಿಯೋ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಾಜಿ ಕೇಂದ್ರ ಸಚಿವ, ಮಾಜಿ ಸಂಸದ ಬಾಬುಲ್ ಸುಪ್ರಿಯೋ ಶನಿವಾರ ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಎರಡು ತಿಂಗಳ ಹಿಂದೆ ಕೇಂದ್ರ ಪರಿಸರ ಖಾತೆ ರಾಜ್ಯ ದರ್ಜೆ ಸಚಿವರಾಗಿದ್ದ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಹೀಗೆ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದ ಅವರು, ತಿಂಗಳ ಹಿಂದೆ ಪ್ರತಿಕ್ರಿಯೆ ನೀಡಿ , ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದಿದ್ದರು. ಬೇಕಿದ್ದರೆ ರಾಜಕೀಯವನ್ನೇ ಬಿಡುತ್ತೇನೆ ಎಂದಿದ್ದ ಬಾಬುಲ್ ಸುಪ್ರಿಯೋ ಸದ್ಯಕ್ಕೆ ಸಂಸದರಾಗಿ ಮುಂದುವರಿಯಲು ಬಯಸಿದ್ದರು.
ಆದರೆ ಇದೀಗ ಅವರು ಬಿಜೆಪಿಯ ಐದನೇ ನಾಯಕರಾಗಿ ಟಿಎಂಸಿ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ನಾಲ್ವರು ಬಿಜೆಪಿ ಶಾಸಕರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹೊಸಕಿ ಹಾಕಿ ಟಿಎಂಸಿ ಭರ್ಜರಿ ಜಯ ಸಾಧಿಸಿದ ಬಳಿಕ ಪಕ್ಷ ಬಿಟ್ಟಿದ್ದ ಹಲವರು ಮತ್ತೆ ಟಿಎಂಸಿಯತ್ತ ಮರಳುತ್ತಿದ್ದಾರೆ. ಜತೆಗೆ ಹೊಸಬರೂ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ತೃಣಮೂಲ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ.
ಇದೀಗ ಶನಿವಾರ ಮಮತಾ ಬ್ಯಾನರ್ಜಿ ಸಂಬಂಧಿ, ಪಕ್ಷದ ಯುವ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಸಂಸದ ಡೆರೆಕ್ ಓಬ್ರಿಯಾನ್ ಬಾಬುಲ್ ಸುಪ್ರಿಯೋ ಅವರನ್ನು ಟಿಎಂಸಿಗೆ ಬರ ಮಾಡಿಕೊಂಡಿದ್ದಾರೆ. ಸುಪ್ರಿಯೋ ಟಿಎಂಸಿ ಸೇರಿರುವ ಬಿಜೆಪಿಯ ಮೊದಲ ಸಂಸದರಾಗಿದ್ದಾರೆ. ಅವರು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಟಿಎಂಸಿಯ ಮೂಲಗಳು ತಿಳಿಸಿವೆ.
ಸುಪ್ರಿಯೋ ತಮ್ಮ ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ, ಅವರು ಪ್ರತಿನಿಧಿಸುತ್ತಿದ್ದ ಅಸಾನ್ಸೋಲ್ ಲೋಕಸಭಾ ಸ್ಥಾನಕ್ಕೆ ಆರು ತಿಂಗಳ ಒಳಗೆ ಮತ್ತೆ ಚುನಾವಣೆ ನಡೆಯಬೇಕಿದೆ.
ಇನ್ನೂ ಹಲವು ಬಿಜೆಪಿ ನಾಯಕರು ಪಕ್ಷ ಸೇರ್ಪಡೆ ಸಂಬಂಧ ಸಂಪರ್ಕದಲ್ಲಿದ್ದಾರೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಶನಿವಾರ ಹೊಸ ಬಾಂಬ್ ಸಿಡಿಸಿದ್ದಾರೆ. "ಹಲವು ಬಿಜೆಪಿ ನಾಯಕರು ತೃಣಮೂಲ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದಾರೆ.
ಅವರು ಬಿಜೆಪಿಯಿಂದ ತೃಪ್ತರಾಗಿಲ್ಲ. ಒಬ್ಬರು (ಬಾಬುಲ್ ಸುಪ್ರಿಯೋ) ಇಂದು ಪಕ್ಷ ಸೇರ್ಪಡೆಯಾಗಿದ್ದಾರೆ, ಇನ್ನೊಬ್ಬರು ನಾಳೆ ಸೇರಲು ಬಯಸುತ್ತಿದ್ದಾರೆ. ಪ್ರಕ್ರಿಯೆಯು ಮುಂದುವರಿಯುತ್ತದೆ. ಕಾದು ನೋಡಿ," ಎಂದು ಘೋಷ್ ಹೇಳಿದ್ದರು.
2014ರಲ್ಲಿ ಬಿಜೆಪಿ ಸೇರಿಕೊಂಡ ಬಬೂಲ್ ಸುಪ್ರಿಯೋ ಅಸನ್ಸೋಲ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿಯೂ ಅಧಿಕಾರ ಚಲಾಯಿಸಿದ್ದಾರೆ. ಆದರೆ ಇತ್ತೀಚೆಗೆ ಕೇಂದ್ರ ಬಿಜೆಪಿಯಲ್ಲಿ ನಡೆದ ಸಂಪುಟ ಪುನಾರಚನೆಯಲ್ಲಿ ಬಬೂಲ್ ಸುಪ್ರಿಯೋ ಮಂತ್ರಿಗಿರಿ ಕೆಳೆದುಕೊಂಡಿದ್ದರು.
ಕೇಂದ್ರ ಸರ್ಕಾರದ ಈ ನಡೆಯಿಂದ ಬಬೂಲ್ ಸುಪ್ರಿಯೋ ಅಸಮಾಧಾನಗೊಂಡಿದ್ದರು. ಹೀಗಾಗಿ ಬಿಜೆಪಿ ತೊರೆದಿದ್ದರು. ಇದೀಗ ಟಿಎಂಸಿ ಸೇರಿದ್ದಾರೆ.