Breaking:ಅರ್ಪಿತಾ ಮುಖರ್ಜಿಯ ಮತ್ತಷ್ಟು ಸ್ಥಳಗಳ ಮೇಲೆ ಇಡಿ ದಾಳಿ
ಕೊಲ್ಕತ್ತಾ, ಆ.02: ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮಂಗಳವಾರ ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಮತ್ತಷ್ಟು ಸ್ಥಳಗಳ ಮೇಲೆ ದಾಳಿ ನಡೆಸಿ, ಶೋಧ ಆರಂಭಿಸಿದ್ದಾರೆ.
ಅಮಾನತುಗೊಂಡಿರುವ ತೃಣಮೂಲ ನಾಯಕ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಎರಡು ಫ್ಲಾಟ್ಗಳು ಮತ್ತು ಮತ್ತೊಂದು ಅಂಗಡಿಯಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ದಕ್ಷಿಣ ಕೋಲ್ಕತ್ತಾದ ಎರಡು ಫ್ಲಾಟ್ಗಳ ಮೇಲೆ ದಾಳಿ ನಡೆಸಿದ್ದಾರೆ. ಒಂದು ಪಾಂಡಿಟಿಯಾ ರಸ್ತೆ ಮತ್ತು ಇನ್ನೊಂದು ಮದುರ್ದಾಹಾದಲ್ಲಿರುವ ಫ್ಲಾಟ್ಗಳು. ಇದರ ಜೊತೆಗೆ ನಗರದ ಉತ್ತರ ಭಾಗದಲ್ಲಿರುವ ಮತ್ತೊಂದು ನೇಲ್ ಆರ್ಟ್ ಅಂಗಡಿಯಲ್ಲಿಯೂ ಶೋಧ ನಡೆಸಿದೆ.
West Bengal SSC recruitment scam | ED search underway at 'Magic Touch' in Patuli, Kolkata; property owned by Arpita Mukherjee, arrested close aid of former WB Minister Partha Chatterjee. pic.twitter.com/ynj7LEJASh
— ANI (@ANI) August 2, 2022
ಈ ಹಿಂದೆ ಅರ್ಪಿತಾ ಮುಖರ್ಜಿಯ ಟೋಲಿಗಂಜ್ ಮತ್ತು ಬೆಲ್ಗೋರಿಯಾ ಪ್ರದೇಶಗಳಲ್ಲಿನ ಆಕೆಯ ಎರಡು ಅಪಾರ್ಟ್ಮೆಂಟ್ಗಳಿಂದ ಇಡಿ ಅಧಿಕಾರಿಗಳು ಸುಮಾರು 50 ಕೋಟಿ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಂಡಿತ್ತು.
ಹಗರಣದ ತನಿಖೆಗೆ ಸಂಬಂಧಿಸಿದಂತೆ ಜುಲೈ 23 ರಂದು ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಇಬ್ಬರನ್ನೂ ಇಡಿ ಬಂಧಿಸಿತ್ತು. 10 ದಿನಗಳ ಇಡಿ ಕಸ್ಟಡಿ ಅಂತ್ಯಗೊಳ್ಳುವುದರಿಂದ ಅವರನ್ನು ಬುಧವಾರ (ಆಗಸ್ಟ್ 03) ಮತ್ತೆ ಪಿಎಂಎಲ್ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಸೋಮವಾರ ವೈದ್ಯಕೀಯ ತಪಾಸಣೆಗಾಗಿ ಜೋಕಾದಲ್ಲಿರುವ ಇಎಸ್ಐ ಆಸ್ಪತ್ರೆಗೆ ಆಗಮಿಸಿದ್ದದ ಅರ್ಪಿತಾ ಮುಖರ್ಜಿ, ತನಗೆ ತಿಳಿಯದೆ ತನ್ನ ನಿವಾಸಗಳಲ್ಲಿ ಹಣವನ್ನು ಇರಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
ಇಡಿ ದಾಳಿಯಲ್ಲಿ ಸಿಕ್ಕಿರುವ ಹಣ ತನ್ನದಲ್ಲ ಎಂದಿರುವ ಮಾಜಿ ಸಚಿವ ತಾನು ಪಿತೂರಿಯ ಬಲಿಪಶು ಎಂದಿದ್ದಾರೆ. ಜೊತೆಗೆ ಅವರನ್ನು ಅಮಾನತುಗೊಳಿಸಿರುವುದು ಮತ್ತು ಸಾಂಸ್ಥಿಕ ಹುದ್ದೆಗಳಿಂದ ತೆಗೆದುಹಾಕಿರುವ ತೃಣಮೂಲ ಕಾಂಗ್ರೆಸ್ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಮಂಗಳವಾರ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಆರೋಗ್ಯ ತಪಾಸಣೆಗಾಗಿ ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ ಜೋಕಾದಲ್ಲಿರುವ ಇಎಸ್ಐ ಆಸ್ಪತ್ರೆಗೆ ಕರೆದೊಯ್ದಾಗ ಮಹಿಳೆಯೊಬ್ಬರು ತಮ್ಮ ಚಪ್ಪಲಿಯನ್ನು ಎಸೆದಿದ್ದಾರೆ. ಪಾರ್ಥ ಚಟರ್ಜಿ ಅಷ್ಟರಲ್ಲಾಗಲೇ ವಾಹನ ಹತ್ತಿ ಅಲ್ಲಿಂದ ಹೊರಡುವ ವೇಳೆ ಅವರ ಮೇಲೆ ಚಪ್ಪಲಿ ಎಸೆದಿದ್ದು, ವಾಹನದ ಕಿಟಕಿಗೆ ಬಡಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.