ಕಲ್ಲು, ಮಣ್ಣಿನ ರಸಗುಲ್ಲ: ದೀದಿಗೆ ಧನ್ಯವಾದ ಹೇಳಿದ ಮೋದಿ
Recommended Video
ಕೋಲ್ಕತಾ, ಏಪ್ರಿಲ್ 29: ತಮಗೆ ಕಲ್ಲು, ಮಣ್ಣಿನಿಂದ ಮಾಡಿದ ರಸಗುಲ್ಲ ಕಳುಹಿಸುವುದಾಗಿ ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 'ಪ್ರಸಾದ'ಕ್ಕಾಗಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.
'ಮಣ್ಣಿನಿಂದ ಮಾಡಿದ ರಸಗುಲ್ಲದೊಳಗೆ ಕಲ್ಲುಗಳನ್ನು ಇಟ್ಟು ಕಳುಹಿಸಲು ದೀದಿ ಬಯಸಿದ್ದಾರೆ. ನಾನು ಎಷ್ಟು ಅದೃಷ್ಟವಂತ. ಬಂಗಾಳದ ಮಣ್ಣಿನಲ್ಲಿ ಲೆಕ್ಕವಿಲ್ಲದಷ್ಟು ಮಹಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ನಡೆದಾಡಿದ್ದಾರೆ. ಆ ಮಣ್ಣಿನಿಂದ ಮಾಡಿದ ರಸಗುಲ್ಲವನ್ನು ಮೋದಿಗೆ ನೀಡುವುದಾದರೆ ಅದು ಮೋದಿಗೆ ಪವಿತ್ರವಾದ ಪ್ರಸಾದ' ಎಂದು ಸೆರಂಪೋರ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮೋದಿ ಹೇಳಿದರು.
ಮಣ್ಣಿನ ಲಾಡು ಮಾಡಿ ಮೋದಿ ಹಲ್ಲು ಮುರಿಯಲು ಕಲ್ಲು ಇಡುತ್ತೇನೆಂದ ದೀದಿ ಮಮತಾ
'ನನಗೆ ಮಣ್ಣು ಪವಿತ್ರವಾದದ್ದು, ಸ್ಫೂರ್ತಿ ಮತ್ತು ಶಕ್ತಿ. ಬಂಗಾಳದ ಮಣ್ಣಿನಿಂದ ಮಾಡಿದ ರಸಗುಲ್ಲಕ್ಕಾಗಿ ನಾನು ಕಾಯುತ್ತೇನೆ. ನಿಮಗೆ ಬಹಳ ಕೃತಜ್ಞನಾಗಿರುತ್ತೇನೆ ಮತ್ತು ಮುಂಗಡವಾಗಿ ಧನ್ಯವಾದ ಸಲ್ಲಿಸುತ್ತೇನೆ. ಇಂತಹ ಪ್ರಸಾದವನ್ನು ಪಡೆದುಕೊಳ್ಳುವಷ್ಟು ಎಲ್ಲರೂ ಅದೃಷ್ಟಶಾಲಿಗಳಾಗಿರುವುದಿಲ್ಲ' ಎಂದರು.
'ನೀವು ರಸಗುಲ್ಲ ಕಳುಹಿಸುತ್ತಿರುವುದಕ್ಕೆ ನಾನು ಕೃತಜ್ಞನಾಗಿರುತ್ತೇನೆ. ಅದರಲ್ಲಿನ ಕಲ್ಲನ್ನು ನಿಮ್ಮ ಗೂಂಡಾಗಳು ಜನರ ಮೇಲೆ ಬಳಸಲು ಉಪಯೋಗಿಸುತ್ತಾರೆ. ಅವು ನನ್ನ ಬಳಿ ಬಂದರೆ ಬಂಗಾಳದ ಜನರಿಗೆ ಗಾಯಗಳಾಗುವುದಿಲ್ಲ' ಎಂದು ವ್ಯಂಗ್ಯವಾಗಿ ಹೇಳಿದರು.
