ಮಮತಾ ಬ್ಯಾನರ್ಜಿಗೆ ಕಿಮ್ ಜಾಂಗ್ ಉನ್ ಎಂದ ಗಿರಿರಾಜ್ ಸಿಂಗ್!
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಂತೆಯೇ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಹತ್ಯೆಯ ಬಗ್ಗೆ ಅವರು ಮಾತನಾಡುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅಥವಾ ಟಿಎಂಸಿ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ ಅಂಥವರನ್ನು ಕೊಲ್ಲಲಾಗುತ್ತದೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪಾತ್ರವನ್ನು ಭಾರತದಲ್ಲಿ ಮಮತಾ ಬ್ಯಾನರ್ಜಿ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಪಶುಸಂಗೋಪನಾ ಇಲಾಖೆ ಸಚಿವ ಗಿರಿರಾಜ್ ಸಿಂಗ್ ಹೇಳಿದರು.
ಮತ್ತೆ ರಣಕಹಳೆ ಊದಿದ ಮಮತಾ, ಬಿಜೆಪಿ ವಿಜಯಯಾತ್ರೆಗೆ ನಿಷೇಧ
"ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಬಿಜೆಪಿ 'ವಿಜಯ ಯಾತ್ರೆಗೆ' ಮಮತಾ ಬ್ಯಾನರ್ಜಿ ಅವಕಾಶ ಮಾಡಿಕೊಟ್ಟಿಲ್ಲ. ಈ ರಾಜ್ಯದಲ್ಲಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ" ಎಂದು ಸಿಂಗ್ ಹೇಳಿದರು.
"ಬಿಜೆಪಿಯಿಂದಾಗಿ ರಾಜ್ಯದಲ್ಲಿ(ಪಶ್ಚಿಮ ಬಂಗಾಳ) ಹಿಂಸಾಚಾರ ನಡೆಯುತ್ತಿದ್ದು ಆದ್ದರಿಂದ ವಿಜಯಯಾತ್ರೆಗೆ ನಾನು ಅನುಮತಿ ನೀಡುವುದಿಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ ರಾಜ್ಯದ ಹೂಗ್ಲಿ, ಬಂಕುರಾ, ಪುರುಲಿಯಾ ಮತ್ತು ಮಿಡ್ನಾಪೋರ್ ಗಳಲ್ಲಿ ವಿಜಯ ಯಾತ್ರೆಯ ಹೆಸರಿನಲ್ಲಿ ಬಿಜೆಪಿ ಹಿಂಸಾಚಾರ ನಡೆಸಲು ಉದ್ದೇಶಿಸಿದೆ. ಆದ್ದರಿಂದ ಯಾವುದೇ ವಿಜಯಯಾತ್ರೆಗೆ ನಾನು ಅವಕಾಶ ನೀಡುವುದಿಲ್ಲ" ಎಂದು ಶುಕ್ರವಾರ ಮಮತಾ ಬ್ಯಾನರ್ಜಿ ಹೇಳಿದದ್ದರು.