ಪ್ರಧಾನಿ ಮೋದಿಯನ್ನು ಕಾಯಿಸಿದ ಆರೋಪ - ದೀದಿ ಹೇಳಿದ್ದೇನು?
ಕೋಲ್ಕತ್ತಾ, ಮೇ, 29: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸೋಲನ್ನು ಜೀರ್ಣಿಸಿಕೊಳ್ಳಲು ಪ್ರಧಾನಿ ಮೋದಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಉದ್ದೇಶಪೂರ್ವಕವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಅರ್ಧ ಗಂಟೆ ಮಮತಾ ಬ್ಯಾನರ್ಜಿ ಕಾಯಿಸಿದರು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ದೀದಿ, ಆಯ್ದ ಸುದ್ದಿಗಳನ್ನು ನೀಡುವ ಮೂಲಕ ಕೇಂದ್ರ ಸರ್ಕಾರ ನನ್ನನ್ನು ಗುರಿಯಾಗಿಸಿದೆ. ಒಟ್ಟಾರೆಯಾಗಿ ನಡೆದಿದ್ದು ಏನು ಎಂದು ತಿಳಿಸಲು ನಾನು ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಧಾನಿಯನ್ನೇ 30 ನಿಮಿಷ ಕಾಯಿಸಿ ದುರಹಂಕಾರ ತೋರಿದ ಮಮತಾ ಬ್ಯಾನರ್ಜಿ
ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಯೋಜನೆಯನ್ನು ನಾನು ಮಾಡಿದ್ದೆ. ಯಾಸ್ ಚಂಡಮಾರುತದಿಂದ ಉಂಟಾದ ಹಾನಿಯನ್ನು ನೋಡಲು ನಾನು ಸಾಗರ್ ಮತ್ತು ದಿಘಾಗೆ ಪ್ರಯಾಣಿಸಬೇಕಾಗಿತ್ತು. ನನ್ನ ಎಲ್ಲಾ ಯೋಜನೆಗಳನ್ನು ಸಿದ್ಧಪಡಿಸಲಾಗಿತ್ತು, ಅದಕ್ಕೆ ನಾನು ಕೂಡಾ ಎಲ್ಲಾ ತಯಾರಿ ಮಾಡಿಕೊಂಡಿದ್ದೆ. ಆದರೆ ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಚಂಡಮಾರುತದ ನಂತರದ ಪರಿಸ್ಥಿತಿಯನ್ನು ನೋಡಲು ಬಂಗಾಳಕ್ಕೆ ಬರುತ್ತಾರೆ ಎಂದು ಕರೆ ಮಾಡಿ ತಿಳಿಸಿದ್ದಾರೆ. ಆದ್ದರಿಂದ ನಾವು ಅದಕ್ಕೆ ಅನುಗುಣವಾಗಿ ಎಲ್ಲಾ ತಯಾರಿಯನ್ನು ಬದಲಾಯಿಸಿಕೊಂಡೆವು ಎಂದಿದ್ದಾರೆ.
ನಾವೇ ಗಂಟೆಗಟ್ಟಲೇ ಕಾದಿದ್ದೇವೆ ಎಂದ ದೀದಿ
ಪ್ರಧಾನ ಮಂತ್ರಿ ಹೆಲಿಕಾಪ್ಟರ್ನಿಂದ ಇಳಿಯುತ್ತಾರೆ ಎಂದು ಹೇಳಿ, ನಮ್ಮನ್ನು 20 ನಿಮಿಷಗಳ ಕಾಲ ಕಾಯುವಂತೆ ಮಾಡಲಾಯಿತು. ನಾವು ತಾಳ್ಮೆಯಿಂದ ಕಾಯುತ್ತಿದ್ದೆವು. ಆದರೆ ಬಳಿಕ ಸಭೆ ನಡೆಯಬೇಕಾದ ಸ್ಥಳಕ್ಕೆ ತಲುಪುವಂತೆ ತಿಳಿಸದ ಕಾರಣ ನಾವು ಅಲ್ಲಿಂದ ಹೊರಟು ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದೆವು. ಆದರೆ ಅಷ್ಟರಲ್ಲೇ ಪ್ರಧಾನಿ ಅಲ್ಲಿಗೆ ಆಗಮಿಸಿ, ಸಭೆ ನಡೆಸುತ್ತಿದ್ದರು. ಆದರೆ ನಮಗೆ ಪ್ರಧಾನಿ ಅಲ್ಲಿಗೆ ತಲುಪಿದ, ಸಭೆ ಆರಂಭವಾದ ವಿಷಯವೇ ತಿಳಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದೀದಿಗೂ ಮೊದಲೇ ತಲುಪಿದ್ದ ಮೋದಿ
ಆ ಬಳಿಕ ನಮ್ಮ ಬಳಿ ಹೊರಗೆ ಕಾಯುವಂತೆ ಹೇಳಿದರು. ಸಭೆ ನಡೆಯುತ್ತಿರುವುದರಿಂದ ಈ ಸಮಯದಲ್ಲಿ ಯಾರಿಗೂ ಪ್ರವೇಶ ಮಾಡಲು ಅನುಮತಿ ಇಲ್ಲ ಎಂದು ತಿಳಿಸಿದರು. ಆ ಸಂದರ್ಭದಲ್ಲೂ ನಾವು ತಾಳ್ಮೆಯಿಂದ ಕಾಯುತ್ತಿದ್ದೆವು. ಆ ಬಳಿಕ ಸುಮಾರು ಒಂದು ಗಂಟೆ ಯಾರೂ ಭೇಟಿಯಾಗುವಂತಿಲ್ಲ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಭೆ ಕಾನ್ಫರೆನ್ಸ್ ಹಾಲ್ಗೆ ಸ್ಥಳಾಂತರಗೊಂಡಿದೆ ಎಂದು ಯಾರೋ ಹೇಳಿದರು. ಆದ್ದರಿಂದ ಮುಖ್ಯ ಕಾರ್ಯದರ್ಶಿ ಮತ್ತು ನಾನು ಅಲ್ಲಿಗೆ ಹೋಗಲು ನಿರ್ಧರಿಸಿದೆವು. ನಾವು ಅಲ್ಲಿಗೆ ತಲುಪಿದಾಗ, ಪ್ರಧಾನಿ ರಾಜ್ಯಪಾಲರು, ಕೇಂದ್ರ ಮುಖಂಡರು ಮತ್ತು ವಿರೋಧ ಪಕ್ಷದ ಕೆಲವು ಶಾಸಕರೊಂದಿಗೆ ಸಭೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ವಿವರಿಸಿದ್ದಾರೆ.
ಯಾಸ್ ಚಂಡಮಾರುತ: ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಮೋದಿ
ಮೋದಿ ಅನುಮತಿ ಪಡೆದು ತೆರಳಿದ ದೀದಿ
ಇದರ ವಿರುದ್ದವಾದ ಸುದ್ದಿಯನ್ನು ಬಿಜೆಪಿಗರು ಈಗ ಪ್ರಚಾರ ಮಾಡುತ್ತಿದ್ದಾರೆ. ನಾವು ಆ ಸಭೆ ಪ್ರಧಾನಿ-ಮುಖ್ಯಮಂತ್ರಿಗಳ ಸಭೆ ಎಂದು ಭಾವಿಸಿದ್ದೆವು. ಆದ್ದರಿಂದ ನಾವು ನಮ್ಮ ವರದಿಯನ್ನು ಪ್ರಧಾನ ಮಂತ್ರಿಗೆ ಸಲ್ಲಿಸಲು ನಿರ್ಧರಿಸಿದೆವು. ಬಳಿಕ ಪ್ರಧಾನಿ ಅನುಮತಿ ಪಡೆದು ದಿಘಾಗೆ ಹೋದೆವು. ನಾನು ಮೂರು ಬಾರಿ ಪ್ರಧಾನಮಂತ್ರಿಯ ಅನುಮತಿ ಕೋರಿದ್ದೆ. 'ಸರ್, ನಿಮ್ಮ ಅನುಮತಿಯೊಂದಿಗೆ, ನಾನು ದಯವಿಟ್ಟು ತೆರಳಬಹುದೇ?, ಸಮೀಕ್ಷೆಗಾಗಿ ದಿಘಾಗೆ ಹೋಗಬೇಕಾಗಿದೆ, ಹವಾಮಾನವೂ ತುಂಬಾ ಉತ್ತಮವಾಗಿಲ್ಲ' ಎಂದು ಕೋರಿದೆವು. ಬಳಿಕ ಅಲ್ಲಿಂದ ತೆರಳಿದೆವು ಎಂದು ತಿಳಿಸಿದ್ದಾರೆ.
