ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೊಸ ಇನ್ನಿಂಗ್ಸ್ಗೆ ಪಿಚ್ ಸಜ್ಜು!
ಕೋಲ್ಕತಾ, ಮಾರ್ಚ್ 5: ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ನಿರೀಕ್ಷೆಯಂತೆಯೇ ತಿವಾರಿ ಅವರಿಗೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಟಿಕೆಟ್ ನೀಡಿದ್ದಾರೆ.
ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ 294 ಕ್ಷೇತ್ರಗಳ ಪೈಕಿ ಟಿಎಂಸಿಯಿಂದ ಸ್ಪರ್ಧಿಸಲಿರುವ 291 ಅಭ್ಯರ್ಥಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶುಕ್ರವಾರ ಪ್ರಕಟಿಸಿದರು. ಈ ಬಾರಿ ಟಿಎಂಸಿಯಿಂದ ವಿವಿಧ ವಲಯಗಳ ಸೆಲೆಬ್ರಿಟಿಗಳು ಟಿಕೆಟ್ ಪಡೆದಿದ್ದಾರೆ.
ಚುನಾವಣೆ ಸಮೀಪದಲ್ಲಿಯೇ ಟಿಎಂಸಿ ಸೇರಿಕೊಂಡ ಖ್ಯಾತ ಕ್ರಿಕೆಟಿಗ
ಹೂಗ್ಲಿ ಜಿಲ್ಲೆಯಲ್ಲಿ ಫೆ. 24ರಂದು ನಡೆದಿದ್ದ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಮನೋಜ್ ತಿವಾರಿ ಟಿಎಂಸಿ ಸೇರ್ಪಡೆಯಾಗಿದ್ದರು. ಅವರಿಗೆ ಹೌರಾ ಜಿಲ್ಲೆಯ ಶಿವಪುರ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇದರಿಂದ ಪಶ್ಚಿಮ ಬಂಗಾಳ ಕ್ರಿಕೆಟ್ ತಂಡದ ಮಾಜಿ ನಾಯಕನ ಎರಡನೆಯ ಇನ್ನಿಂಗ್ಸ್ ಆರಂಭವಾಗಲಿದೆ. ಮನೀಜ್ ತಿವಾರಿ ಅವರಿಗೆ ಎದುರಾಳಿಯಾಗಿ ಬಿಜೆಪಿ ಹಾಗೂ ಎಡಪಕ್ಷಗಳ ಒಕ್ಕೂಟ ಯಾವ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ ಎನ್ನುವುದು ಕುತೂಹಲ ಮೂಡಿಸಿದೆ.
ಪಶ್ಚಿಮ ಬಂಗಾಳ ರಣಜಿ ತಂಡದ ನಾಯಕರಾಗಿದ್ದ ತಿವಾರಿ, ಭಾರತದ ಪರ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೆಕೆಆರ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸುಪರ್ಜೈಂಟ್ಸ್ ಪರವಾಗಿ ಐಪಿಎಲ್ನಲ್ಲಿ ಆಡಿದ್ದರು.
'ಹೋರಾಟ ಶುರುವಾಗಿದೆ. ಜನರೊಂದಿಗೆ, ಜನರ ಜತೆ. ಏನಾದರೂ ಸಾಧಿಸೋಣ. ಉತ್ತಮ ಬಂಗಾಳ ನಿರ್ಮಾಣಕ್ಕಾಗಿ ಪಕ್ಷಾತೀತವಾಗಿ ಎಲ್ಲರನ್ನೂ ಜತೆಗೆ ಕರೆದೊಯ್ಯುತ್ತೇನೆ. ಇದು ನನ್ನ ಭರವಸೆ' ಎಂದು ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ: ಮಮತಾ ವಿರುದ್ಧ ಸುವೇಂದು ಅಧಿಕಾರಿ ಸ್ಪರ್ಧೆ?
ಮನೋಜ್ ತಿವಾರಿ ಅವರಲ್ಲದೆ, ಮಾಜಿ ಫುಟ್ಬಾಲ್ ಆಟಗಾರ ವಿದೇಶ್ ಬೋಶ್, ನಟಿ ಸಯಾನಿ ಘೋಷ್, ನಟಿ ಲವ್ಲಿ ಮೊಯಿತ್ರಾ, ನಟಿ ಸೋಹಮ್, ನಟ ಸೋಹನ್ ಚಕ್ರವರ್ತಿ, ನಿರ್ದೇಶಕ ರಾಜ್ ಚಕ್ರವರ್ತಿ ಮುಂತಾದವರು ಸಹ ಟಿಎಂಸಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.