ಪ್ರಚಾರ ಅವಧಿ ಮೊಟಕುಮಾಡಿದ ಆಯೋಗದ ಮೇಲೆ ದೀದಿ ಕೆಂಡಾಮಂಡಲ
ಕೊಲ್ಕತ್ತಾ, ಮೇ 15: ಬಹಿರಂಗ ಪ್ರಚಾರದ ಅವಧಿಯನ್ನು ಒಂದು ದಿನ ಮೊಟಕು ಗೊಳಿಸಿರುವ ಚುನಾವಣಾ ಆಯೋಗದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೆಂಡಾಮಂಡಲವಾಗಿದ್ದಾರೆ.
ನಿನ್ನೆ ಅಮಿತ್ ಶಾ ರೋಡ್ ಶೋ ವೇಳೆ ಭಾರಿ ಹಿಂಸಾಚಾರ ನಡೆದ ಕಾರಣ, ಚುನಾವಣಾ ಆಯೋಗವು ಒಂದು ದಿನ ಮುಂಚಿತವಾಗಿ ಅಂದರೆ ನಾಳೆ (ಮೇ 16) ರಾತ್ರಿ 10 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳಿಸುವಂತೆ ಆದೇಶ ಹೊರಡಿಸಿದೆ.
ಪಶ್ಚಿಮ ಬಂಗಾಳ: ಅವಧಿಗೆ ಮುನ್ನಾ ಪ್ರಚಾರ ಅಂತ್ಯಕ್ಕೆ ಆಯೋಗ ಆದೇಶ
ಇದಕ್ಕೆ ಸಂಬಂಧಿಸಿದಂತೆ ರಾತ್ರಿ 9 ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಹಿರಂಗ ಪ್ರಚಾರ ಅವಧಿ ಮೊಟಕುಗೊಳಿಸಿರುವ ಚುನಾವಣಾ ಆಯೋಗದ ಈ ಕ್ರಮ ಅನೈತಿಕ, ಅನ್ಯಾಯ ಮತ್ತು ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ.
ಪ. ಬಂಗಾಳ ಹಿಂಸಾಚಾರ: ಬಿಜೆಪಿ-ಟಿಎಂಸಿಯಲ್ಲಿ ಹೊಣೆಗಾರರು ಯಾರು?
ನಿನ್ನೆ ನಡೆದ ಹಿಂಸಾಚಾರಕ್ಕೆ ಅಮಿತ್ ಶಾ ಕಾರಣ, ಹೊರಗಿನಿಂದ ಕೇಸರಿ ಧರಿಸಿದ್ದ ಗೂಂಡಾಗಳನ್ನು ಕರೆಸಿ ಅವರಿಂದ ಹಿಂಸಾಚಾರ ಮಾಡಿಸಲಾಗಿದೆ. ಅಮಿತ್ ಶಾ ರೋಡ್ ಶೋ ಹೊರತಾಗಿ ಇನ್ನೆಲ್ಲೂ ಹಿಂಸಾಚಾರ ನಡೆದಿಲ್ಲ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ.
ಮೋದಿ ಸಮಾವೇಶಕ್ಕೆ ಸಮಯ ನೀಡಿದೆ, ನಮಗಿಲ್ಲ: ದೀದಿ
ಚುನಾವಣಾ ಆಯೋಗವು ಬಿಜೆಪಿಯ ಆದೇಶದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಮಮತಾ, ಮೋದಿ ಅವರ ಎರಡು ಸಮಾವೇಶಗಳು ನಾಳೆ ಇವೆ, ಅವಕ್ಕೆ ಸಮಯ ನೀಡಿ ಆ ನಂತರ ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಲಾಗಿದೆ ಎಂದು ಆರೋಪಿಸಿದರು.
'ನಿನ್ನೆಯ ಹಿಂಸಾಚಾರದ ಬಗ್ಗೆ ಮೋದಿಗೆ ಮರುಕವಿಲ್ಲ'
ನಿನ್ನೆ ನಡೆದ ಬಿಜೆಪಿ ಪ್ರೇರಿತ ಹಿಂಸಾಚಾರದಲ್ಲಿ ಸಮಾಜಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆ ಒಡೆಯಲಾಗಿದೆ, ಇದರ ಬಗ್ಗೆ ಕನಿಷ್ಟ ಮರುಕವನ್ನೂ ಮೋದಿ ಆಗಲಿ ಶಾ ಆಗಲಿ ವ್ಯಕ್ತಪಡಿಸಿಲ್ಲ ಎಂದು ದೀದಿ ಅಬ್ಬರಿಸಿದ್ದಾರೆ.
'ಅಮಿತ್ ಶಾ ಷೋಕಾಸ್ ನೊಟೀಸ್ ನೀಡಿಲ್ಲ'
ನಿನ್ನೆಯ ಗಲಭೆಗೆ ಅಮಿತ್ ಶಾ ಕಾರಣ, ಆದರೆ ಚುನಾವಣೆ ಆಯೋಗ ಅವರಿಗೆ ಒಂದು ಶೋಕಾಸ್ ನೊಟೀಸ್ ಸಹ ನೀಡಿಲ್ಲ ಎಂದ ದೀದಿ, ಮೋದಿ ತನ್ನ ಹೆಂಡತಿಯನ್ನು ನೋಡಿಕೊಳ್ಳಲಾಗದವ ದೇಶವನ್ನು ಹೇಗೆ ತಾನೆ ನೋಡಿಕೊಂಡಾರು ಎಂದು ವ್ಯಂಗ್ಯ ಮಾಡಿದ್ದಾರೆ.
'ಪಶ್ಚಿಮ ಬಂಗಾಳವನ್ನು ಗುರಿ ಮಾಡಿಕೊಳ್ಳಲಾಗಿದೆ'
ಅಮಿತ್ ಶಾ ಇಂದು ಸುದ್ದಿಗೋಷ್ಠಿ ನಡೆಸಿ ಚುನಾವಣಾ ಆಯೋಗವನ್ನು ಹೆದರಿಸಿದ್ದಾರೆ, ಕೂಡಲೇ ಚುನಾವಣಾ ಆಯೋಗ ಈ ನಿರ್ಣಯ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳವನ್ನು ಬೇಕೆಂದೇ ಕೇಂದ್ರವು ಗುರಿ ಮಾಡಿಕೊಂಡಿದೆ. ನಾನು ಮೋದಿ ವಿರುದ್ಧ ಮಾತನಾಡುತ್ತಿರುವ ಕಾರಣ ಈ ರಾಜ್ಯವನ್ನು ಗುರಿ ಮಾಡಿಕೊಳ್ಳಲಾಗಿದೆ ಎಂದು ಮಮತಾ ಆಕ್ರೋಶ ಹೊರಹಾಕಿದರು.