ಬುಲೆಟ್ಗಳಿಗೆ ಬ್ಯಾಲಟ್ ಮೂಲಕ ಉತ್ತರ ನೀಡುತ್ತೇನೆ; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಏಪ್ರಿಲ್ 14: ಪಶ್ಚಿಮ ಬಂಗಾಳದ ಕೂಚ್ಬೆಹಾರ್ನಲ್ಲಿ ನಾಲ್ಕನೇ ಹಂತದ ಚುನಾವಣೆ ವೇಳೆ ನಡೆದ ಸಂಘರ್ಷದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಅವರ ಸಾವಿಗೆ ಕಾರಣರಾದವರ ಕುರಿತು ಸರ್ಕಾರ ತನಿಖೆ ನಡೆಸಲಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಮಮತಾ ಬ್ಯಾನರ್ಜಿ ಮೇಲೆ ಚುನಾವಣಾ ಆಯೋಗ 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿರ್ಬಂಧ ಹೇರಿತ್ತು. ಈ ನಿರ್ಬಂಧದ ಅವಧಿ ಮುಗಿದ ನಂತರ ಮಮತಾ ಬ್ಯಾನರ್ಜಿ, ಗುಂಡಿನ ದಾಳಿಯಲ್ಲಿ ಮೃತಪಟ್ಟ ಕುಟುಂಬದವರನ್ನು ಬುಧವಾರ ಭೇಟಿ ಮಾಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ನಾಲ್ವರ ಹತ್ಯೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಸುಳ್ಳು ಹೇಳಿದ್ದು ಸಾಬೀತಾದರೆ ಮೋದಿ ಬಸ್ಕಿ ಹೊಡೆಯಬೇಕು; ಮಮತಾ ಬ್ಯಾನರ್ಜಿ
"ಸತ್ತ ವ್ಯಕ್ತಿಗಳ ಕುಟುಂಬದವರು ನನ್ನ ಕುಟುಂಬವಿದ್ದಂತೆ. ಅವರ ಮೇಲೆ ಹಾರಿರುವ ಬುಲೆಟ್ಗೆ ತಕ್ಕ ಉತ್ತರ ನಾನು ನೀಡುತ್ತೇನೆ. ಅವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಖಚಿತ" ಎಂದು ಹೇಳಿದ್ದಾರೆ.
ಮತದಾನ ಕೇಂದ್ರದ ಹೊರಗೆ ಗುಂಡಿನ ದಾಳಿಯಿಂದ ಮೃತಪಟ್ಟ ಅದೇ ಜಿಲ್ಲೆಯ ಆನಂದ್ ಬರ್ಮನ್ ಅವರ ಕುಟುಂಬಕ್ಕೂ ನ್ಯಾಯ ದೊರಕಿಸಿಕೊಡುವುದಾಗಿ ತಿಳಿಸಿದರು.
Mathabhanga: West Bengal CM Mamata Banerjee met the families of those killed in the Sitalkuchi, Cooch Behar violence pic.twitter.com/CPsr0boD1p
— ANI (@ANI) April 14, 2021
ಶನಿವಾರ ನಾಲ್ಕನೇ ಹಂತದ ಚುನಾವಣೆ ಸಂದರ್ಭ ಸಿಐಎಸ್ಎಫ್ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ನಾಲ್ಕು ಹಂತದ ಚುನಾವಣೆ ಪೂರ್ಣಗೊಂಡಿದೆ. ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.