ಟಿಎಂಸಿಯಿಂದ ಹಲ್ಲೆ ಆರೋಪ: ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾಗೆ ವೈ ಪ್ಲಸ್ ಭದ್ರತೆ
ಕೋಲ್ಕತಾ, ಮಾರ್ಚ್ 31: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಪುರದ ಮೋಯ್ನಾದಿಂದ ಸ್ಪರ್ಧಿಸುತ್ತಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಅವರಿಗೆ ವೈ ಪ್ಲಸ್ ಭದ್ರತೆ ಒದಗಿಸಲಾಗಿದೆ. ಮಂಗಳವಾರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದಿಂಡಾ ಅವರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ.
ದಿಂಡಾ ಸ್ಪರ್ಧಿಸುತ್ತಿರುವ ಮೋಯ್ನಾ ಕ್ಷೇತ್ರಕ್ಕೆ ಏಪ್ರಿಲ್ 1ರಂದು ಎರಡನೆಯ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಬಹಿರಂಗ ಪ್ರಚಾರದ ಕೊನೆಯ ದಿನವಾದ ಮಂಗಳವಾರ ರೋಡ್ ಶೋ ಮುಗಿಸಿ ಹಿಂದಿರುಗುತ್ತಿದ್ದ ದಿಂಡಾ ಅವರ ಮೇಲೆ ಹಲ್ಲೆ ನಡೆದಿದ್ದು, ಅವರ ವಾಹನವನ್ನು ಪುಡಿಗಟ್ಟಲಾಗಿದೆ ಎಂದು ಆರೋಪಿಸಲಾಗಿತ್ತು.
ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾಗೆ ಮೋಯ್ನಾದಿಂದ ಟಿಕೆಟ್ ನೀಡಿದ ಬಿಜೆಪಿ
ಈ ಘಟನೆ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಸಂಜೆ 4.30ರ ವೇಳೆಗೆ ರೋಡ್ ಶೋ ಮುಗಿಸಿ ಮರಳುತ್ತಿದ್ದಾಗ ಲಾಠಿ ಮತ್ತು ರಾಡುಗಳನ್ನು ಹಿಡಿದ ನೂರಾರು ಗೂಂಡಾಗಳು ಅವರ ಎಸ್ಯುವಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಅವರ ಮ್ಯಾನೇಜರ್ ಆರೋಪಿಸಿದ್ದಾರೆ.
ನಿವೃತ್ತಿ ಘೋಷಿಸಿದ ಮೂರು ವಾರದಲ್ಲೇ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಬಿಜೆಪಿ ಸೇರ್ಪಡೆ
'ಗೂಂಡಾಗಳು ಕಾರಿನ ಒಳಗೆ ಕಲ್ಲುಗಳನ್ನು ಕೂಡ ಎಸೆದರು. ಇದರಿಂದ ದಿಂಡಾ ಅವರ ಭುಜಕ್ಕೆ ಗಾಯಗಳಾಗಿವೆ. ಈ ಘಟನೆ ಮೋಯ್ನಾ ಬಜಾರ್ ಮುಂಭಾಗದಲ್ಲಿಯೇ ನಡೆದಿದೆ. ಸ್ಥಳೀಯ ಟಿಎಂಸಿ ಗೂಂಡಾ ಷಹಜಹಾನ್ ಅಲಿ ಮತ್ತು ನೂರಾರು ಮಂದಿ ಲಾಠಿ, ರಾಡು ಹಾಗೂ ಇಟ್ಟಿಗೆಗಳಿಂದ ದಾಳಿ ನಡೆಸಿದ್ದಾರೆ' ಎಂದು ಅವರು ಹೇಳಿದ್ದಾರೆ. ಈ ಘಟನೆಯ ಮರುದಿನವೇ ಅವರಿಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ.