ಬಂಗಾಳ ಬಿಜೆಪಿಗೆ ಮತ್ತೆ ಆಘಾತ: ಕಮಲ ಪಾಳಯ ತೊರೆದು 5 ನೇ ಶಾಸಕ ಟಿಎಂಸಿ ಸೇರ್ಪಡೆ
ಕೋಲ್ಕತ್ತಾ, ಅಕ್ಟೋಬರ್ 27: ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ್ತೆ ಆಘಾತ ಉಂಟಾಗಿದೆ. ಉತ್ತರ ಬಂಗಾಳದ ರಾಯಗಂಜ್ನ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಬಿಜೆಪಿ ಪಾಳಯವನ್ನು ತೊರೆದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಬುಧವಾರ ಸೇರ್ಪಡೆ ಆಗಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಆಡಳಿತವನ್ನು ವಹಿಸಿಕೊಂಡ ಬಳಿಕ ಕೃಷ್ಣ ಕಲ್ಯಾಣಿ ಸೇರಿದಂತೆ ಒಟ್ಟು ಐದು ಬಿಜೆಪಿ ಶಾಸಕರು ಟಿಎಂಸಿ ತೆಕ್ಕೆಗೆ ಸೇರಿದ್ದಾರೆ. ಕಳೆದ ತಿಂಗಳು ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಪಕ್ಷವನ್ನು ತೊರೆದು ಟಿಎಂಸಿಗೆ ಸೇರಿದ್ದಾರೆ.
ಮತ್ತೆ ಟಿಎಂಸಿ ಸೇರಿದ ಬಿಜೆಪಿಯ ನಾಲ್ಕನೇ ಶಾಸಕ; ಕೇಸರಿ ಪಕ್ಷಕ್ಕೆ ಶಾಕ್!
ಇನ್ನು ಕೋಲ್ಕತ್ತಾದ ಹೊಟೇಲ್ ಒಂದರಲ್ಲಿ ಟಿಎಂಸಿ ಸೇರ್ಪಡೆ ಆದ ಬಳಿಕ ಮಾತನಾಡಿದ ಕೃಷ್ಣ ಕಲ್ಯಾಣಿ, "ಬಿಜೆಪಿಯಲ್ಲಿ ಯಾವುದೇ ಉತ್ತಮ ಸಾಧನೆಯ ಬಗ್ಗೆ ಪಟ್ಟಿಯೇ ಇಲ್ಲ. ಕೇವಲ ಪಿತೂರಿ ಮಾತ್ರ ಇದೆ. ಆದರೆ ಕೇವಲ ಪಿತೂರಿಯನ್ನು ನಡೆಸಿ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದು. ಚುನಾವಣೆಯಲ್ಲಿ ಗೆಲುವು ಗಳಿಸಲು ಮುಖ್ಯವಾಗಿ ಬೇಕಾದುದ್ದು ಅಭಿವೃದ್ದಿ," ಎಂದು ಹೇಳಿದ್ದಾರೆ.
"ಯಾವುದೇ ಸ್ವಾಭಿಮಾನ ಇರುವ ವ್ಯಕ್ತಿ ಬಿಜೆಪಿಯಲ್ಲಿ ಇರಲು ಸಾಧ್ಯ. ನಾನು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದಲೂ ಬೇಸರಗೊಂಡಿದ್ದೆ. ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಕಡಿಮೆ ಮಾಡುವತ್ತ ಒಂದು ಚೂರು ಗಮನ ಹರಿಸುತ್ತಿಲ್ಲ. ಈ ಎಲ್ಲಾ ಕಾರಣದಿಂದಾಗಿ ನಾನು ಬಿಜೆಪಿಯಲ್ಲಿ ಇರುವುದು ಸರಿಯಲ್ಲ ಎಂದು ನನಗೆ ಅನಿಸಿತು. ಯಾರಾದರೂ ಶಾಸಕರಾಗಿ ಜನ ಪರವಾದ ಉತ್ತಮ ಕಾರ್ಯ ಮಾಡಬೇಕು ಎಂಬ ನಿಲುವನ್ನು ಹೊಂದಿದ್ದರೆ, ಅದು ಬಿಜೆಪಿಯಲ್ಲಿ ಸಾಧ್ಯವಿಲ್ಲ. ಬಿಜೆಪಿಯು ಹೀಗೆ ಉತ್ತಮ ಕಾರ್ಯವನ್ನು ಮಾಡಲು ಬಿಡುವುದಿಲ್ಲ," ಎಂದು ಆರೋಪ ಮಾಡಿದ್ದಾರೆ.
