ನನಗೆ ಹಿಂದೂ ಧರ್ಮದ ಪಾಠ ಮಾಡಬೇಡಿ, ನಾನೂ ಬ್ರಾಹ್ಮಣಳು: ಮಮತಾ ಬ್ಯಾನರ್ಜಿ
ಕೋಲ್ಕತಾ, ಮಾರ್ಚ್ 10: ಬಿಜೆಪಿಯು ಹಿಂದೂ ಮತದಾರರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಧರ್ಮದ ಆಧಾರದಲ್ಲಿ ವಿಭಜನೆ ರಾಜಕೀಯದ ಆಟವಾಡುವವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ತೀಕ್ಷ್ಣ ಉತ್ತರ ನೀಡಬೇಕು ಎಂದು ಹೇಳಿದರು.
ತಮ್ಮದೇ ಸರ್ಕಾರದಲ್ಲಿ ಸಚಿವರಾಗಿದ್ದು, ಈಗ ಬಿಜೆಪಿ ಸೇರಿಕೊಂಡಿರುವ ಸುವೇಂದು ಅಧಿಕಾರಿ ಅವರನ್ನು ಸೋಲಿಸುವುದಕ್ಕಾಗಿಯೇ ಮಮತಾ ಬ್ಯಾನರ್ಜಿ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಭವಾನಿಪುರ ವಿಧಾನಸಭೆ ಕ್ಷೇತ್ರವನ್ನು ಬಿಟ್ಟು ನಂದಿಗ್ರಾಮದಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ದೇಶದ ಹೆಸರು ಬದಲಿಸಿ ಬಿಜೆಪಿ ಮೋದಿ ದೇಶ ಮಾಡೀತು ಹುಷಾರ್: ಮಮತಾ ಬ್ಯಾನರ್ಜಿ
ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಬೂತ್ ಮಟ್ಟದ ಟಿಎಂಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಟಿಎಂಸಿಯ ಮಾಜಿ ಮುಖಂಡ ಹಾಗೂ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಹರಿಹಾಯ್ದರು. 'ಜನರನ್ನು 70:30ರ (ಹಿಂದೂ ಮತ್ತು ಮುಸ್ಲಿಂ ಮತ ಹಂಚಿಕೆ ಅನುಪಾತ) ಆಧಾರದಲ್ಲಿ ವಿಭಜನೆ ಮಾಡುವುದು ಸುಲಭವಲ್ಲ. ನಮಗೆ ಎಲ್ಲರೂ ಸಮಾನರು. ಲೆಕ್ಕಾಚಾರ ಹಾಗೂ ಧರ್ಮದ ಆಧಾರದಲ್ಲಿ ನಾವು ಜನರನ್ನು ಭೇದಭಾವ ಮಾಡುವುದಿಲ್ಲ' ಎಂದರು.
ನಾನು ಬ್ರಾಹ್ಮಣ ಕುಟುಂಬದವಳು
ಸುವೇಂದು ಅಧಿಕಾರಿ ಹಿಂದೂ-ಮುಸ್ಲಿಂ ಧರ್ಮದ ವಿಭಜನೆ ತಂತ್ರ ಪ್ರಯೋಗಿಸುತ್ತಿದ್ದಾರೆ ಎಂದು ಆರೋಪಿಸಿದ ದೀದಿ, ತಾವು ಬ್ರಾಹ್ಮಣ ಧರ್ಮಕ್ಕೆ ಸೇರಿರುವುದರಿಂದ ಹಿಂದೂ ಧರ್ಮದ ಬಗ್ಗೆ ಪಾಠ ಮಾಡುವ ಅಗತ್ಯವಿಲ್ಲ ಎಂದರು. 'ನಾನು ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು ಎಂದು ಅವರಿಗೆ ಹೇಳಲು ಬಯಸುತ್ತೇನೆ. ಅವರು ನನ್ನ ಜತೆ ಧರ್ಮದ ಎಲೆಯಾಟ ಆಡಬಾರದು. ನನಗೆ ಹಿಂದೂ ಧರ್ಮದ ಬೋಧನೆ ಮಾಡಬೇಡಿ' ಎಂದು ಹೇಳಿದರು.