ಯಾಸ್ ಚಂಡಮಾರುತ: 20,000 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಸಿಎಂ ಮಮತಾ ಮನವಿ
ಮೋದಿ ಸಭೆಯ ಬಗ್ಗೆ ಮಮತಾ ಅನುಮಾನ
ಪ್ರತಿ ಬಾರಿಯೂ ಕೇಂದ್ರ ಸರ್ಕಾರ ನನ್ನನ್ನು ಈ ರೀತಿ ಗುರಿ ಮಾಡುತ್ತದೆ. ಗುಜರಾತ್, ಒಡಿಶಾ, ಇತರ ರಾಜ್ಯಗಳಲ್ಲಿ ಪ್ರಧಾನಿ ಪರಿಶೀಲನೆ ನಡೆಸಿದಾಗ, ಪಕ್ಷದ ವಿರೋಧ ಪಕ್ಷದ ಸದಸ್ಯರು ಹಾಜರಿರಲಿಲ್ಲ. ಆದರೆ ಬಂಗಾಳದಲ್ಲಿ ಪ್ರತಿಪಕ್ಷ ನಾಯಕರು ಉಪಸ್ಥಿತರಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ ಮಮತಾ, ಪ್ರತಿ ಭಾರಿ ನೀವು ಬಂಗಾಳಕ್ಕೆ ಬಂದಾಗ ನಮ್ಮ ಸರ್ಕಾರದ ಕಾರ್ಯಚಟುವಟಿಕೆಗೆ ತೊಂದರೆಯಾಗುವಂತೆ ಏನಾದರೂ ಮಾಡುತ್ತೀರಿ ಎಂದು ಆರೋಪಿಸಿದ್ದಾರೆ.
ಯಾಸ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಜನರ ಸ್ಥಳಾಂತರ
ಮೋದಿಗೆ ಸೋಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ
ನೀವು ನಮ್ಮನ್ನು ಏಕೆ ಅವಮಾನಿಸುತ್ತೀರಿ? ನೀವು ನಮ್ಮನ್ನು ಏಕೆ ಗುರಿಯಾಗಿಸುತ್ತಿದ್ದೀರಿ? ನೀವು ನಮ್ಮಗೆ ಏಕೆ ತೊಂದರೆ ಕೊಡುತ್ತಿದ್ದೀರಿ? ಬಂಗಾಳದಲ್ಲಿ ನೀವು ಚುನಾವಣೆಯಲ್ಲಿ ಸೋತಿದ್ದೀರಿ ಎಂಬ ನಿಜಾಂಶವನ್ನು ನಿಮಗೆ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣಕ್ಕಾಗಿ ಹೀಗೆ ಮಾಡುತ್ತಿರುವಿರೇ? ಎಂದು ಪ್ರಶ್ನಿಸಿರುವ ಬಂಗಾಳ ಸಿಎಂ ಬ್ಯಾನರ್ಜಿ, ಬಂಗಾಳಕ್ಕೆ ನೀಡಿದ ಸಹಾಯಕ್ಕೆ ಪ್ರತಿಯಾಗಿ ಅವರ ಪಾದಗಳನ್ನು ಮುಟ್ಟುವಂತೆ ಪ್ರಧಾನಿ ಹೇಳಿದರೆ, ಬಂಗಾಳದ ಜನರಿಗೆ ಮತ್ತು ಬಂಗಾಳದ ಸುಧಾರಣೆಗಾಗಿ ನಾನು ಅದನ್ನು ಮಾಡಲು ಸಿದ್ಧನಿದ್ದೇನೆ, ಆದರೆ ದಯವಿಟ್ಟು ಈ ಕೊಳಕು ರಾಜಕೀಯ ಆಟಗಳನ್ನು ಆಡಬೇಡಿ. ಬಂಗಾಳವನ್ನು ಈ ರೀತಿ ಶಿಕ್ಷಿಸಬೇಡಿ. ಕಷ್ಟಪಟ್ಟು ಕಾರ್ಯನಿರ್ವಹಿಸುತ್ತಿರುವ ನಮ್ಮ ಮುಖ್ಯ ಕಾರ್ಯದರ್ಶಿಯನ್ನು ದಯವಿಟ್ಟು ಅವಮಾನಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಮುಖ್ಯ ಕಾರ್ಯದರ್ಶಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪತ್ರವನ್ನು ಹಿಂಪಡೆಯುವಂತೆ ನಾನು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ನೀವು ಅವರನ್ನು ಏಕೆ ಗುರಿಯಾಗಿಸುತ್ತಿದ್ದೀರಿ? ಈ ಮೂಲಕ ನೀವು ರಾಷ್ಟ್ರದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮುಖ್ಯ ಕಾರ್ಯದರ್ಶಿಗಳನ್ನು ಅವಮಾನಿಸುತ್ತಿದ್ದೀರಿ. ಐಎಎಸ್, ಐಪಿಎಸ್ ಮತ್ತು ಇತರ ಸಿವಿಕ್ ಸೇವೆಗಳಿಗೆ ಲಾಬಿ ಇಲ್ಲ ಎಂದು ನೀವು ಭಾವಿಸುತ್ತೀರಾ? ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)