ಬಿಜೆಪಿ ಶಾಸಕನ ಸಾವು ಕೊಲೆಯಲ್ಲ, ಆತ್ಮಹತ್ಯೆ: ಮಮತಾ ಬ್ಯಾನರ್ಜಿ
ಕೊಲ್ಕತ್ತಾ, ಜುಲೈ 16: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರೇ ಸಾವಿನ ಪ್ರಕರಣದಲ್ಲಿ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ವರದಿ ನೀಡಿದ್ದಾರೆ.
Recommended Video
ಜುಲೈ 13ರಂದು ಉತ್ತರ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಹೇಮತಾಬಾದ್ನ ಬೊಂಡೋಲ್ನಲ್ಲಿರುವ ಮನೆಯ ಬಳಿ ಬಿಜೆಪಿ ಶಾಸಕ ದೇಬೇಂದ್ರ ನಾಥ್ ಶವ ನೇಣು ಬಿಗಿದುಕೊಂಡು ರೀತಿ ಪತ್ತೆಯಾಗಿತ್ತು. ಅವರ ಜೇಬಿನಲ್ಲಿ ಡೆತ್ನೋಟ್ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಸಾವಿನ ಪ್ರಕರಣಕ್ಕೆ ಟ್ವಿಸ್ಟ್
ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ಇದು ಆತ್ಮಹತ್ಯೆ ಎಂದು ಹೇಳಿದ್ದರು. ಆದರೆ, ಬಿಜೆಪಿ ನಾಯಕರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ವಜಾಗೊಳಿಸುವಂತೆ ಕೋರಿ ಬಿಜೆಪಿ ನಿಯೋಗ ರಾಷ್ಟ್ರಪತಿಯನ್ನು ಭೇಟಿ ಮಾಡಿತ್ತು.
ಈ ಹಿನ್ನೆಲೆ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿಯೋಗವೂ ಬುಧವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯನ್ನು ಭೇಟಿ ಮಾಡಿ ಪ್ರಕರಣದ ವಿವರಗಳನ್ನು ತಿಳಿಸಿದೆ. ಮಮತಾ ಬ್ಯಾನರ್ಜಿ ಅವರು ಪತ್ರದ ಮೂಲಕ ವಿವರಣೆ ನೀಡಿದ್ದು ''ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ಅನುಮಾನ ವ್ಯಕ್ತವಾಗಿದೆ. ಬಿಜೆಪಿ ಹೇಳುತ್ತಿರುವಂತೆ ಇದು ರಾಜಕೀಯ ಪ್ರೇರಿತ ಕೊಲೆಯಲ್ಲ' ಎಂದು ತಿಳಿಸಿದ್ದಾರೆ.
'ಬಿಜೆಪಿ ಸತ್ಯವನ್ನು ತಿರುಚಿದೆ. ಈ ಘಟನೆಗೆ ಸಂಬಂದಿಸಿದಂತೆ ನಿಜಾಂಶವನ್ನು ತಿಳಿಸಲು ಬಯಸುತ್ತೇನೆ. ಶಾಸಕರ ಜೇಬಿನಲ್ಲಿ ಡೆತ್ನೋಟ್ ಸಿಕ್ಕಿದೆ. ಹಣದ ವ್ಯವಹಾರ ಹೊಂದಿದ್ದರು. ಮೂವರು ಹೆಸರು ಉಲ್ಲೇಖಿಸಿದ್ದಾರೆ. ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ' ಎಂದು ಸಿಎಂ ಮಾಹಿತಿ ನೀಡಿದ್ದಾರೆ.