ಕಳೆದ ಎಂಟು ವರ್ಷದಲ್ಲಿ ರೈತರ ಆದಾಯ ಮೂರುಪಟ್ಟು ಹೆಚ್ಚಳ
ಕೋಲ್ಕತ್ತಾ, ಡಿಸೆಂಬರ್.23: ಭಾರತ ದೇಶದ ಆರ್ಥಿಕತೆಗೆ ರೈತನೇ ಬೆನ್ನೆಲುಬು. ದೇಶದ ಪಾಲಿನ ಬೆನ್ನೆಲುಬಾಗಿರುವ ರೈತನನ್ನು ಸ್ಮರಿಸುವ, ಗೌರವಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಪಶ್ಚಿಮ ಬಂಗಾಳ ರೈತರ ಮುಖದಲ್ಲಿ ನಗು ಮೂಡಿಸುವಂತಾ ಮಾಹಿತಿಯೊಂದನ್ನು ಹೊರ ಹಾಕಿದೆ. ಕಳೆದ ಎಂಟು ವರ್ಷಗಳಲ್ಲಿ ರಾಜ್ಯದ ರೈತರ ಆದಾಯ ಪ್ರಮಾಣ ಕನಿಷ್ಠ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಮಹಾರಾಷ್ಟ್ರ ಸರ್ಕಾರ
ಮಾಜಿ ಪ್ರಧಾನಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನ ಮುಖ್ಯಸ್ಥರಾಗಿದ್ದ ದಿವಂಗತ ಚೌಧರಿ ಚರಣ್ ಸಿಂಗ್ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ರೈತರನ್ನು ಉದ್ದೇಶಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿದರು.
ಪಶ್ಚಿಮ ಬಂಗಾಳದಲ್ಲಿ ರೈತರಿಗೆ ಮೂರು ಪಟ್ಟು ಆದಾಯ
ಪಶ್ಚಿಮ ಬಂಗಾಳದಲ್ಲಿ ಕಳೆದ ಎಂಟು ವರ್ಷಗಳಲ್ಲಿ ರೈತರ ಆದಾಯದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ. ಈ ಎಂಟು ವರ್ಷಗಳಲ್ಲಿ ರಾಜ್ಯದ ರೈತರು ಮೂರು ಪಟ್ಟು ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. 2010-11ನೇ ಸಾಲಿನಲ್ಲಿ ರಾಜ್ಯದ ರೈತರ ವಾರ್ಷಿಕ ಆದಾಯ 91 ಸಾವಿರ ರೂಪಾಯಿ ಆಗಿತ್ತು. ಆದರೆ, 2018ರ ವೇಳೆಗೆ ರಾಜ್ಯದ ರೈತರ ವಾರ್ಷಿಕ ಆದಾಯವು 2 ಲಕ್ಷ 91 ಸಾವಿರ ರೂಪಾಯಿ ಆಗಿದೆ. ಸರಾಸರಿ ಆದಾಯದಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಕಳೆದ ಎಂಟು ವರ್ಷದಲ್ಲಿ 2.5ರಷ್ಟು ಹೆಚ್ಚಳ
ಪಶ್ಚಿಮ ಬಂಗಾಳದಲ್ಲಿ ರೈತರ ನೆರವಿಗೆ ರಾಜ್ಯ ಸರ್ಕಾರದ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲೂ ಗಣನೀಯ ಏರಿಕೆ ಕಂಡಿದೆ. ಕಳೆದ ಎಂಟು ವರ್ಷಗಳ ಹಿಂದೆ ಎಂದರೆ 2011ರಲ್ಲಿ 27 ಲಕ್ಷ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿತ್ತು. ಆದರೆ, 2019ರಲ್ಲಿ ರಾಜ್ಯ ಸರ್ಕಾರದಿಂದ 69 ಲಕ್ಷ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗಿದೆ.
ರಾಜ್ಯದ ರೈತರ ನೆರವಿಗೆ ಕೃಷಿಕ ಬಂಧು ಯೋಜನೆ
ರಾಜ್ಯದಲ್ಲಿ ರೈತರ ನೆರವಿಗಾಗಿ ಕೃಷಿಕ ಬಂಧು ಎಂಬ ವಿಮೆ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದ ರೈತರಿಗೆ ನೆರವು ನೀಡುವ ಉದ್ದೇಶದಿಂದ ಬೆಳೆನಷ್ಟ ತುಂಬಿಕೊಳ್ಳಲು ರಾಜ್ಯ ಸರ್ಕಾರವೇ ಈ ವಿಮೆ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯ 72 ಲಕ್ಷಕ್ಕೂ ಅಧಿಕ ಮಂದಿ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೆರವಿಲ್ಲದೇ ರೈತರಿಗೆ ಬೆಳೆವಿಮೆ
ಇನ್ನು, ಪಶ್ಚಿಮ ಬಂಗಾಳದಲ್ಲಿ ರೈತರಿಗೆ ಬೆಳೆವಿಮೆಯನ್ನು ರಾಜ್ಯ ಸರ್ಕಾರದಿಂದಲೇ ಘೋಷಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲುದಾರಿಗೆ ಇಲ್ಲವೇ ಇಲ್ಲ. ಕೇಂದ್ರ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಪಡೆಯದೇ ರಾಜ್ಯ ಸರ್ಕಾರವೇ ಈ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.