|
ನನಗೆ ಪಾಠ ಮಾಡಲು ಬರಬೇಡಿ
'ಒಳ್ಳೆಯ ಹಿಂದೂ ಆಗುವಂತೆ ನನಗೆ ಪಾಠ ಮಾಡಲು ಬರಬೇಡಿ. ನಾನು ದಿನವೂ ಮನೆಯಿಂದ ಹೊರಗೆ ಕಾಲಿಡುವ ಮುನ್ನ ಚಂಡೀ ಪಾಠ ಮಾಡುತ್ತೇನೆ. ರಾಜಸ್ಥಾನ ಮತ್ತು ಗುಜರಾತ್ನಿಂದ ಬರುತ್ತಿರುವವರು ಇಲ್ಲಿ ಒಳಗಿನವರಂತೆ, ನಾನು ಹೊರಗಿನವಳಾಗಿದ್ದೇನೆ' ಎಂದು ನಂದಿಗ್ರಾಮಕ್ಕೆ ತಮ್ಮನ್ನು ಹೊರಗಿನವರು ಎಂದು ಬಿಂಬಿಸುತ್ತಿರುವ ಬಿಜೆಪಿ ವಿರುದ್ಧ ಕಿಡಿಕಾರಿದರು.
ಪಶ್ಚಿಮ ಬಂಗಾಳ ಚುನಾವಣಾ 'ಜ್ಯೋತಿಷ್ಯ ಭವಿಷ್ಯ': ಬಿಜೆಪಿ ಗಣನೀಯ ಸಾಧನೆ, ಆದರೆ..
ಮಾದರಿ ನಂದಿಗ್ರಾಮ ಮಾಡುತ್ತೇನೆ
2007ರ ಭೂ ಸ್ವಾಧೀನ ಹೋರಾಟದಲ್ಲಿ ಮೃತಪಟ್ಟ 'ನಂದಿಗ್ರಾಮದ ಹುತಾತ್ಮ'ರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ ಭರವಸೆ ನೀಡಿದ ಮಮತಾ, 'ನನ್ನ ಕ್ಷೇತ್ರ ಭವಾನಿಪುರಕ್ಕೆ ಹೋಗಿ ನೋಡಿ. ಅಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳೂ ಮುಗಿದಿವೆ. ನಂದಿಗ್ರಾಮವನ್ನು ಮಾದರಿ ನಂದಿಗ್ರಾಮವನ್ನಾಗಿ ಮಾಡುತ್ತೇನೆ. ಯಾವ ಮನೆಯಲ್ಲಿಯೂ ನಿರುದ್ಯೋಗ ಇರುವುದಿಲ್ಲ. ಯಾರೂ ಅವಿದ್ಯಾವಂತರಾಗಿ ಉಳಿಯುವುದಿಲ್ಲ' ಎಂದು ವಾಗ್ದಾನ ನೀಡಿದರು.
ಅವರು ಇಲ್ಲಿ ಹುಟ್ಟಲೇ ಇಲ್ಲ
ತಮ್ಮನ್ನು ಈ ಮಣ್ಣಿನ ಮಗ ಎಂದು ಕರೆದುಕೊಂಡಿರುವ ಸುವೇಂದು ಅಧಿಕಾರಿಯನ್ನು ಟೀಕಿಸಿದ ಅವರು, 'ನನಗೆ ಆಶ್ಚರ್ಯವಾಗುತ್ತಿದೆ. ನಾನು ನೆರೆಯ ಬಿರ್ಭುಮ್ ಜಿಲ್ಲೆಯಲ್ಲಿ ಜನಿಸಿದ್ದೆ. ಆದರೆ ನನ್ನನ್ನು ಹೊರಗಿನವಳು ಎಂದು ಕರೆಯುವ ವ್ಯಕ್ತಿ ಇಲ್ಲಿ ಜನಿಸಿಯೂ ಇಲ್ಲ. ನಾನು ಇಲ್ಲಿ ಕಳೆದ ಬಾರಿ ಬಂದಾಗ ಈ ಕ್ಷೇತ್ರದ ಶಾಸಕ ರಾಜೀನಾಮೆ ನೀಡಿದ್ದರು. ತಮ್ಮ ಹುದ್ದೆಯಿಂದ ಕೆಳಕ್ಕಿಳಿದಿದ್ದರು. ಇಲ್ಲಿನ ಜನರಿಗೆ ಅವರು ದ್ರೋಹ ಎಸಗಿದ್ದಾರೆ' ಎಂದು ಆರೋಪಿಸಿದರು.
"ಸಿಲಿಂಡರ್ ಬೆಲೆ ಏರಿಸಿದ ಸರ್ಕಾರ ಮೊದಲ ದೆಹಲಿಯಲ್ಲಿ ಪರಿವರ್ತನೆ ತರಲಿ": ದೀದಿ