ಉತ್ತರ ಪ್ರದೇಶದಲ್ಲಿರುವುದು ರಾಮರಾಜ್ಯವಲ್ಲ, ಕೊಲೆಗಡುಕ ಸರ್ಕಾರ ಎಂದ ದೀದಿ
ಕೋಲ್ಕತ್ತ, ಅಕ್ಟೋಬರ್ 04: ಉತ್ತರ ಪ್ರದೇಶದಲ್ಲಿರುವುದು ರಾಮರಾಜ್ಯವಲ್ಲ, ಕೊಲೆಗಡುಕ ಸರ್ಕಾರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ದೇಶದಲ್ಲಿ ನಿರಂಕುಶ ಪ್ರಭುತ್ವ ಅಸ್ತಿತ್ವದಲ್ಲಿದೆ, ಉತ್ತರ ಪ್ರದೇಶದಲ್ಲಿ ಕೊಲೆಗಡುಕ ಸರ್ಕಾರವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದ ಕುರಿತು ಮಾತನಾಡಿದ ಅವರು, ದೇಶದಲ್ಲಿ ಇಂದು ನಡೆಯುತ್ತಿರುವ ಘಟನೆಗಳು ಪ್ರಜಾಪ್ರಭುತ್ವವನ್ನು ಬಿಂಬಿಸುತ್ತಿಲ್ಲ. ಬದಲಿಗೆ ನಿರಂಕುಶ ಪ್ರಭುತ್ವ ಇರುವುದನ್ನು ಸಾಬೀತುಪಡಿಸಿವೆ.
ಉತ್ತರ ಪ್ರದೇಶ ಹೊಸ ಜಮ್ಮು ಕಾಶ್ಮೀರ ಎಂದ ಒಮರ್ ಅಬ್ದುಲ್ಲಾ
ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ಅಲ್ಲಿ ರಾಮರಾಜ್ಯವಿಲ್ಲ, ಕೊಲೆಗಡುಕ ಸರ್ಕಾರವಿದೆ ಎಂದಿದ್ದಾರೆ.
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿ ವಿರೋಧಿಸಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ಕೃಷಿ ವಿರೋಧಿ ಕಾನೂನು ಪ್ರತಿಭಟನಾಕಾರರ ಗುಂಪೊಂದರ ಮೇಲೆ ಎರಡು ಕಾರನ್ನು ಹರಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತು.
ಈ ಘಟನೆಯಿಂದಾಗಿ ಅನೇಕ ಮಂದಿ ರೈತರು ತೀವ್ರ ರೀತಿಯಲ್ಲಿ ಗಾಯಗೊಂಡಿರುವುದಾಗಿ ದೃಢಪಡಿಸದ ವರದಿಗಳು ಹೇಳಿವೆ. ಉದ್ರಿಕ್ತಗೊಂಡ ಪ್ರತಿಭಟನಾಕರರು ಎರಡು ಕಾರುಗಳನ್ನು ತಡೆದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಅನೇಕ ಪತ್ರಕರ್ತರು ಕೂಡಾ ತೀವ್ರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಜಿಲ್ಲಾಡಳಿತ ಹೇಳಿಕೆ: ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಎಂಟು ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಮೃತಪಟ್ಟವರಲ್ಲಿ ನಾಲ್ವರು ರೈತರಾದರೆ, ಉಳಿದ ನಾಲ್ವರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಹಿಂಸಾಚಾರದ ಬಳಿಕ ಮಾಹಿತಿ ನೀಡಿದೆ.
ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಕಾರಣ ಕೂಡಲೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಪ್ರಸ್ತುತ ಪರಿಸ್ಥಿತಿ ತಹಬಂದಿಗೆ ಬಂದಿದೆ ಎಂದು ತಿಳಿಸಿದೆ.
