ಪಶ್ಚಿಮ ಬಂಗಾಳದಲ್ಲಿ ಒಂದೇ ದಿನ 18 ಲಕ್ಷ ಭಕ್ತಾದಿಗಳಿಂದ ಪುಣ್ಯಸ್ನಾನ
ಕೋಲ್ಕತ್ತಾ, ಜನವರಿ.15: ಪಶ್ಚಿಮ ಬಂಗಾಳದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಗರ್ ದ್ವೀಪ ಪವಿತ್ರ ಗಂಗೆಯಲ್ಲಿ 18 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಪುಣ್ಯಸ್ನಾನ ಮಾಡಿರುವುದು ಹೊಸ ಇತಿಹಾಸ ಸೃಷ್ಟಿಸಿದೆ.
ನೆರೆಯ ಬಾಂಗ್ಲಾದೇಶ ಹಾಗೂ ನೇಪಾಳದಿಂದಲೂ ಧಾವಿಸಿದ ಲಕ್ಷಾಂತರ ಮಂದಿ ಭಕ್ತಾದಿಗಳು ಪವಿತ್ರ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಬೆಳಗ್ಗೆ 8 ಗಂಟೆಯೊಳಗೆ 13 ಲಕ್ಷಕ್ಕೂ ಹೆಚ್ಚು ಭಕ್ತರು ಗಂಗೆಯಲ್ಲಿ ಮಿಂದೆದ್ದರು.
ಅಲ್ಲಿ ಬಾನಿಗೆ ಚಿತ್ತಾರ:ಇಲ್ಲಿ ಹೋರಿ ಅಬ್ಬರ, ಇದಪ್ಪಾ ಸಂಕ್ರಾಂತಿ ಸಡಗರ
ಕಳೆದ 2019ರಲ್ಲಿ ಮಕರ ಸಂಕ್ರಾಂತಿ ಹಬ್ಬದಂದೇ ಸಾಗರ್ ದ್ವೀಪದಲ್ಲಿ 20 ಲಕ್ಷ ಭಕ್ತಾದಿಗಳು ನೆರೆದಿದ್ದೇ ದಾಖಲೆಯಾಗಿತ್ತು. ಈ ಬಾರಿ 30 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ಹಿಂದಿನ ವರ್ಷದ ದಾಖಲೆಯನ್ನು ಬ್ರೇಕ್ ಮಾಡಿದೆ.
30 ಲಕ್ಷ ಭಕ್ತರಿಂದ ಕಪಿಲಮುನಿ ದೇಗುಲದಲ್ಲಿ ಪೂಜೆ
ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬದ ದಿನ ಪಶ್ಚಿಮ ಬಂಗಾಳ ದಕ್ಷಿಣದ 24 ಪರಗಣ ಜಿಲ್ಲೆಯ ಸಾಗರ ದ್ವೀಪಕ್ಕೆ ಲಕ್ಷಾಂತರ ಭಕ್ತಾದಿಗಳು ಧಾವಿಸಿ ಬರುತ್ತಾರೆ. ಪವಿತ್ರ ನದಿಯಲ್ಲಿ ಪುಣ್ಯಸ್ನಾನ ಮಾಡಿದ 30 ಲಕ್ಷಕ್ಕೂ ಅಧಿಕ ಭಕ್ತಾದಿಗಳು ನಂತರದಲ್ಲಿ ಕಪಿಲಮುನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
10 ಸಾವಿರ ಭದ್ರತಾ ಪಡೆಗಳಿಂದ ಭದ್ರತಾ ವ್ಯವಸ್ಥೆ
ಲಕ್ಷಾಂತರ ಭಕ್ತಾದಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು. ಪೊಲೀಸರು ಸೇರಿದಂತೆ ಸುಮರಾ 10 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಸ್ವತಃ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಭದ್ರತಾ ವ್ಯವಸ್ಥೆ ಬಗ್ಗೆ ಮುತುವರ್ಜಿ ವಹಿಸಿದ್ದರು.
ಮೊದಲ ಬಾರಿಗೆ ಏರ್ ಆಂಬುಲೆನ್ಸ್ ವ್ಯವಸ್ಥೆ
ಲಕ್ಷಾಂತರ ಭಕ್ತರು ಧಾವಿಸುವ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಡ್ರೋನ್ ವ್ಯವಸ್ಥೆ ಜೊತೆಗೆ 1 ಸಾವಿರಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ವಿವಿಧ ಭಾಗಗಳಲ್ಲಿ ಅಳವಡಿಕೆ ಮಾಡಲಾಗಿತ್ತು. ಇನ್ನು, ಇದೇ ಮೊದಲ ಬಾರಿಗೆ ಭಕ್ತಾದಿಗಳಿಗೆ ಏರ್ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು.
ಪಶ್ಚಿಮ ಬಂಗಾಳದ ಹಲವೆಡೆ ಭಕ್ತರ ಪುಣ್ಯಸ್ನಾನ
ಸಾಗರ ದ್ವೀಪ ಅಷ್ಟೇ ಅಲ್ಲದೇ ಪಶ್ಚಿಮ ಬಂಗಾಳದ ಹಲವೆಡೆ ಪವಿತ್ರ ನದಿಯಲ್ಲಿ ಸಾವಿರಾರು ಭಕ್ತಾದಿಗಳು ಪುಣ್ಯಸ್ನಾನ ಮಾಡಿದರು. ಬಾಬುಘಟ್, ದೋಯಿಘಾಟ್, ಬಜೆ ಕದಂತಲಾ ಘಾಟ್, ಸರದಾಮಿನಿಘಾಟ್, ರತನ್ ಬಾಬುರ್ ಘಾಟ್, ಬಾಗ್ ಬಜಾರ್ ಘಾಟ್, ಕುಮರ್ತಲಿ ಘಾಟ್ ಹಾಗೂ ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ಭಕ್ತಾದಿಗಳು ಪುಣ್ಯಸ್ನಾನ ಮಾಡಿದ್ದಾರೆ.