ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ಗಲಭೆಯಲ್ಲಿ ನಾಲ್ವರ ಸಾವು
ಕೋಲ್ಕತ್ತಾ, ಏಪ್ರಿಲ್ 10: ಪಶ್ಚಿಮ ಬಂಗಾಳದಲ್ಲಿ ಶನಿವಾರ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಸಂದರ್ಭ ಕೂಚ್ಬೆಹರ್ನಲ್ಲಿ ನಡೆದ ಗಲಭೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಸಿತಲ್ಕುಚಿಯ ಕೂಚ್ಬೆಹರ್ ಜಿಲ್ಲೆಯಲ್ಲಿ ಬೆಳಿಗ್ಗೆ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಗಲಭೆ ಏರ್ಪಟ್ಟಿದೆ. ಈ ಸಂದರ್ಭ ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬಂಗಾಳದಲ್ಲಿ ಮತದಾರರ ಸಾಲಿನ ಮೇಲೆ ಗುಂಡಿನ ದಾಳಿ: ಒಬ್ಬ ಸಾವು
ಶನಿವಾರ ಬೆಳಿಗ್ಗೆ ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ಆರಂಭವಾಗಿದ್ದು, ಸಿತಲ್ಕುಚಿಯ ಬೂತ್ ನಂಬರ್ 285ರಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅದೇ ಪ್ರದೇಶದ ಸುತ್ತ ಕಚ್ಚಾ ಬಾಂಬ್ಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಂತೆ ಕೆಲವರು ಗುಂಡು ಹಾರಿಸಿದ್ದರು ಎನ್ನಲಾಗಿದೆ. ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ.
ಈ ಮುನ್ನ ಸಿತಲ್ಕುಚಿ, ನಟಲ್ಬರಿ, ತುಫಂಘನಿ ಹಾಗೂ ದಿನ್ಹಾಟಾದ ಮತದಾನ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಗಲಭೆ ಸೃಷ್ಟಿಸುತ್ತಿದ್ದಾರೆ, ಟಿಎಂಸಿ ಕಾರ್ಯಕರ್ತರನ್ನು ಒಳಗೆ ಬಿಡುತ್ತಿಲ್ಲ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಬೆಳಿಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮೂರು ಹಂತದ ಚುನಾವಣೆ ಪೂರ್ಣಗೊಂಡಿದ್ದು, ಶನಿವಾರ, ಏಪ್ರಿಲ್ 10ರಂದು 44 ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದೆ. ಚುನಾವಣೆ ನಡೆಯುತ್ತಿರುವ ಹಲವು ಕಡೆಗಳಲ್ಲಿ ಗಲಭೆ ನಡೆದಿರುವ ವರದಿಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದ್ದು, ಹೂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ ಅವರ ಕಾರಿನ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ. ವರದಿ ಮಾಡಲು ಬಂದಿದ್ದ ಮಾಧ್ಯಮದವರ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಕೂಚ್ಬೇಹರ್ ಜಿಲ್ಲೆಯ ಸಿತಲ್ಕುಚಿಯಲ್ಲಿ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಲಾಗಿದೆ. ಆನಂದ ಬರ್ಮಾನ್ (18) ಎಂಬುವರು ಸಾವನ್ನಪ್ಪಿದ್ದಾರೆ. ಇವರು ಮೊದಲ ಬಾರಿ ಮತ ಹಾಕಲು ಬಂದಿದ್ದರು ಎನ್ನಲಾಗಿದೆ.