ಕಾಳಿ ದೇವಿಗೆ ಸಿಗರೇಟು, ಮಾಂಸ; ಟಿಎಂಸಿ ಸಂಸದೆ ಮೊಯಿತ್ರಾ ವಿರುದ್ಧ ಪೊಲೀಸ್ ಕೇಸ್
ಕೋಲ್ಕತ್ತಾ, ಜುಲೈ 12: ಕಾಳಿ ದೇವಿ ಬಾಯಲ್ಲಿ ಸಿಗರೇಟು ಇಟ್ಟಿಕೊಂಡ ಪೋಸ್ಟರ್ಗೆ ಸಂಬಂಧಿಸಿದಂತೆ ನೀಡಿದ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಹೊಸ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ.
ಸಿಂಘಾ ಬಹಿನಿ ಎಂಬ ಹಿಂದೂ ಹಕ್ಕುಗಳ ಸಂಘಟನೆಯು ಅಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹೊಸ ದೂರನ್ನು ದಾಖಲಿಸಿದೆ. "ಮಹುವಾ ಮೊಯಿತ್ರಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದೆವು. ಮಹುವಾ ಮೊಯಿತ್ರಾ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು," ಎಂದು ಸಿಂಘ ಬಾಹಿನಿ ಅಧ್ಯಕ್ಷ ದೇಬ್ದತ್ತಾ ಮಾಝಿ ತಿಳಿಸಿದ್ದಾರೆ.
ಕಾಳಿ ಬಾಯಲ್ಲಿ ಸಿಗರೇಟು: ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಕೋರ್ಟ್ ಸಮನ್ಸ್!
ಇದರ ಮಧ್ಯೆ, ಕಾಳಿ ದೇವಿಯ ಬಗ್ಗೆ ನೀಡಿರುವ ಹೇಳಿಕೆ ಕುರಿತು ಬಿಜೆಪಿ ಮಹುವಾ ಮೊಯಿತ್ರಾ ಮೇಲೆ ಒತ್ತಡ ಹೇರುತ್ತಲೇ ಇದೆ. ಬಂಗಾಳದ ವಿರೋಧ ಪಕ್ಷದ ನಾಯಕ ಸುಭೇಂದು ಅಧಿಕಾರಿ ಸೋಮವಾರ ಕೃಷ್ಣನಗರದಲ್ಲಿ ಮೊಯಿತ್ರಾ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಂಧನಕ್ಕೆ ಬಿಜೆಪಿ ಆಗ್ರಹ
ಕಾಳಿ ದೇವಿ ಬಗ್ಗೆ ಅವಹೇಳನ ಮಾಡಿರುವ ಟಿಎಂಸಿ ಸಂಸದೆಯನ್ನು ಪೊಲೀಸರು ಬಂಧಿಸಬೇಕು. ಮುಂದಿನ 10 ದಿನಗಳಲ್ಲಿ ಅವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸುಭೇಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಬಿಜೆಪಿಯು ಕಾನೂನು ಹೋರಾಟ ನಡೆಸುವ ನಿರ್ಧಾರಕ್ಕೆ ಸಿಂಗ್ ಬಾಹಿನಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಳಿ ಕುರಿತು ಮೊಯಿತ್ರಾ ನೀಡಿದ ಹೇಳಿಕೆಯಲ್ಲಿ ಏನಿದೆ?
ಕಳೆದ ಜುಲೈ 5ರಂದು ನಡೆದ ಇಂಡಿಯಾ ಟುಡೇ ಕನ್ ಕ್ಲೀವ್ ಈಸ್ಟ್ 2022ರ ಸಂದರ್ಭದಲ್ಲಿ ಮಾತನಾಡಿದ್ದ ಮಹುವಾ ಮೊಯಿತ್ರಾ, ಕಾಳಿ ದೇವಿಯು ಮಾಂಸಾಹಾರಿ ಹಾಗೂ ಮದ್ಯವನ್ನು ಸ್ವೀಕರಿಸುವ ದೇವತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಾಳಿ ದೇವಿಯು ಸಿಗರೇಟ್ ಸೇದುವುದನ್ನು ಮತ್ತು LGBTQ ಧ್ವಜ ಹಿಡಿದಿರುವುದನ್ನು ತೋರಿಸುವ ಚಲನಚಿತ್ರದ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದರು.
"ಕಾಳಿ ನನಗೆ ಮಾಂಸ ತಿನ್ನುವ, ಮದ್ಯವನ್ನು ಸ್ವೀಕರಿಸುವ ದೇವತೆ ಎನಿಸುತ್ತದೆ. ನಿಮ್ಮ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ. ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ, ಇನ್ನೂ ಕೆಲವು ಸ್ಥಳಗಳಲ್ಲಿ ಅದು ಧರ್ಮನಿಂದೆನೆ ಆಗಿರುತ್ತದೆ," ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿಕೆ ನೀಡಿದ್ದರು.
ಲೀನಾ ಮಣಿಮೇಕಲೈಗೆ ದೆಹಲಿ ಕೋರ್ಟ್ ಸಮನ್ಸ್ ಜಾರಿ
ಕಾಳಿ ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್ಗೆ ಸಂಬಂಧಿಸಿದಂತೆ ಕೆನಡಾ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈಗೆ ದೆಹಲಿ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಆಗಸ್ಟ್ 6ರಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಸಾಕ್ಷ್ಯಚಿತ್ರದಲ್ಲಿ ಕಾಳಿ ದೇವಿಯನ್ನು ಪೋಸ್ಟರ್ ಮತ್ತು ವಿಡಿಯೋದಲ್ಲಿ ಚಿತ್ರಿಸಿರುವ ರೀತಿಯಲ್ಲಿ ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಅಭಿಷೇಕ್ ಕುಮಾರ್ ಜುಲೈ 8, 2022ರಂದು ಲೀನಾ ಮಣಿಮೇಕಲೈ ಮತ್ತು ಟೂರಿಂಗ್ ಟಾಕೀಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ 39ರ ನಿಯಮ 1 ಮತ್ತು 2 CPC ಅಡಿಯಲ್ಲಿ "ದಾವೆ ಮತ್ತು ತಡೆಯಾಜ್ಞೆ ಅರ್ಜಿಯ ಸೂಚನೆ" ಹೊರಡಿಸಿದ್ದರು.
ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಕೇಸ್
ಕಾಳಿ ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಲೀನಾ ಮಣಿಮೇಕಲೈ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಟೊರೊಂಟೊದ ಅಗಾ ಖಾನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ "ಹಿಂದೂ ದೇವರುಗಳ ಅಗೌರವದ ಚಿತ್ರಣ" ವನ್ನು ಹಿಂಪಡೆಯುವಂತೆ ಕೆನಡಾದಲ್ಲಿ ಇರುವ ಭಾರತೀಯ ಹೈಕಮಿಷನ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಂಡಿದ್ದರು.
ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಪೋಸ್ಟರ್ ಹಿಂದೂ ದೇವತೆಗೆ ಅವಮಾನವಾಗಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಲವರು ಹೇಳಿದ್ದಾರೆ.