ಬಂಗಾಳದಲ್ಲಿ ಮತದಾರರ ಸಾಲಿನ ಮೇಲೆ ಗುಂಡಿನ ದಾಳಿ: ಒಬ್ಬ ಸಾವು
ಕೋಲ್ಕತಾ, ಏಪ್ರಿಲ್ 10: ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆಯುತ್ತಿರುವ ನಾಲ್ಕನೆಯ ಹಂತದ ಚುನಾವಣೆಯ ವೇಳೆ ಗುಂಡಿನ ದಾಳಿಯಲ್ಲಿ ಒಬ್ಬ ಮತದಾರ ಮೃತಪಟ್ಟಿದ್ದಾನೆ. ಕೂಚ್ ಬೆಹಾರ್ ಜಿಲ್ಲೆಯ ಸೀತಾಳ್ಕುಚಿ ಎಂಬಲ್ಲಿನ ಮತಗಟ್ಟೆಯೊಂದರಲ್ಲಿ ಈ ಘಟನೆ ನಡೆದಿದೆ.
ಸೀತಾಳ್ಕುಚಿಯ ಮತಗಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಮತದಾರರು ಮತ ಚಲಾಯಿಸಲು ಸಾಲುಗಟ್ಟಿ ನಿಂತಿದ್ದರು. ಆಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಆನಂದ ಬರ್ಮನ್ ಎಂದು ಗುರುತಿಸಲಾಗಿದೆ. 18 ವರ್ಷದ ಆನಂದ, ಇದೇ ಮೊದಲ ಬಾರಿಗೆ ಮತ ಚಲಾಯಿಸಲು ತೆರಳಿದ್ದ. ಆದರೆ ಅದಕ್ಕೂ ಮೊದಲೇ ಹತ್ಯೆಯಾಗಿದ್ದಾನೆ.
ಗುಂಡಿನ ದಾಳಿಯನ್ನು ಯಾರು, ಯಾವ ಕಾರಣಕ್ಕೆ ನಡೆಸಿದರು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಆದರೆ ಈ ಘಟನೆ ಟಿಎಂಸಿ ಮತ್ತು ಬಿಜೆಪಿ ನಡುವೆ ಪರಸ್ಪರ ದೂಷಣೆಗೆ ಕಾರಣವಾಗಿದೆ. ಮೃತಪಟ್ಟ ಯುವಕನ ಸಂಬಂಧಿಕರು ತಾವು ಬಿಜೆಪಿ ಬೆಂಬಲಿಗರು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಟಿಎಂಸಿ, ಮೃತಪಟ್ಟ ಯುವಕ ಟಿಎಂಸಿ ಬೆಂಬಲಿಗ ಎಂದು ಹೇಳಿಕೊಂಡಿದೆ. ಈ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಇಂದು ನಾಲ್ಕನೆಯ ಹಂತದ ಚುನಾವಣೆ ನಡೆಯುತ್ತಿದ್ದು, 373 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ರಾಜ್ಯ ಸಚಿವರಾದ ಪಾರ್ಥ ಚಟರ್ಜಿ ಮತ್ತು ಅರುಪ್ ಬಿಸ್ವಾಸ್ ಸೇರಿದ್ದಾರೆ.