ಬಿಜೆಪಿಗೆ ಹೊಸ ಹೆಸರು ನೀಡಿದ ಪಶ್ಚಿಮ ಬಂಗಾಳ ಸಿಎಂ!
ಕೋಲ್ಕತ್ತಾ, ಜನವರಿ.24: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಾಕ್ಸಮರ ಮುಂದುವರಿದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಎದುರಿಗೆ ತಮ್ಮನ್ನು ಅವಮಾನಿಸುವ ರೀತಿಯಲ್ಲಿ ತೋರಿದ ವರ್ತನೆ ವಿರುದ್ಧ ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಂಡಾಮಂಡಲರಾಗಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 125ನೇ ಜನ್ಮ ದಿನಾಚರಣೆ ದಿನವನ್ನು "ದೇಶ ನಾಯಕ್ ದಿವಸ್" ಎಂದು ಘೋಷಿಸಲು ಪಶ್ಚಿಮ ಬಂಗಾಳ ಸರ್ಕಾರವು ಮನವಿ ಮಾಡಿಕೊಂಡಿತ್ತು. ಇದರ ಬದಲಿಗೆ ಕೇಂದ್ರ ಸರ್ಕಾರವು ಅದೇ ದಿನವನ್ನು "ಪರಾಕ್ರಮ ದಿವಸ್" ಎಂದು ಘೋಷಿಸಿತು.
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
ಕಳೆದ ಜನವರಿ.23ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ವಿಕ್ಟೋರಿಯಾ ಸ್ಮಾರಕದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ 125ನೇ ಜನ್ಮದಿನದ ಹಿನ್ನೆಲೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಂದೇ ವೇದಿಕೆಯಲ್ಲಿ ಸೇರಿದ್ದರು. ಈ ವೇಳೆ "ಜೈ ಶ್ರೀರಾಮ್" ಎಂಬ ಘೋಷಣೆ ಕೂಗಿಲಾಗಿತ್ತು. ಕಾರ್ಯಕರ್ತರ ವರ್ತನೆಯಿಂದ ಕೆರಳಿದ ದೀದಿ ಬಿಜೆಪಿಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗನ್ ಹಿಡಿದು ರಾಜಕೀಯ ಮಾಡುವುದಿಲ್ಲ; ಮಮತಾ ಬ್ಯಾನರ್ಜಿ
"ಅವರು ಆಹ್ವಾನ ನೀಡಿದ್ದರು ಎಂಬ ಕಾರಣಕ್ಕೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ. ಈ ವೇಳೆ ಕೆಲವು ಮತಾಂಧ ದೇಶದ್ರೋಹಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎದುರಿಗೆ ನನಗೇ ಕೀಟಲೆ ಮಾಡುವ ಧೈರ್ಯ ಪ್ರದರ್ಶಿಸಿದರು. ಅವರು ಯಾರು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನೀವು ನನಗೆ ಗನ್ ತೋರಿಸಿದರೆ, ನಾನು ನಿಮಗೆ ಶಸ್ತ್ರಾಸ್ತ್ರಗಳನ್ನು ತೋರಿಸಬಲ್ಲೆ. ಆದರೆ ನನಗೆ ಗನ್ ಹಿಡಿದು ಮಾಡುವ ರಾಜಕಾರಣದ ಮೇಲೆ ನಂಬಿಕೆಯಿಲ್ಲ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಸರಿ ಪಡೆ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
"ನೀವು ನೇತಾಜಿಯವರನ್ನು ಅವಮಾನಿಸಿದ್ದೀರಿ. ನೀವು ಟ್ಯಾಗೋರ್ ಅವರ ಜನ್ಮಸ್ಥಳವನ್ನೇ ತಪ್ಪಾಗಿ ಉಲ್ಲೇಖಿಸಿದ್ದೀರಿ. ವಿದ್ಯಾಸಾಗರ್ ಅವರ ಪ್ರತಿಮೆಯನ್ನು ನೀವು ನಾಶಪಡಿಸಿದ್ದೀರಿ. ಬಿರ್ಸಾ ಮುಂಡಾ ಎಂದು ಭಾವಿಸಿ ಬೇರೆ ಯಾವುದೋ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೀರಿ. ಇದು ನಿಮ್ಮ ತಪ್ಪುಗಳಿಗೆ ಹಿಡಿದ ಕೈಗನ್ನಡಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
"ಜೈ ಶ್ರೀರಾಮ್ ಘೋಷಣೆ ಕೂಗಲು ರಾಜಕೀಯ ಕಾರ್ಯಕ್ರಮವಲ್ಲ"
ನೇತಾಜಿ ಜನ್ಮದಿನಾಚರಣೆ ಹಿನ್ನೆಲೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಕೆಲವರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು. ಇದರಿಂದ ಕುಪಿತಗೊಂಡ ಮಮತಾ ಬ್ಯಾನರ್ಜಿ, ತಮ್ಮ ಭಾಷಣವನ್ನು ಮುಂದವರಿಸಲು ನಿರಾಕರಿಸಿದರು. ಇದು ಸರ್ಕಾರ ಆಯೋಜಿಸಿರುವ ಕಾರ್ಯಕ್ರಮವೇ ಹೊರತೂ ಯಾವುದೇ ರಾಜಕೀಯ ಪಕ್ಷದ ಸಮಾರಂಭ ಅಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ವಲ್ಪ ಘನತೆಯನ್ನು ಕಾಪಾಡಿಕೊಳ್ಳಿ. ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿ ಹೀಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದರು.
ಬಿಜೆಪಿಗೆ ಮರುನಾಮಕರಣ ಮಾಡಿದ ದೀದಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಮತ್ತು ನಾಯಕರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಟಿಎಂಸಿ ಬಂಡುಕೋರ ನಾಯಕರು ಆದಷ್ಟು ಬೇಗ ಪಕ್ಷವನ್ನು ತೊರೆದು ಹೋಗುವಂತೆ ಮಮತಾ ಬ್ಯಾನರ್ಜಿ ಕರೆ ನೀಡಿದರು. ಇದರ ಜೊತೆಗೆ ಎಲ್ಲ ಬಂಡಾಯ ನಾಯಕರನ್ನು ಸೇರಿಸಿಕೊಳ್ಳುತ್ತಿರುವ ಬಿಜೆಪಿಗೆ "ಭಾರತ್ ಜಲಾವೋ ಪಾರ್ಟಿ" ಎಂದು ಮರುನಾಮಕರಣ ಮಾಡಿದರು.