ಘರ್ಜಿಸಿದ ಅಂಫಾನ್ ಚಂಡಮಾರುತ: ತತ್ತರಿಸಿದ ಪಶ್ಚಿಮ ಬಂಗಾಳ, ಒಡಿಶಾದ ಚಿತ್ರಣ
ಕೋಲ್ಕತಾ, ಮೇ 20: ಮೊದಲನೇ ಮಾರಣಾಂತಿಕ ಕೊರೊನಾ ವೈರಸ್ ಭೀತಿಯಲ್ಲಿದ್ದ ಜನರನ್ನ ಬೆಚ್ಚಿಬೀಳಿಸಿದ್ದು ಭೀಕರ ಚಂಡಮಾರುತ ಅಂಫಾನ್. ಬರೋಬ್ಬರಿ 190 ಕಿ.ಮೀ ವೇಗದಲ್ಲಿ ಅಪ್ಪಳಿಸಿದ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಕ್ಷರಶಃ ಘರ್ಜಿಸಿತು.
Recommended Video
ಅಂಫಾನ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಅಂಫಾನ್ ಚಂಡಮಾರುತದ ಹೊಡೆತಕ್ಕೆ ಸಿಲುಕಿರವ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮರಗಳು ಧರೆಗುರುಳಿವೆ. ಭೂ ಕುಸಿತ ಸಂಭವಿಸಿದೆ. ಎಷ್ಟೋ ಮನೆಗಳು ನೆಲಕಚ್ಚಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ.
'ಅಂಫಾನ್ ನಿಂದಾದ ಅನಾಹುತ ಕೊರೊನಾ ವೈರಸ್ ಗಿಂತಲೂ ಭಯಂಕರ'
''ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದಿಂದಾದ ಅನಾಹುತ ಕೊರೊನಾ ವೈರಸ್ ಗಿಂತಲೂ ಭಯಂಕರವಾಗಿದೆ. ಅಂಫಾನ್ ನಿಂದ 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ'' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭೀಕರ ಅಂಫಾನ್ ನಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಉಂಟಾಗಿರುವ ಅಲ್ಲೋಲ ಕಲ್ಲೋಲದ ಚಿತ್ರಣ ಇಲ್ಲಿದೆ, ನೋಡಿರಿ...
ಧರೆಗುರುಳಿದ ಮರಗಳು
ಅಂಫಾನ್ ಚಂಡಮಾರುತದ ಪ್ರಭಾವದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿಯಿತು. ಭಾರಿ ಮಳೆಯಿಂದಾಗಿ ಹಲವು ಕಡೆ ಮರಗಳು ಧರೆಗುರುಳಿವೆ. ರಸ್ತೆಗೆ ಉರುಳಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಎನ್.ಡಿ.ಆರ್.ಎಫ್ ತಂಡ ತೊಡಗಿದೆ.
ತೆರವು ಕಾರ್ಯಾಚರಣೆಯಲ್ಲಿ ಎನ್.ಡಿ.ಆರ್.ಎಫ್ ತಂಡ
ಕೋಲ್ಕತಾದ ಏರ್ ಪೋರ್ಟ್ ರೋಡ್ ನಲ್ಲಿ ಮರಗಳು ರಸ್ತೆಗೆ ಉರುಳಿದ್ದು, ತೆರವು ಕಾರ್ಯಾಚರಣೆಯಲ್ಲಿ ಎನ್.ಡಿ.ಆರ್.ಎಫ್ ತಂಡ ಮಗ್ನವಾಗಿದೆ.
ಪಶ್ಚಿಮ ಬಂಗಾಳದ ಮೇಲೆ ಆಕ್ರಮಣ ಮಾಡಿದ ಅಂಫಾನ್! 12 ಸಾವು
ಏರ್ ಪೋರ್ಟ್ ಜಲಾವೃತ
ಅಂಫಾನ್ ಚಂಡಮಾರುತದಿಂದ ಕೋಲ್ಕತಾ ಏರ್ ಪೋರ್ಟ್ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಜಖಂಗೊಂಡ ವಾಹನಗಳು
ಅಂಫಾನ್ ಚಂಡಮಾರುತದಿಂದ ಕೋಲ್ಕತಾದಲ್ಲಿ ಆಗಿರುವ ಅನಾಹುತದ ಚಿತ್ರಣವಿದು. ಕೋಲ್ಕತಾದ ರಸ್ತೆಗಳು ಜಲಾವೃತ್ತವಾಗಿವೆ. ಮರಗಳು ಉರುಳಿರುವುದರಿಂದ ವಾಹನಗಳು ಜಖಂಗೊಂಡಿವೆ.
ಒಡಿಶಾದಲ್ಲಿ ಸಾಮಾನ್ಯ ಸ್ಥಿತಿಗೆ ಮರಳಿದ ಜನಜೀವನ
ಒಡಿಶಾದಲ್ಲಿ ಸದ್ಯ ಅಂಫಾನ್ ಚಂಡಮಾರುತದ ಪ್ರಭಾವ ಕಡಿಮೆಯಾಗಿದೆ. ಒಡಿಶಾದಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು, ಕೆಲವು ಅಂಗಡಿಗಳನ್ನು ತೆರೆಯಲಾಗಿದೆ.
ದುರ್ಬಲಗೊಂಡ ಚಂಡಮಾರುತ
ಕಳೆದ 6 ಗಂಟೆಗಳಲ್ಲಿ ಗಂಟೆಗೆ 27 ಕಿ.ಮೀ ವೇಗದಲ್ಲಿ ಅಂಫಾನ್ ಚಂಡಮಾರುತ ಉತ್ತರ-ಈಶಾನ್ಯ ಕಡೆಗೆ ಸಾಗುತ್ತಿದೆ. ಬಾಂಗ್ಲಾದೇಶದಲ್ಲಿ ಕೇಂದ್ರೀಕೃತವಾಗಿರುವ ಚಂಡಮಾರುತ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.