ರಥಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸಂಸದೆ ನುಸ್ರತ್ ರನ್ನು ಆಹ್ವಾನಿಸಿದ ಇಸ್ಕಾನ್
ಕೋಲ್ಕತಾ, ಜುಲೈ 02: ತೃಣಮೂಲ ಕಾಂಗ್ರೆಸ್ಸಿನ ಸಂಸದೆ ನುಸ್ರತ್ ಜಹಾನ್ ಅವರು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿ, ಫತ್ವಾ ಹೊರಡಿಸಿದ ಸುದ್ದಿ ಓದಿರಬಹುದು. ಧರ್ಮ ಕಟ್ಟಳೆ ಮೀರಿ ನಾನು ಎಲ್ಲರನ್ನು ಒಳಗೊಂಡ ಭಾರತೀಯ ಪ್ರಜೆ ಎಂದಿದ್ದ ನುಸ್ರತ್ ಗೆ ಈಗ ರಥಯಾತ್ರೆಗೆ ಅಹ್ವಾನ ಬಂದಿದೆ.
ನುಸ್ರತ್, ಸಿಂಧೂರ ಮತ್ತು ಬಳೆ ಧರಿಸಿ ಸಂಸತ್ ಅಧಿವೇಶನದಲ್ಲಿ ಕಾಣಿಸಿಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಂಡಿದ್ದರು. "ಜಾತಿ, ವರ್ಣ, ಧರ್ಮದ ತಡೆಗಳನ್ನು ಮೀರಿ ಎಲ್ಲರನ್ನೂ ಒಳಗೊಂಡ ಭಾರತವನ್ನು ಪ್ರತಿನಿಧಿಸುತ್ತೇನೆ", 'ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ; ಆದರೆ ಮುಸ್ಲಿಂ ಆಗಿಯೇ ಉಳಿಯುತ್ತೇನೆ' ಎಂದಿದ್ದರು.
ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾ
ಈಗ ಗುರುವಾರದಂದು ನಡೆಯಲಿರುವ ಇಸ್ಕಾನ್ ಆಯೋಜನೆಯ ರಥಯಾತ್ರೆಗೆ ವಿಶೇಷ ಅತಿಥಿಯಾಗಿ ಸಂಸದೆ ನುಸ್ರತ್ ಅವರನ್ನು ಆಹ್ವಾನಿಸಲಾಗಿದೆ ಎಂದು ಇಸ್ಕಾನ್ ವಕ್ತಾರ ರಾಧಾರಮಣ್ ದಾಸ್ ಹೇಳಿದ್ದಾರೆ.
ಜಗನ್ನಾಥ ದೇವರು, ಬಲರಾಮ ಹಾಗೂ ಸುಭದ್ರಾ ಮೂರ್ತಿಗಳ ಮೆರವಣಿಗೆ ರಥಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು ಎಲ್ಲಾ ಧರ್ಮದವರು ಮುಕ್ತವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
Iskcon Kolkata Rathayatra is example of that social harmony where the Lord's chariots are also built by our Muslim brothers. Some of the most beautiful Lords dresses are also made by our Muslim brothers & they are doing it for decades in some of our temples. @nusratchirps
— Radharamn Das (@iskconkolkata) July 1, 2019
1971ರಲ್ಲಿ ಸ್ಥಾಪನೆಗೊಂಡ ಇಸ್ಕಾನ್ ಸಂಸ್ಥೆ ಆಯೋಜನೆಯ 48ನೇ ವರ್ಷದ ರಥಯಾತ್ರೆ ಇದಾಗಿದೆ. ಈ ರಥಯಾತ್ರೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾಲನೆ ನೀಡಲಿದ್ದಾರೆ.
Thank You @iskconkolkata for the invite. It would be my pleasure to be associated with this inclusive event. https://t.co/GyzY03JyHA
— Nusrat (@nusratchirps) July 2, 2019
ನುಸ್ರತ್ ಅವರು ನವಭಾರತದ ಪ್ರತಿನಿಧಿಯಾಗಿದ್ದಾರೆ. ಎಲ್ಲಾ ಧರ್ಮ, ಪಂಥಗಳ ಆಚರಣೆಯಲ್ಲಿ ತೊಡಗಿಕೊಳ್ಳಬಲ್ಲವರಾಗಿದ್ದಾರೆ. ಇಂಥವರಿಂದ ಭಾರತದ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಪಿಟಿಐಗೆ ದಾಸ್ ಹೇಳಿದ್ದಾರೆ.