ಪ.ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ FIR ದಾಖಲು
ಕೊಲ್ಕತ್ತಾ, ಜೂನ್ 6: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಆವರ ಸೋದರನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪುರ್ಬಾ ಮೇದಿನಿಪುರ ಜಿಲ್ಲೆಯ ಕಾಂತಿ ಪುರಸಭೆ ಕಛೇರಿಯಿಂದ ಪರಿಹಾರ ಸಾಮಾಗ್ರಿಗಳನ್ನು ಕದ್ದ ಆರೋಪ ಸುವೇಂದು ಅಧಿಕಾರಿ ಹಾಗೂ ಅವರ ಸೋದರನ ಮೇಲಿದೆ.
ಕಾಂತಿ ಪುರಸಭೆ ಆಡಳಿತ ಮಂಡಳಿಯ ಸದಸ್ಯ ರತ್ನದೀಪ್ ಮನ್ನಾ ನೀಡಿದ ದೂರಿನ ಆಧಾರದಲ್ಲಿ ಅಧಿಕಾರಿ ಸಹೋದರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಸ್ಟ್ ಮಿಡ್ನಾಪೂರ್ನ ಕಾಂತಿ ಪೊಲೀಸ್ ಠಾಣೆಯಲ್ಲಿ ಜೂನ್ ಒಂದರಂದು ಈ ದೂರನ್ನು ದಾಖಲಿಸಲಾಗಿತ್ತು.
ಈ ದೂರಿನಲ್ಲಿ "ಮೇ 29, 2021 ರಂದು ಮಧ್ಯಾಹ್ನ 12:30ರ ವೇಳೆಗೆ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಮಾಜಿ ಮುನ್ಸಿಪಲ್ ಮುಖ್ಯಸ್ಥ ಸೌಮೇಂದು ಅಧಿಕಾರಿಯ ನಿರ್ದೇಶನದ ಮೇರೆಗೆ ಕಾಂತಿ ಪುರಸಭೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಟಾರ್ಪಾಲ್ಗಳನ್ನು ಬಲವಂತವಾಗಿ ಮತ್ತು ಕಾನೂನಿಗೆ ವಿರುದ್ಧವಾಗಿ ಬೀಗ ತೆಗೆದು ಕೊಂಡೊಯ್ಯಲಾಗಿದೆ" ಎಂದು ಆರೋಪಿಸಲಾಗಿದೆ.
ಈ ಕಳ್ಳತನವನ್ನು ಮಾಡುವ ಸಲುವಾಗಿ ಬಿಜೆಪಿ ನಾಯಕರು ಕೇಂದ್ರ ಸಶಸ್ತ್ರಪಡೆಗಳನ್ನು ಬಳಸಿಕೊಂಡಿದೆ ಎಂದು ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತ ಅಬ್ಬರಿಸಿತ್ತು. ಇದರ ಪರಿಹಾರ ಕಾರ್ಯಾಚಣೆಗೆ ಬಳಸಲು ಸಂಗ್ರಸಿದ್ದ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ ಆರೋಪ ಇದಾಗಿದೆ.
ಈ ದೂರಿನ ಆಧಾರದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಸುವೇಂದು ಅಧಿಕಾರಿ, ಸೌಮೇಂದು ಅಧಿಕಾರಿ, ಹಿಮಾಂಗ್ಶು ಮನ್ನಾ ಮತ್ತು ಪ್ರತಾಪ್ ಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಪ್ರತಾಪ್ ದೇ ಪೊಲೀಸರ ವಶದಲ್ಲಿದ್ದು ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.