ಚುನಾವಣಾ ರ್ಯಾಲಿಯಲ್ಲೇ ಶ್ಲೋಕ ಪಠಣ ಮಾಡಿ, ಮೋದಿಗೆ ಭರ್ಜರಿ ಟಾಂಗ್ ನೀಡಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಮಾರ್ಚ್ 10: ಅಸೆಂಬ್ಲಿ ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ. ಆರೋಪ, ಪ್ರತ್ಯಾರೋಪ ಬೇಲಿಯೇ ಇಲ್ಲದಂತೆ ಸಾಗುತ್ತಿದೆ.
ಎರಡು ದಿನಗಳ ಹಿಂದೆ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಪ್ರಧಾನಿ ಮೋದಿಯ ಚುನಾವಣಾ ಸಮಾವೇಶಕ್ಕೆ ಕೌಂಟರ್ ಕೊಡಲು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ಹೆಸರು ಬದಲಿಸಿ ಬಿಜೆಪಿ ಮೋದಿ ದೇಶ ಮಾಡೀತು ಹುಷಾರ್: ಮಮತಾ ಬ್ಯಾನರ್ಜಿ
ನಂದಿಗ್ರಾಮಕ್ಕೆ ಮಮತಾ ಹೊರಗಿನವರು ಎನ್ನುವ ಟೀಕೆಗೆ ಉತ್ತರಿಸಿದ ಮಮತಾ, "ನಾನು ಒಂದು ವರ್ಷದ ಹಿಂದೆನೇ ಮನೆ ಮಾಡಿದ್ದೇನೆ. ಚುನಾವಣೆಯಲ್ಲಿ ಗೆದ್ದ ನಂತರ ಇಲ್ಲಿಗೆ ಮತ್ತೆಮತ್ತೆ ಬರುತ್ತೇನೆ. ನಾನು ನನ್ನ ಮಾತನ್ನು ಖಂಡಿತಾ ಉಳಿಸಿಕೊಳ್ಳುತ್ತೇನೆ"ಎನ್ನುವ ಆಶ್ವಾಸನೆಯನ್ನು ನೀಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣಾ 'ಜ್ಯೋತಿಷ್ಯ ಭವಿಷ್ಯ': ಬಿಜೆಪಿ ಗಣನೀಯ ಸಾಧನೆ, ಆದರೆ..
ನಾನು ಬಂಗಾಳದ ಮಗಳು ಎಂದಿರುವ ಮಮತಾ, "ನನಗೆ ಹಿಂದುತ್ವದ ಪಾಠವನ್ನು ಮಾಡಲು ಬರಬೇಡಿ, ಹಿಂದೂ ಧರ್ಮ ಯಾರೊಬ್ಬರ ಗುತ್ತಿಗೆಯೂ ಅಲ್ಲ"ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಪ್ರಧಾನಿ ಮೋದಿ ಬೃಹತ್ ರ್ಯಾಲಿ
"ಬಂಗಾಳದ ಜನತೆ ನಿಮ್ಮನ್ನು ದೀದಿ ಎಂದು ಕರೆದರು, ಆದರೆ ನೀವು ಸೋದರಳಿಯನಿಗೆ ಅತ್ತೆಯಾಗಿ ಮಾತ್ರ ಉಳಿದಿರಿ. ಈ ಮೈದಾನದ ಒಂದು ಕಡೆ ಸ್ವಾಮಿ ವಿವೇಕಾನಂದರ ಜನ್ಮ ಸ್ಥಳ, ಇನ್ನೊಂದೆಡೆ ನೇತಾಜಿ ಅವರ ಜನ್ಮಭೂಮಿ, ಮತ್ತೊಂದು ಭಾಗದಲ್ಲಿ ಮಹರ್ಷಿ ಅರಬಿಂದೋ ಅವರ ಹುಟ್ಟಿನ ಜಾಗ, ಮತ್ತೊಂದು ಕಡೆ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮಸ್ಥಳವಿದೆ"ಎಂದು ಮೋದಿ ತಮ್ಮ ಭಾಷಣದಲ್ಲಿ ಹಿಂದುತ್ವದ ಟಚ್ ಅನ್ನು ನೀಡಿದ್ದರು.
ನಾನು ಬ್ರಾಹ್ಮಣ ಮನೆತನದ ಮಗಳು, ನನಗೂ ವೇದ,ಶಾಸ್ತ್ರಗಳು ಗೊತ್ತಿವೆ
ಮೋದಿ ಭಾಷಣಕ್ಕೆ ಕೌಂಟರ್ ನೀಡಿದ ಮಮತಾ, "ನಾನು ಬ್ರಾಹ್ಮಣ ಮನೆತನದ ಮಗಳು, ನನಗೂ ವೇದ, ಶಾಸ್ತ್ರಗಳು ಗೊತ್ತಿವೆ. ನಾನು ಒಳ್ಲೆಯ ಹಿಂದೂ, ತ್ಯಾಗಮಯಿ ಹಿಂದೂ ಹೇಗಾಗಬೇಕು ಎನ್ನುವುದನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ"ಎಂದು ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ಸಭೆಯಲ್ಲೇ ಚಂಡಿ ಪಥ್ ಶ್ಲೋಕ ಪಠಿಸಿದ ಮಮತಾ
"ನಾನು ಪ್ರತೀದಿನ ಮನೆಯಿಂದ ಹೊರಡುವಾಗ ಚಂಡಿ ಪಥ್ ಪಠಿಸುತ್ತೇನೆ. ಬಂಗಾಳದಲ್ಲಿ ಹಿಂದುತ್ವದ ಕಾರ್ಡ್ ಅನ್ನು ಪ್ರಯೋಗಿಸಲು ಬರಬೇಡಿ"ಎಂದು ಚಂಡಿ ಪಥ್ ಮತ್ತು ಕೆಲವು ಶ್ಲೋಕಗಳನ್ನು ಸಾರ್ವಜನಿಕ ಸಭೆಯಲ್ಲೇ ಮಮತಾ ಪಠಿಸುವ ಮೂಲಕ ಭಾರೀ ಕರತಾಡನ ಗಿಟ್ಟಿಸಿಕೊಂಡರು.
ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ವರ್ಸಸ್ ಸುವೇಂದು ಅಧಿಕಾರಿ
ನಂದಿಗ್ರಾಮ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಮತಾ ಬ್ಯಾನರ್ಜಿಯವರು ತಮ್ಮ ಹಿಂದಿನ ಪರಮಾಪ್ತ ಸುವೇಂದು ಅಧಿಕಾರಿ ವಿರುದ್ದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಸುವೇಂದು ಅವರ ಭದ್ರಕೋಟೆ ಎಂದೇ ವ್ಯಾಖಾನಿಸಲಾಗುತ್ತದೆ. ಈ ಕ್ಷೇತ್ರದಲ್ಲಿ 'ನಾನು ಬಂಗಾಳದ ಮಗಳು'ಎನ್ನುವ ಭಾವನಾತ್ಮಕ ದಾಳವನ್ನೂ ಮಮತಾ ಪ್ರಯೋಗಿಸಿದ್ದಾರೆ.