'ಹಿಂದೂ ಪಾಕಿಸ್ತಾನ' ಹೇಳಿಕೆ ನೀಡಿದ್ದ ಸಂಸದ ಶಶಿ ತರೂರ್ ಗೆ ಬಂಧನ ವಾರೆಂಟ್
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಆಗಸ್ಟ್ 13: 'ಹಿಂದೂ ಪಾಕಿಸ್ತಾನ' ರಚನೆ ಬಗ್ಗೆ ಕಳೆದ ವರ್ಷ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಸಂಸದ (ತಿರುವನಂತಪುರ ಲೋಕಸಭಾ ಕ್ಷೇತ್ರ) ಶಶಿ ತರೂರ್ ಅವರಿಗೆ ಕೋಲ್ಕತ್ತಾ ಕೋರ್ಟ್ ಮಂಗಳವಾರ ಬಂಧನ ವಾರೆಂಟ್ ಹೊರಡಿಸಿದೆ. ವಕೀಲರಾದ ಸುಮೀತ್ ಚೌಧರಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಕಳೆದ ವರ್ಷ ಜುಲೈನಲ್ಲಿ ಶಶಿ ತರೂರ್ ಹೇಳಿಕೆ ನೀಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಲ್ಲಿ ಅದು 'ಹಿಂದೂ ಪಾಕಿಸ್ತಾನ್' ರಚನೆಯ ಸನ್ನಿವೇಶವನ್ನು ನಿರ್ಮಿಸುತ್ತದೆ ಎಂದು ಹೇಳಿದ್ದರು.
ಹಿಂದು ಪಾಕಿಸ್ತಾನ ಹೇಳಿಕೆ: ತರೂರ್ ವಿರುದ್ಧ ಪ್ರಕರಣ ದಾಖಲು
"ಒಂದು ವೇಳೆ ಅವರು (ಬಿಜೆಪಿ) ಲೋಕಸಭೆಯಲ್ಲಿ ಗೆಲುವು ಪುನರಾವರ್ತಿಸಿದರೆ ನಮಗೆ ಅರ್ಥವಾಗಿರುವ ನಮ್ಮ ಪ್ರಜಾತಂತ್ರ ಸಂವಿಧಾನ ಉಳಿಯುವುದಿಲ್ಲ ಸಂವಿಧಾನದಿಂದ ಅವರಿಗೆ ತೆಗೆಯಬೇಕಾದ ಅಂಶಗಳನ್ನು ತೆಗೆದು, ಭಾರತಕ್ಕೆ ಹೊಸ ಸಂವಿಧಾನ ಬರೆಯುತ್ತಾರೆ" ಎಂದಿದ್ದರು.
ಹೊಸ ಸಂವಿಧಾನವು ಹಿಂದೂ ರಾಷ್ಟ್ರದ ಸಿದ್ಧಾಂತದೊಂದಿಗೆ ರಚನೆ ಆಗುತ್ತದೆ. ಅದರಲ್ಲಿ ಅಲ್ಪಸಂಖ್ಯಾತರಿಗೆ ಸಮಾನತೆ ತೆಗೆಯಲಾಗುತ್ತದೆ. ಆ ಮೂಲಕ ಹಿಂದೂ ಪಾಕಿಸ್ತಾನ್ ನಿರ್ಮಾಣ ಆಗುತ್ತದೆ. ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದ ಮಹಾ ನಾಯಕರಾದ ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಮತ್ತಿತರರು ಹೋರಾಟ ನಡೆಸಿರುವುದು ಇದಕ್ಕಾಗಿ ಅಲ್ಲ ಎಂದಿದ್ದರು ಶಶಿ ತರೂರ್.