ಟಿಎಂಸಿ ಬೆಚ್ಚುವಂಥ ಸುದ್ದಿ ಹೊರ ಹಾಕಿದ ಬಿಜೆಪಿ ಮುಖಂಡ
ಕೋಲ್ಕತಾ, ಜನವರಿ 15: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಈ ಬಾರಿ ಹಿನ್ನಡೆಯಾಗುವಂಥ ಸುದ್ದಿಯನ್ನು ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗಿಯಾ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷ ಸೇರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ಕೈಲಾಶ್, ಸುಮಾರು 41 ಮಂದಿ ಟಿಎಂಸಿ ಶಾಸಕರು ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದಿದ್ದಾರೆ.
ಬಂಗಾಳದಲ್ಲಿ ಮೊದಲಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ಬಿಜೆಪಿ
"41ಕ್ಕೂ ಅಧಿಕ ಟಿಎಂಸಿ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದು, ಮಮತಾ ಸರ್ಕಾರ ಪತನವಾಗಲಿದೆ. ಆದರೆ, ಸೂಕ್ತ ಅಭ್ಯರ್ಥಿಗಳನ್ನು ಮಾತ್ರ ಬಿಜೆಪಿ ಆಯ್ಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಸಲಿದೆ'' ಎಂದಿದ್ದಾರೆ.
ನುಸುಳುಕೋರರು ಅಕ್ರಮ ಚಟುವಟಿಕೆಗಳನ್ನು ನಡೆಯದಂತೆ ಬಿಜೆಪಿ ತಡೆಗಟ್ಟಲಿದೆ ಎಂಬ ಭಯ ದುಷ್ಕರ್ಮಿಗಳಲ್ಲಿ ಆವರಿಸಿದೆ.
ಕೊವಿಡ್ 19 ಲಸಿಕೆ ಅಭಿಯಾನದ ಲಾಭವನ್ನು ಹೈಜಾಕ್ ಮಾಡಲು ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ಮೊದಲ ಹಂತದ ಲಸಿಕೆ ಪೂರೈಕೆ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಕೇಂದ್ರದ ಬಿಜೆಪಿ ಸರ್ಕಾರವೇ ಭರಿಸುತ್ತಿದೆ. ಆದರೆ, ಮಮತಾ ಅವರು ಲಸಿಕೆಯನ್ನು ಟಿಎಂಸಿ ಸರ್ಕಾರವೇ ಉಚಿತವಾಗಿ ಹಂಚುತ್ತಿದೆ ಎಂದು ಹೇಳಿಕೊಂಡಿದ್ದಾರೆ, ಸತ್ಯ ಜನರ ಮುಂದೆ ಇದೆ ಎಂದು ಕೈಲಾಶ್ ಹೇಳಿದರು.
ಪಕ್ಷ ತೊರೆಯುತ್ತಿರುವ ನಾಯಕರು; ತೃಣಮೂಲ ಕಾಂಗ್ರೆಸ್ಗೆ ಭಾರೀ ಸವಾಲು
2021ರಲ್ಲಿ ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ಜೊತೆಗೆ ಏಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಮಮತಾ ಬ್ಯಾನರ್ಜಿ ನೇತೃತ್ವ ತೃಣಮೂಲ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಜನತೆ ಬೇಸತ್ತಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ.
2019ರ ಲೋಕಸಭೆ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ 22 ಸ್ಥಾನ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದ ಅಮಿತ್ ಶಾ ಅವರು ಅಂತಿಮವಾಗಿ 18 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಶೇ 40.5 ಮತ ಗಳಿಕೆ ಮೂಲಕ ಬಿಜೆಪಿಗೆ ಬೆಂಗಾಳದಲ್ಲಿ ಗೆಲುವಿನ ಹುರುಪು ಮೂಡಿತ್ತು. ಟಿಎಂಸಿ ಪ್ರಮುಖ ಮುಖಂಡ ಸುವೇಂದು ಅಧಿಕಾರಿ ಸೇರಿದಂತೆ ಹಲವಾರು ನಾಯಕರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದು ಬಿಜೆಪಿ ಬಲವನ್ನು ಇನ್ನಷ್ಟು ಹೆಚ್ಚಿಸಿದೆ.