ಒಂದೇ ಕಾಲಿನಲ್ಲಿ ಬಂಗಾಳ ಗೆದ್ದು ಎರಡು ಕಾಲಿನಲ್ಲಿ ದೆಹಲಿ ಗೆಲ್ಲುವೆ; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಏಪ್ರಿಲ್ 5: ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಮೂರನೇ ಹಂತದ ಚುನಾವಣೆಗೂ ಮುನ್ನ ಸೋಮವಾರ ಮಾತನಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, "ನಾನು ಒಂದೇ ಕಾಲಿನಲ್ಲಿ ಬಂಗಾಳದ ಚುನಾವಣೆ ಗೆಲ್ಲುತ್ತೇನೆ. ಮುಂದೆ ಎರಡು ಕಾಲಿನ ಸಹಾಯದಿಂದ ದೆಹಲಿ ಮೇಲೂ ಜಯ ಸಾಧಿಸಲಿದ್ದೇನೆ" ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.
I will win Bengal on one leg and in the future, will get victory in Delhi on two legs: West Bengal CM and TMC leader Mamata Banerjee in Debanandapur, Hooghly#WestBengalElections2021 pic.twitter.com/ZC0IsnYStO
— ANI (@ANI) April 5, 2021
ಹೂಗ್ಲಿ ಜಿಲ್ಲೆಯ ದೇಬಾನಂದಪುರ ಗ್ರಾಮದಲ್ಲಿ ಮಾತನಾಡಿದ ಅವರು, ತಮ್ಮ ಗಾಯದ ಕುರಿತು ಪ್ರಸ್ತಾಪಿಸುತ್ತಲೇ, "ಒಂದೇ ಕಾಲಿಟ್ಟುಕೊಂಡು ಬಂಗಾಳದಲ್ಲಿ ಗೆಲ್ಲಲು ನನಗೆ ಸಾಧ್ಯವಿದೆ. ಭವಿಷ್ಯದಲ್ಲಿ ಎರಡೂ ಕಾಲುಗಳೂರಿ ದೆಹಲಿಯಲ್ಲಿ ವಿಜಯ ಸಾಧಿಸುತ್ತೇನೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಂಗಾಳದಲ್ಲಿ ಕೋಮು ಗೊಂದಲ ಸೃಷ್ಟಿಸಲು ಬಿಜೆಪಿ ಯತ್ನ; ಮಮತಾ ಬ್ಯಾನರ್ಜಿ
ಇದೇ ಸಂದರ್ಭ ಮತ್ತೆ ಚುನಾವಣಾ ಆಯೋಗದ ಮೇಲೆ ಗುಡುಗಿರುವ ಅವರು, "ಕೊರೊನಾದಂಥ ಈ ಸಂದರ್ಭದಲ್ಲಿ ಕಡಿಮೆ ಹಂತಗಳಲ್ಲಿ ಚುನಾವಣೆ ನಡೆಸಬೇಕಿತ್ತು. ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವ ಕಾರಣವಾದರೂ ಏನಿತ್ತು" ಎಂದು ಪ್ರಶ್ನೆಯನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಆಯೋಗದ ವಿಷಯಗಳಲ್ಲಿ ಕೇಂದ್ರ ಸರ್ಕಾರ ತಲೆ ತೂರಿಸುತ್ತಿದೆ. ಇದೆಲ್ಲವೂ ಬಿಜೆಪಿ ಕೆಲಸ ಎಂದು ಆರೋಪಿಸಿದರು.
ಏಪ್ರಿಲ್ 6ರಂದು 31 ವಿಧಾನಸಭಾ ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಹೂಗ್ಲಿ ಜಿಲ್ಲೆಯ ಎಂಟು, ಹೌರಾಹ್ನಲ್ಲಿನ ಏಳು, ಸೌತ್ 24 ಪರಗಣ ಜಿಲ್ಲೆಯ ಹದಿನಾರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಎರಡು ಹಂತದ ಚುನಾವಣೆಗಳು ಮುಕ್ತಾಯವಾಗಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.