ಬಿಜೆಪಿ ಕಾರ್ಯಕರ್ತರು ಬಾಂಬ್, ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿದ್ದರು; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಸೆ.14: ಕೋಲ್ಕತ್ತಾ ಮತ್ತು ಹೌರಾದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಾಂಬ್ ಮತ್ತು ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿದ್ದರು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಬುಧವಾರ ಹಿಂಸಾಚಾರದ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಬಿಜೆಪಿ ಕಾರ್ಯಕರ್ತರು ಬಾಂಬ್ ಮತ್ತು ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿದ್ದರು ಎಂದು ಆರೋಪಿಸಿದ್ದಾರೆ.
ಕೋಲ್ಕತ್ತಾ ಪ್ರತಿಭಟನೆ: ಪೊಲೀಸ್ ವ್ಯಾನ್ಗೆ ಬೆಂಕಿ- ವಿಡಿಯೋ ವೈರಲ್
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಡಳಿತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿರೋಧಿಸಿ ರಾಜ್ಯ ಸಚಿವಾಲಯ ನಬನ್ನ ಭವನಕ್ಕೆ ಬಿಜೆಪಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿತ್ತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಮತ್ತು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ಸುಮಾರು 20 ಜನರನ್ನು ಬಂಧಿಸಲಾಗಿದೆ.
ಪ್ರಜಾಸತ್ತಾತ್ಮಕ ಚಳವಳಿ ನಡೆಸುವ ಹಕ್ಕು ಎಲ್ಲರಿಗಿದೆ
"ಪೊಲೀಸರು ಬಯಸಿದಲ್ಲಿ ಗುಂಡು ಹಾರಿಸಬಹುದಿತ್ತು ಆದರೆ ಅದು ಒಳ್ಳೆಯದಲ್ಲ. ಅವರು ಅತ್ಯುತ್ತಮವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ನಾವು ಎಂದಿಗೂ ಪ್ರಜಾಪ್ರಭುತ್ವ ಚಳವಳಿಗಳನ್ನು ನಿಲ್ಲಿಸುವುದಿಲ್ಲ. ಪ್ರಜಾಸತ್ತಾತ್ಮಕ ಚಳವಳಿಗಳನ್ನು ನಡೆಸುವ ಹಕ್ಕು ಎಲ್ಲ ಜನರಿಗೆ ಇದೆ. ಆದರೆ ಗೂಂಡಾಗಿರಿ ಅದರ ಭಾಗವಾಗಿರಲು ಸಾಧ್ಯವಿಲ್ಲ. ದಾಳಿಗಳು ಮತ್ತು ಬೆಂಕಿ ಹಚ್ಚುವಲ್ಲಿ ಭಾಗಿಯಾಗಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ" ಎಂದು ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಹಾರ ಮತ್ತು ಹಲವೆಡೆಯಿಂದ ಜನರನ್ನು ಕರೆತರಲಾಗಿದೆ
"ರಾಜ್ಯದಲ್ಲಿ ತೊಂದರೆಯನ್ನು ಸೃಷ್ಟಿಸಲು ಜನರನ್ನು ಬಿಹಾರ ಮತ್ತು ಇತರ ಸ್ಥಳಗಳಿಂದ ರೈಲುಗಳಲ್ಲಿ ಕರೆತರಲಾಯಿತು" ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಬಿಜೆಪಿ ನಾಯಕರು ಹಲ್ಲೆಯ ಆರೋಪಗಳನ್ನು ನಿರಾಕರಿಸಿದೆ.
ಕೋಲ್ಕತ್ತಾ ಮತ್ತು ಹೌರಾದಲ್ಲಿ ನಡೆದ ಹಿಂಸಾಚಾರದಲ್ಲಿ ಅಧಿಕಾರಿಗಳು ಸೇರಿದಂತೆ 27 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜನರ ಗಮನ ಬೇರೆಡೆ ಸೆಳೆಯಲು ದಾಳಿ ನಡೆಸಲಾಗಿದೆ
"ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿಂಸಾಚಾರವನ್ನು ನಡೆಸಿದೆ. ದಾಳಿಗಳನ್ನು ನಡೆಸಲು ಅದರ ಕಾರ್ಯಕರ್ತರನ್ನು ಪ್ರತಿಭಟನೆಯಲ್ಲಿ ಸೇರಿಸಲಾಯಿತು. ನಮ್ಮ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿಲ್ಲ. ಗಾಯಗೊಂಡು ಆಸ್ಪತ್ರೆಯಲ್ಲಿರುವ ಪೊಲೀಸ್ ಅಧಿಕಾರಿಗಳ ಬಗ್ಗೆ ನಾವು ಸಂಪೂರ್ಣ ಸಹಾನುಭೂತಿ ಹೊಂದಿದ್ದೇವೆ" ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಟಿಎಂಸಿಯಲ್ಲಿನ ಬಿರುಕುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
"ಟಿಎಂಸಿಯಲ್ಲಿ ಇಬ್ಬರು ನಾಯಕರ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯದಿಂದ ಗಮನವನ್ನು ಬೇರೆಡೆ ಸೆಳೆಯಲು ಇದನ್ನು ಮಾಡಲಾಗಿದೆ. ನಾನು ಹೆಸರುಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಶಾಂತಿಯುತ ಪ್ರಜಾಸತ್ತಾತ್ಮಕ ಚಳವಳಿಗಳನ್ನು ಈ ರೀತಿಯಲ್ಲಿ ಹತ್ತಿಕ್ಕಿದರೆ, ನಾವು ಸಂವಿಧಾನದ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ಅಧಿಕಾರಿಗಳು ಸೇರಿ 27 ಪೊಲೀಸ್ ಸಿಬ್ಬಂದಿಗೆ ಗಾಯ
ಮಂಗಳವಾರ ಹಲವು ಸ್ಥಳಗಳಲ್ಲಿ ಪೊಲೀಸರು ಲಾಠಿ, ಜಲಫಿರಂಗಿ, ಅಶ್ರುವಾಯು ಶೆಲ್ಗಳು ಮತ್ತು ಸ್ಟನ್ ಗ್ರೆನೇಡ್ಗಳನ್ನು ಬಳಸಿ ಕಲ್ಲು ತೂರಾಟ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಚದುರಿಸಿದರು. ಮುಖ್ಯವಾಗಿ ಹೌರಾದ ಸಂತ್ರಗಚ್ಚಿ ಮತ್ತು ಕೋಲ್ಕತ್ತಾದ ಮಹಾತ್ಮಾ ಗಾಂಧಿ ರಸ್ತೆ, ಬುರ್ರಾಬಜಾರ್ ಮತ್ತು ಬ್ರಬೋರ್ನ್ ರಸ್ತೆಯಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ.
ಬಿಜೆಪಿ ಕಾರ್ಯಕರ್ತರು ಸೆಕ್ರೆಟರಿಯೇಟ್ ಕಡೆಗೆ ತೆರಳದಂತೆ ತಡೆದ ನಂತರ ಹಲವು ಸ್ಥಳಗಳಲ್ಲಿ ಹಲವು ಗಂಟೆಗಳ ಕಾಲ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು ಹಿಂಸಾಚಾರದಲ್ಲಿ ಅಧಿಕಾರಿಗಳು ಸೇರಿದಂತೆ 27 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ಅಭಿಷೇಕ್ ಬ್ಯಾನರ್ಜಿ ಅವರು ಕೋಲ್ಕತ್ತಾ ಪೊಲೀಸ್ ಸಹಾಯಕ ಕಮಿಷನರ್ ದೇಬ್ಜಿತ್ ಚಟರ್ಜಿ ಅವರನ್ನು ನೋಡಲು ಎಸ್ಎಸ್ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರಿಂದ ಅವರ ಬಲಗೈ ಮುರಿದಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಿಜೆಪಿ ಕಾರ್ಯಕರ್ತರ ಕಲ್ಲು ತೂರಾಟದಲ್ಲಿ ಹೌರಾದ ಜಗಚ್ಚಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತಿನಾಥ್ ಚತ್ತರಾಜ್ ಅವರ ಬಲಗಣ್ಣಿಗೆ ಗಾಯವಾಗಿದೆ. ಕೋಲ್ಕತ್ತಾದ ಜೋರಾಬಗನ್ ಪೊಲೀಸ್ ಠಾಣೆಯ ಹೆಚ್ಚುವರಿ ಅಧಿಕಾರಿಗೂ ಗಾಯವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.