"ನಿಮ್ಮ ಮಗ ಕೋಟಿಕೋಟಿ ಗಳಿಸುವುದು ಹೇಗೆ", ಅಮಿತ್ ಶಾಗೆ ದೀದಿ ತಿರುಗೇಟು
ಕೋಲ್ಕತ್ತಾ, ಫೆಬ್ರವರಿ.18: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಲೆ ದಕ್ಷಿಣದ 24 ಪರಗಣ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಮಾತಿನ ಸಮರ ನಡೆದಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಸಂಸದರೂ ಆಗಿರುವ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ಪರೋಕ್ಷವಾಗಿ ಗುಡುಗಿದ್ದರು. ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದದ್ಂತೆ ಎಲ್ಲ ಅಪರಾಧಿಗಳನ್ನು ಕಂಬಿ ಹಿಂದೆ ಕಳುಹಿಸಲಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದರು. ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ತಿರುಗೇಟು ನೀಡಿದ್ದು, ಅಮಿತ್ ಶಾ ಅವರ ಪುತ್ರ ಕೂಡಾ ಕೋಟಿ ಕೋಟಿ ಗಳಿಸಿದವರ ಪಟ್ಟಿಯಿಂದ ಹೊರತಾಗಿಲ್ಲ ಎಂದಿದ್ದಾರೆ.
ಮೋದಿಗೆ ಒಂದೇ ಒಂದು ಅವಕಾಶ ಕೊಟ್ಟು ನೋಡಿ; ಬಂಗಾಳ ಜನರಿಗೆ ಅಮಿತ್ ಶಾ ಮನವಿ
ನಂಖಾನಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಅಭಿಷೇಕ್ ಬ್ಯಾನರ್ಜಿ ಅವರ ಹೆಸರು ಉಲ್ಲೇಖಿಸದೇ ಪರೋಕ್ಷ ಆರೋಪ ಮಾಡಿದರು. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪಶ್ಚಿಮ ಬಂಗಾಳಕ್ಕೆ 3,59,000 ಕೋಟಿ ಆರ್ಥಿಕ ನೆರವು ನೀಡಿತ್ತು. ಈ ಹಣವೆಲ್ಲ ಎಲ್ಲಿ ಸೋದರಳಿ ಮತ್ತು ಆತನ ತಂಡದ ಸದಸ್ಯರಿಗೆ ಸೇರಿದೆಯೇ. ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಪರಾಧಿಗಳು ಯಾರೇ ಆಗಿದ್ದರೂ, ಎಲ್ಲಿಯೇ ಅಡಗಿದ್ದರೂ ಅವರನ್ನು ಹುಡುಕಿ ಕಂಬಿಗಳ ಹಿಂದೆ ನಿಲ್ಲಿಸಲಾಗುತ್ತದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಕಿಡಿ ಕಾರಿದ್ದರು.
ಕೇಂದ್ರ ಸಚಿವ ಅಮಿತ್ ಶಾಗೆ ಮಮತಾ ತಿರುಗೇಟು:
ಕೇಂದ್ರ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಗ್ಗೆ ಉಲ್ಲೇಖಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದರು. "ನೀವು ಪ್ರತಿನಿತ್ಯ ನೀವು ಸೋದರಳಿಯ ಎಂಬ ವಿಷಯವನ್ನು ಎತ್ತಿಕೊಂಡು ಮಾತನಾಡುತ್ತೀರ. ನಿಮ್ಮ ಮಗ ಕೂಡಾ ಕೋಟಿ ಕೋಟಿ ರೂಪಾಯಿ ಗಳಿಸುತ್ತಿರುವುದು ಹೇಗೆ, ನಿಮ್ಮ ಮಗ ಕೂಡಾ ಇದರಿಂದ ಹೊರತಾಗಿಲ್ಲ" ಎಂದು ಮಮತಾ ಬ್ಯಾನರ್ಜಿ ಪ್ರತಿದಾಳಿ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರಚಾರ ನಡೆಸಿದ ಪ್ರದೇಶದಿಂದ ಕಲವೇ ಕಿಲೋ ಮೀಟರ್ ದೂರದಲ್ಲಿರುವ ಪೈಲಾನ್ ಜಿಲ್ಲೆಯಲ್ಲಿ ಮಮತಾ ಬ್ಯಾನರ್ಜಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. "ನನ್ನ ಕುಟುಂಬದಲ್ಲಿನ ಯಾರೊಬ್ಬರು ಕೂಡಾ ಪಶ್ಚಿಮ ಬಂಗಾಳದ ಹೆಸರನ್ನು ಹಾಳು ಮಾಡುವಂತಾ ಕೆಲಸವನ್ನು ಮಾಡಿಲ್ಲ. ನಮ್ಮ ಕುಟುಂಬದಲ್ಲೇ ಹಲವರು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಭಿಷೇಕ್ ಬ್ಯಾನರ್ಜಿ ನನ್ನಿಂದ ಯಾವುದೇ ಉಪಯೋಗ ಪಡೆದುಕೊಂಡಿಲ್ಲ. ನನ್ನಿಂದಾಗಿ ಅಭಿಷೇಕ್ ಆರೋಪಗಳನ್ನು ಎದುರಿಸುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ 294 ವಿಧಾನಸಭಾ ಕ್ಷೇತ್ರಗಳಿಗೆ 2021ರಲ್ಲೇ ಚುನಾವಣೆ ನಡೆಯಲಿದೆ. ಕಳೆದ ಬಾರಿ 2016ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 44, ಎಡಪಕ್ಷ 33, ಟಿಎಂಸಿ 211 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರೆ, ಬಿಜೆಪಿ 3 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಆದರೆ ಇತ್ತೀಚಿಗೆ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ 18 ಅಭ್ಯರ್ಥಿಗಳು ಜಯ ಸಾಧಿಸಿದ್ದರು.