ನಿಮ್ಮ ಮನೆಯಲ್ಲೂ ಕಮಲ ಅರಳಿಸುತ್ತೇನೆ; ತೃಣಮೂಲ ಸಂಸದನಿಗೆ ಸುವೇಂದು ಸವಾಲು
ಕೋಲ್ಕತ್ತಾ, ಜನವರಿ 27: ತೃಣಮೂಲ ಕಾಂಗ್ರೆಸ್ ತೊರೆದು ಈಚೆಗೆ ಬಿಜೆಪಿ ಸೇರ್ಪಡೆಯಾದ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ವಾಗ್ದಾಳಿ ನಡೆಸಿದ್ದು, ನಿಮ್ಮ ಮನೆಯಲ್ಲಿಯೂ ಕಮಲ ಅರಳುವಂತೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಭಗವಾನ್ ಪುರದ ಸಾರ್ವಜನಿಕ ಸಭೆಯಲ್ಲಿ ಬುಧವಾರ ಮಾತನಾಡಿದ ಸುವೇಂದು, "ನಮ್ಮ ಮನೆಯಲ್ಲಿ ಕಮಲ ಅರಳುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಸೌಮೇಂದು ಬಿಜೆಪಿ ಸೇರಿದ್ದಾರೆ. ನೀವು ಚಿಂತಿಸಬೇಡಿ ಅಭಿಷೇಕ್ ಬ್ಯಾನರ್ಜಿ, ಫೆಬ್ರವರಿ ವೇಳೆಗೆ ನಿಮ್ಮ ಮನೆಯಲ್ಲೂ ಕಮಲ ಅರಳುವಂತೆ ಮಾಡುತ್ತೇನೆ. ರಾಮನವಮಿ ವೇಳೆಗೆ ಎಲ್ಲೆಡೆ ಕಮಲದ ಪಕ್ಷ ಅರಳಿಸುತ್ತೇನೆ" ಎಂದು ಹೇಳಿದ್ದಾರೆ.
"ಮುಸ್ಲಿಂ ಮತಗಳು ಟಿಎಂಸಿಗೆ ಫಿಕ್ಸಡ್ ಡೆಪಾಸಿಟ್; ಇನ್ನುಳಿದ 70% ನಮ್ಮ ಪರ"
ಈ ವೇಳೆ ಕೊರೊನಾ ಸೋಂಕಿನ ನಿರ್ವಹಣೆ ಕುರಿತೂ ಮಾತನಾಡಿದ ಸುವೇಂದು, "ಪಶ್ಚಿಮ ಬಂಗಾಳದಲ್ಲಿ ಕೊರೊನಾದಿಂದ 18% ವೈದ್ಯರು ಮೃತಪಟ್ಟಿದ್ದಾರೆ. ಪಿಪಿಇ ಕಿಟ್ ಕೊಡುವ ಬದಲು ರೇನ್ ಕೋಟ್ ಗಳನ್ನು ನೀಡಿ ಟಿಎಂಸಿ ಸರ್ಕಾರ ವೈದ್ಯರನ್ನು ಕೊಂದಿದೆ" ಎಂದು ಆರೋಪಿಸಿದರು.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಉನ್ನತ ಶಿಕ್ಷಣ ಪಡೆದವರನ್ನು ನಿರುದ್ಯೋಗಿಯಾಗಿ ಸರ್ಕಾರ ಉಳಿಸಿದೆ. 5.5 ಲಕ್ಷ ಶಾಶ್ವತ ಹುದ್ದೆಗಳನ್ನು ನಾಶಮಾಡಿದೆ ಎಂದು ದೂರಿದರು.
ತೃಣಮೂಲ ಕಾಂಗ್ರೆಸ್ ಸಚಿವನಾಗಿದ್ದ ಸುವೇಂದು ಅಧಿಕಾರಿ ಡಿಸೆಂಬರ್ 19ರಂದು ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ಪಶ್ಚಿಮ ಬಂಗಾಳದಲ್ಲಿ ಕೆಲವೇ ತಿಂಗಳಲ್ಲಿ 294 ಸೀಟುಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಭರದ ಸಿದ್ಧತೆ ಸಾಗಿದೆ. ಕಳೆದ ತಿಂಗಳಿನಿಂದಲೇ ಪ್ರಚಾರ ಕಾರ್ಯ ಶುರುವಾಗಿದೆ. ಅಮಿತ್ ಶಾ, ಜೆಪಿ ನಡ್ಡಾ ಮುಂತಾದ ಬಿಜೆಪಿ ಮುಖಂಡರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಮೂಲಕ ಬಿಜೆಪಿಗೆ ಮತಗಳನ್ನು ಗಳಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.