ಪ್ರತಿಭಟನಾಕಾರರ ಮೇಲೆ ನುಗ್ಗಿದ್ದ ಕಾರೊಂದರಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಇದ್ದರು ಎಂದು ಆರೋಪಿಸಲಾಗಿದೆ. ಸಚಿವರ ಪುತ್ರನ ಕಾರಿಗೆ ಸಿಲುಕಿಯೇ ಎಂಟು ರೈತರು ಮೃತಪಟ್ಟಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಎಂಟು ರೈತರಲ್ಲ, ನಾಲ್ವರು ರೈತರು ಕಾರಿಗೆ ಸಿಲುಕಿಯೇ ಮೃತಪಟ್ಟಿದ್ದು, ಬಳಿಕ ಉಂಟಾದ ಹಿಂಸಾಚಾರದಲ್ಲಿ ಉಳಿದ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಬೆಂಗಾವಲು ಪಡೆ ಕಾರುಗಳು ರೈತರ ಮೇಲೆ ನುಗ್ಗಿದ ತಕ್ಷಣ ಪ್ರತೀಕಾರಕ್ಕೆ ಇಳಿದ ರೈತರು, ಕಲ್ಲು ತೂರಾಟ ನಡೆಸಿದರು. ಆಗ ಎರಡು ಕಾರುಗಳು ಉರುಳಿ ಬಿದ್ದು ಹಲವರು ಪ್ರತಿಭಟನಾಕಾರರ ಕೈಗೆ ಸಿಲುಕಿ ಥಳಿತಕ್ಕೊಳಗಾದರು. ಬಿಜೆಪಿಯ ಮೂವರು ಕಾರ್ಯಕರ್ತರು ಮತ್ತು ಕಾರಿನ ಚಾಲಕನನ್ನು ರೈತರು ಹೊಡೆದು ಸಾಯಿಸಿದರು ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಈ ಹಿಂಸಾಚಾರ ವರದಿ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಮೌರ್ಯ ಬನ್ಬೀರ್ಪುರ ಗ್ರಾಮಕ್ಕೆ ಭೇಟಿ ನೀಡುವುದನ್ನು ರದ್ದುಪಡಿಸಿದ್ದಾರೆ.
ಘಟನೆ ಕುರಿತು ಸಚಿವ ಅಜಯ್ ಮಿಶ್ರಾ ಅವರು ಹೇಳುತ್ತಿರುವುದೇ ಬೇರೆಯಾಗಿದೆ. 'ಪ್ರತಿಭಟನಾ ಸ್ಥಳಕ್ಕೆ ಕಾರು ತೆರಳಿದಾಗ ಅದರ ಮೇಲೆ ರೈತರು ದಾಳಿ ಮಾಡಿದ್ದಾರೆ. ಮನಸ್ಸಿಗೆ ಬಂದ ಹಾಗೆ ಕಲ್ಲು ತೂರಾಟ ನಡೆಸಿದ್ದಾರೆ. ಏಕಾಏಕಿ ದಾಳಿ ನಡೆದ ಕಾರಣ ಕಾರು ಅಪಘಾತವಾಗಿದೆ.
ಆಗ ಕಾರಿಗೆ ಸಿಲುಕಿ ಇಬ್ಬರು ರೈತರು ಮೃತಪಟ್ಟಿದ್ದಾರೆ' ಎಂದಿದ್ದಾರೆ. ಅಲ್ಲದೆ, 'ಅಪಘಾತದಲ್ಲಿ ಇಬ್ಬರು ರೈತರು ಮೃತಪಡುತ್ತಲೇ ರೈತರು ಮತ್ತಷ್ಟು ಹಿಂಸಾತ್ಮಕವಾಗಿ ದಾಳಿ ನಡೆಸಿದ್ದಾರೆ. ರೈತರ ದಾಳಿಯಲ್ಲಿ ಬಿಜೆಪಿಯ ಮೂವರು ಕಾರ್ಯಕರ್ತರು ಹಾಗೂ ಒಬ್ಬ ಕಾರು ಚಾಲಕ ಮೃತಪಟ್ಟಿದ್ದಾರೆ' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕಳೆದ ಜನವರಿ 26ರಂದು ದಿಲ್ಲಿಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲೂ ಪ್ರತಿಭಟನೆ ಹಿಂಸಾರೂಪ ಪಡೆದಿದೆ.
ಸತ್ಯಾಂಶ ಜನರಿಗೆ ತಿಳಿಯುವುದು ಬಿಜೆಪಿಗೆ ಬೇಕಿಲ್ಲ, ಅದಕ್ಕಾಗಿಯೇ ಅಲ್ಲಿ 144 ಸೆಕ್ಷನ್ ಹೇರಿದ್ದಾರೆ ಎಂದು ಹೇಳಿದ್ದಾರೆ.