ಬಿಜೆಪಿ ತೊರೆದು ಮತ್ತೆ ಟಿಎಂಸಿ ಸೇರಿದ ಮುಕುಲ್ ರಾಯ್
ಕೃಷ್ಣ ಕಲ್ಯಾಣಿ ಅಕ್ಟೋಬರ್ 1 ರಂದು ಬಿಜೆಪಿಯನ್ನು ತೊರೆದಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಸುಕಾಂತ ಮಜುಂದಾರ್, ಮಾಜಿ ಕೇಂದ್ರ ಸಚಿವ ಮತ್ತು ರಾಯಗಂಜ್ ಸಂಸದೆ ದೇವಶ್ರೀ ಚೌಧರಿ ಸೇರಿದಂತೆ ಹಿರಿಯ ನಾಯಕರುಗಳು ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ ಕೃಷ್ಣ ಕಲ್ಯಾಣಿಗೆ ಬಿಜೆಪಿ ಶೋಕಾಸ್ ನೊಟೀಸ್ ನೀಡಿತ್ತು. ಈ ಬೆನ್ನಲ್ಲೇ ಕೃಷ್ಣ ಕಲ್ಯಾಣಿ ಬಿಜೆಪಿಯನ್ನು ತೊರೆದಿದ್ದಾರೆ. ಈಗ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಉದ್ಯಮಿ ಆದವರು ಏನು ಮಾಡಬೇಕು ಅದನ್ನು ಮಾಡಿದ್ದಾರೆ!
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಸುಕಾಂತ ಮಜುಂದಾರ್, "ಇದು ಅವರ ವೈಯಕ್ತಿಕ ದೃಷ್ಟಿಕೋನ. ನಾನು ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲು ಬಯಸುವುದಿಲ್ಲ. ಹಲವು ದಿನಗಳ ಹಿಂದೆಯೇ ಕೃಷ್ಣ ಕಲ್ಯಾಣಿ ಪಕ್ಷವನ್ನು ತೊರೆದಿದ್ದಾರೆ. ಕೃಷ್ಣ ಕಲ್ಯಾಣಿ ಉದ್ಯಮಿ. ರಾಜ್ಯದಲ್ಲಿ ಓರ್ವ ಉದ್ಯಮಿ ಈ ಸಂದರ್ಭದಲ್ಲಿ ಉಳಿಯಬೇಕಾದರೆ ಏನು ಮಾಡಬೇಕು ಎಂದು ಎಲ್ಲಾ ಉದ್ಯಮಿಗಳಿಗೆ ತಿಳಿದಿರುವ ವಿಚಾರ. ರಾಯ್ಗಂಜ್ನ ಜನರು ಭವಿಷ್ಯದಲ್ಲಿ ಕೃಷ್ಣ ಕಲ್ಯಾಣಿಗೆ ತಕ್ಕ ಉತ್ತರ ನೀಡಲಿದ್ದಾರೆ," ಎಂದು ಹೇಳಿದರು.
ಬಿಜೆಪಿ ಮಾಜಿ ನಾಯಕ ಬಾಬುಲ್ ಸುಪ್ರೀಯೋ ಟಿಎಂಸಿ ಸೇರ್ಪಡೆ
ಇದಕ್ಕೂ ಮುನ್ನ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಸೇರಿದಂತೆ ಬಿಜೆಪಿಯ ಕೃಷ್ಣನಗರದ ಉತ್ತರ ಶಾಸಕ ಮುಕುಲ್ ರಾಯ್, ಬಿಷ್ಣುಪುರ್ ಶಾಸಕ ತನ್ಮಯ್ ಘೋಷ್, ಬಾಗ್ದಾ ಶಾಸಕ ಬಿಸ್ವಜಿತ್ ದಾಸ್ ಮತ್ತು ಕಲಿಯಗಂಜ್ ಶಾಸಕ ಸೌಮೆನ್ ರಾಯ್ ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆ ಆಗಿದ್ದರು. "ಹಲವಾರು ಬಿಜೆಪಿ ಶಾಸಕರು ಟಿಎಂಸಿ ಸೇರ್ಪಡೆ ಆಗಲು ಸಿದ್ಧವಾಗಿದ್ದಾರೆ, ನಾವು ನಮ್ಮ ಪಕ್ಷದ ಬಾಗಿಲು ತೆರೆದ ಮರುದಿನವೇ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನಿರ್ನಾಮವಾಗಲಿದೆ," ಎಂದು ಟಿಎಂಸಿ ನಾಯಕ ಅಭೀಷೇಕ್ ಬ್ಯಾನರ್ಜಿ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿರುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.
(ಒನ್ಇಂಡಿಯಾ ಸುದ್ದಿ)