ಪ್ರತಿ ವರ್ಷ ಕುರ್ತಾ, ಸಿಹಿ
ನಟ ಅಕ್ಷಯ್ ಕುಮಾರ್ ನಡೆಸಿದ ಸಂದರ್ಶನದಲ್ಲಿ, 'ಮಮತಾ ದೀದಿ ಪ್ರತಿ ವರ್ಷ ನನಗೆ ಒಂದು ಜೊತೆ ಕುರ್ತಾ ಕಳುಹಿಸುತ್ತಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನನಗೆ ಬಂಗಾಳದ ಸಿಹಿಯನ್ನು ಕಳುಹಿಸುವುದು ತಿಳಿದ ಬಳಿಕ ವರ್ಷಕ್ಕೆ ಒಂದೆರಡು ಬಾರಿ ಮಮತಾ ದೀದಿ ಕೂಡ ಬಂಗಾಳದ ಸಿಹಿಯನ್ನು ಕಳುಹಿಸಲು ಆರಂಭಿಸಿದ್ದರು' ಎಂದು ಮೋದಿ ಹೇಳಿದ್ದರು.
ಹಲ್ಲುಗಳು ಮುರಿಯಲಿ
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಮತಾ, 'ಮಣ್ಣಿನಿಂದ ಮಾಡಿದ ರಸಗುಲ್ಲಕ್ಕೆ ಕಲ್ಲುಗಳನ್ನು ಇಟ್ಟು ಅವರಿಗೆ ಕಳುಹಿಸುತ್ತೇನೆ. ಅದನ್ನು ತಿನ್ನುವಾಗ ಅವರ ಹಲ್ಲುಗಳು ಮುರಿಯಲಿ' ಎಂದಿದ್ದರು. ಮಣ್ಣಿನ ಲಾಡು ತಯಾರಿಸಿ ಮೋದಿ ಅವರ ಹಲ್ಲು ಮುರಿಯಲು ಗೋಡಂಬಿ ಬದಲು ಕಲ್ಲು ಇಡುತ್ತೇನೆ ಎಂದು ಕೆಂಡ ಕಾರಿದ್ದರು.
'ರಸಗುಲ್ಲಾ ನೀಡ್ತೀವಿ, ಮತಗಳನ್ನಲ್ಲ' ಮೋದಿ ಮಾತಿಗೆ ಮಮತಾ ದೀದಿ ಉತ್ತರ
ಬಿಜೆಪಿಗೆ ಮತ ಸಿಗುವುದಿಲ್ಲ
ಅವರು ರಸಗುಲ್ಲ ಪಡೆಯಬಹುದೇ ವಿನಾ ಒಂದೇ ಒಂದು ವೋಟು ಪಡೆಯಲಾರರು ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದರು. "ನಾವು ರಸಗುಲ್ಲಾ ಮತ್ತು ಉಡುಗೊರೆಗಳನ್ನು ಕೊಟ್ಟು ಅತಿಥಿಗಳನ್ನು ಆಹ್ವಾನಿಸುತ್ತೇವೆ. ಆದರೆ ಒಂದು ಮತ (ಬಿಜೆಪಿಗೆ) ಸಹ ನೀಡುವುದಿಲ್ಲ" ಎಂದು ದೀದಿ ಖಾರವಾಗಿ ಹೇಳಿದ್ದರು.
ಪವಿತ್ರವಾದ ಮಣ್ಣು
ಮಮತಾ ಬ್ಯಾನರ್ಜಿ ಅವರ ಆಕ್ರೋಶ ಭರಿತ ಮಾತುಗಳಿಗೆ ಅಷ್ಟೇ ತಣ್ಣನೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ನೀವು ಕಳುಹಿಸುವ 'ಪ್ರಸಾದ' ನನಗೆ ಪವಿತ್ರವಾದದ್ದು. ಏಕೆಂದರೆ ಅದನ್ನು ತಯಾರಿಸುವ ಮಣ್ಣಿನ ಮೇಲೆ ಅನೇಕ ಮಹಾಪುರುಷರು, ಸ್ವಾತಂತ್ರ್ಯ ಹೋರಾಟಗಾರರು ಓಡಾಡಿದ್ದಾರೆ. ಅದನ್ನು ಕಳುಹಿಸುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.