ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಡ್ರಿಪ್ ಬಾಟಲಿ ಸಮೇತ ಹೊರಗೋಡಿ ಬಂದ ರೋಗಿಗಳು
ಕೋಲ್ಕತಾ, ಅಕ್ಟೋಬರ್ 3: ಕಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡ ತೀವ್ರ ಆತಂಕ ಸೃಷ್ಟಿಸಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಮತ್ತು ಅವರ ಸಂಬಂಧಿಕರು ಭಯಭೀತರಾಗಿದ್ದರು. ಸುಮಾರು 250 ರೋಗಿಗಳನ್ನು ಆಸ್ಪತ್ರೆಗೆ ಸುರಕ್ಷಿತ ಬ್ಲಾಕ್ಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಗಂಭೀರ ಸಮಸ್ಯೆ ಎದುರಿಸುತ್ತಿದ್ದವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್ಗಳಲ್ಲಿ ಕರೆದೊಯ್ಯಲಾಯಿತು.
ಪ್ರಾಥಮಿಕ ವರದಿಗಳ ಪ್ರಕಾರ, ಬೆಳಿಗ್ಗೆ ಆಸ್ಪತ್ರೆಯ ಔಷಧೀಯ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ರೋಗಿಗಳನ್ನು ಸ್ಟ್ರೆಚರ್ಗಳಲ್ಲಿ ಬೇರೆಡೆಗೆ ಸಾಗಿಸಲಾಯಿತು. ಇನ್ನು ಅನೇಕ ರೋಗಿಗಳು ನೆಲದ ಮೇಲೆ ಬಿದ್ದು ಸಹಾಯಕ್ಕಾಗಿ ಯಾಚಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಕೋಲ್ಕತ್ತಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 250 ರೋಗಿಗಳು ಶಿಫ್ಟ್
ಬೆಂಕಿಯ ಜ್ವಾಲೆಗಳು ಕಾಣಿಸಿಕೊಳ್ಳದಿದ್ದರೂ, ದಟ್ಟವಾದ ಹೊಗೆ ಕಟ್ಟಡವನ್ನು ಆವರಿಸಿಕೊಂಡಿತ್ತು. ಕಟ್ಟಡದಲ್ಲಿ ಇರಿಸಿದ್ದ ಔಷಧಗಳು ಸುಟ್ಟು ಕರಕಲಾಗಿವೆ.
ಅಗ್ನಿ ಅವಘಡ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಗಾಬರಿಗೊಂಡ ರೋಗಿಗಳ ಚೀರಾಟ ಕಟ್ಟಡದ ಆವರಣದಲ್ಲಿ ಪ್ರತಿಧ್ವನಿಸಿತ್ತು. ಕೆಲವರು ಹೊದ್ದುಗೊಂಡಿದ್ದ ಬೆಡ್ಶೀಟ್, ಡ್ರಿಪ್ ಬಾಟಲಿಗಳನ್ನು ಹೊತ್ತುಕೊಂಡೇ ಹೊರಕ್ಕೆ ಹೋಡಿಬಂದರು.
ಈ ಘಟನೆಯ ಕೆಲವು ಚಿತ್ರ- ವರದಿ ಇಲ್ಲಿವೆ.
ಆಕ್ಸಿಜನ್ ಸುರಕ್ಷಿತ
ಬೆಂಕಿ ದಟ್ಟವಾಗುವ ಸೂಚನೆ ಕಂಡಕೂಡಲೇ ರೋಗಿಗಳನ್ನು ರಕ್ಷಿಸಿದ್ದಲ್ಲದೆ, ಬೆಲೆ ಬಾಳುವ ಉಪಕರಣಗಳನ್ನು ಬೇರೆ ಕಟ್ಟಡಗಳಿಗೆ ಸಾಗಿಸಲಾಯಿತು. ಬೆಂಕಿಯನ್ನು ನಿಯಂತ್ರಿಸಿದ ಅಧಿಕಾರಿಗಳು ಹೆಚ್ಚಿನ ಅವಘಡಗಳಿಗೆ ಅವಕಾಶ ನೀಡದಂತೆ ಮೊದಲು ಆಕ್ಸಿಜನ್ ಸಿಲಿಂಡರ್ಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು.
ಕೊಲ್ಕತ್ತ: ಬಾಂಬ್ ಸ್ಫೋಟ ಒಂದು ಸಾವು, 12 ಜನಕ್ಕೆ ಗಾಯ
ರೋಗಿಗಳಿಗೆ ಸಂಕಷ್ಟ
ಮೊದಲ ಮಹಡಿಯಲ್ಲಿನ ಹೃದ್ರೋಗ ವಿಭಾಗದಲ್ಲಿ ದಾಖಲಾಗಿದ್ದ ಸುಮಾರು 57 ರೋಗಿಗಳನ್ನು ತುರ್ತು ನಿಗಾಘಟಕಕ್ಕೆ ಸ್ಥಳಾಂತರ ಮಾಡಲಾಯಿತು. ಆಂಜಿಯೊಪ್ಲಾಸ್ಟಿ, ಪೇಸ್ಮೇಕರ್ ಇಂಪ್ಲಾಂಟೇಷನ್ ಮುಂತಾದವುಗಳ ಶಸ್ತ್ರಚಿಕಿತ್ಸೆಗೆ ಈ ರೋಗಿಗಳು ಒಳಗಾಗಿದ್ದರು. ಅವರಿಗೆ ಅಳವಡಿಸಿದ್ದ ಡ್ರಿಪ್ ಸಮೇತ ಸ್ಟ್ರೆಚರ್ನಲ್ಲಿ ಕರೆದೊಯ್ಯಲಾಯಿತು.
ಕೋಲ್ಕತ್ತಾ : ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಆಕಸ್ಮಿಕ
ತನಿಖೆ ಆರಂಭ
ಎಲ್ಲ ರೋಗಿಗಳ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಕೋಲ್ಕತಾ ಮೇಯರ್ ಶೊವೊನ್ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ. ಸ್ಥಳದಲ್ಲಿ ವಿವಿಧ ಅಧಿಕಾರಿಗಳು ಮೊಕ್ಕಾ ಹೂಡಿದ್ದು, ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಬೇರೆಡೆಗೆ ಹೋಗಲು ತೀರ್ಮಾನ
ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ, ರೋಗಿಗಳಲ್ಲಿ ಸಹಜವಾಗಿಯೇ ಭಯ ಮೂಡಿಸಿದೆ. ಇನ್ನೇನಾದರೂ ಹೆಚ್ಚಿನ ಅನಾಹುತವಾದರೆ ಏನು ಮಾಡುವುದು ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆ ತೆರಳಲು ಅನೇಕರು ನಿರ್ಧರಿಸಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಂದ ಬಳಿಕವೂ ಬೇರೆ ಆಸ್ಪತ್ರೆಗೆ ಹೋಗುವುದೇ ಸುರಕ್ಷಿತ ಎಂಬ ಭಾವ ಅನೇಕರಲ್ಲಿ ಮೂಡಿದೆ.
ನೆಲದ ಮೇಲೆಯೇ ಮಲಗಿದರು
ಆಸ್ಪತ್ರೆ ಹೊರಗೆ ಕೂಡ ಪರ್ಯಾಯ ವ್ಯವಸ್ಥೆ ಇಲ್ಲದೆ, ನಿಂತುಕೊಳ್ಳಲಾಗದ ರೋಗಿಗಳು ಓಡಾಡುವ ಸ್ಥಳಗಳಲ್ಲಿಯೇ ಮಲಗಿಕೊಂಡಿದ್ದರು. ರೋಗಿಗಳ ಸಂಬಂಧಿಕರು ತಮ್ಮವರಿಗಾಗಿ ಹುಡುಕಾಡುತ್ತಾ ಅಳುವ ದೃಶ್ಯಗಳು ಸಾಮಾನ್ಯವಾಗಿತ್ತು.
ಮತ್ತೆ ಮತ್ತೆ ಬೆಂಕಿ
ಕೋಲ್ಕತಾದಲ್ಲಿ ಈ ವರ್ಷ ಅನೇಕ ಬೆಂಕಿ ಅವಘಡಗಳು ಸಂಭವಿಸಿವೆ. ಮಂಗಳವಾರ ರಾತ್ರಿ ಕೇಂದ್ರ ಕೋಲ್ಕತಾದಲ್ಲಿ ಹೋಟೆಲ್ ಒಂದರ ಕಿಚನ್ನಲ್ಲಿ ಅಗ್ನಿ ಅನಾಹುತ ಉಂಟಾಗಿತ್ತು. ಸೆ. 16ರಂದು ಬಾಗ್ರಿ ಮಾರುಕಟ್ಟೆಯಲ್ಲಿ ಐದಂಸ್ತಿನ ಕಟ್ಟಡದಲ್ಲಿ ಬೆಂಕಿ ನಂದಿಸುವಾಗ ಅಗ್ನಿಶಾಮಕದ ದಳದ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿತ್ತು. ಜನವರಿಯಲ್ಲಿ ಡುಂಡುಂ ಕಂಟೋನ್ಮೆಂಟ್ನಲ್ಲಿನ ಗೋರಬಜಾರ್ನಲ್ಲಿ ಉಂಟಾದ ಬೆಂಕಿಯಲ್ಲಿ 150 ಅಂಗಡಿಗಳು ಸುಟ್ಟುಹೋಗಿದ್ದವು. ಘಟನೆಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದರು.