ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ದೀದಿ ವಿರುದ್ದದ ಬಿಜೆಪಿ ಅಭ್ಯರ್ಥಿಗೆ ಚುನಾವಣಾ ಆಯೋಗ ನೊಟೀಸ್
ಕೋಲ್ಕತ್ತಾ, ಸೆಪ್ಟೆಂಬರ್ 15: ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಯ ಬಿಜೆಪಿಯ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ಗೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಆರೋಪದಲ್ಲಿ ನೊಟೀಸ್ ನೀಡಿದೆ.
ಭವಾನಿಪುರದಲ್ಲಿ ಉಪ ಚುನಾವಣೆಯ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ನ ಮುಂದಿನ ರ್ಯಾಲಿಗೆ ಚುನಾವಣಾ ಅಧಿಕಾರಿಗಳು ಯಾಕೆ ಅನುಮತಿ ನಿರಾಕರಿಸಬಾರದು ಎಂದು ಬುಧವಾರ ಸಂಜೆ ಐದು ಗಂಟೆಯ ಒಳಗೆ ಪ್ರತಿಕ್ರಿಯೆ ನೀಡುವಂತೆ ಬಿಜೆಪಿಯ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ಗೆ ಭವಾನಿಪುರ ಕ್ಷೇತ್ರದ ಚುನಾವಣಾಧಿಕಾರಿ ನೊಟೀಸ್ನಲ್ಲಿ ತಿಳಿಸಿದ್ದಾರೆ.
ಉಪಚುನಾವಣೆ: 'ಮಮತಾ ನಾಮಪತ್ರದಲ್ಲಿ 5 ಪ್ರಕರಣಗಳನ್ನು ಬಹಿರಂಗಪಡಿಸಿಲ್ಲ': ಬಿಜೆಪಿ ಆರೋಪ
ಬಿಜೆಪಿಯ ಯುವ ಘಟಕದ ಅಧ್ಯಕ್ಷೆ ಹಾಗೂ ವಕೀಲೆಯು ಆಗಿರುವ ಭವಾನಿಪುರ ಉಪಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿರುದ್ದದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸೋಮವಾರ ಪ್ರಿಯಾಂಕ ಟಿಬ್ರೆವಾಲ್ ತನ್ನ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ದಕ್ಷಿಣ ಕೋಲ್ಕತ್ತಾದಲ್ಲಿ ಸರ್ವೇ ಕಟ್ಟಡದಲ್ಲಿ ತನ್ನ ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕರು ಕೂಡಾ ಪ್ರಿಯಾಂಕ ಟಿಬ್ರೆವಾಲ್ ಜೊತೆಗೆ ಇದ್ದರು. ಹಾಗೆಯೇ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಪರಾಭವಗೊಳಿಸಿದ ಶಾಸಕ ಸುವೇಂದು ಅಧಿಕಾರಿ, ಸಂಸದ ಅರ್ಜುನ್ ಸಿಂಗ್ ಹಾಗೂ ಹಿರಿಯ ಮುಖಂಡರಾದ ದಿನೇಶ್ ತ್ರಿವೇದಿ, ನಟ ರುದ್ರನೀಲ್ ಘೋಷ್ ಉಪಸ್ಥಿತರಿದ್ದರು.
ಈ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಹಾಗೂ ಕೋವಿಡ್ ಮಾರ್ಗಸೂಚಿಯನ್ನು ಬಿಜೆಪಿ ಉಲ್ಲಂಘನೆ ಮಾಡಿದೆ ಎಂದು ಚುನಾವಣಾ ಆಯೋಗವು ಆರೋಪ ಮಾಡಿದೆ. ಇನ್ನು ಮಂಗಳವಾರ ಭವಾನಿಪುರದ ಉಪಚುನಾವಣೆಗೂ ಮುನ್ನ ನೀಡುವ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತನ್ನ ವಿರುದ್ದದ ಐದು ಪೊಲೀಸ್ ಪ್ರಕರಣಗಳನ್ನು ಈ ನಾಮಪತ್ರದಲ್ಲಿ ಉಲ್ಲೇಖ ಮಾಡಿಲ್ಲ ಎಂದು ಬಿಜೆಪಿಯು ಆರೋಪ ಮಾಡಿದೆ.
ಈ ಬಗ್ಗೆ ಆರೋಪ ಮಾಡಿರುವ ಬಿಜೆಪಿಯು, "ಸೆಪ್ಟೆಂಬರ್ 30 ರಂದು ನಡೆಯುವ ಭವಾನಿಪುರ ಉಪಚುನಾವಣೆಯ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಇಳಿವ ಪಕ್ಷಗಳು ತಮ್ಮ ಅಭ್ಯರ್ಥಿಯ ನಾಮಪತ್ರವನ್ನು ಸಲ್ಲಿಕೆ ಮಾಡಿದೆ. ಟಿಎಂಸಿಯಿಂದ ಭವಾನಿಪುರದಲ್ಲಿ ಕಣಕ್ಕೆ ಇಳಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ನಾಮಪತ್ರದಲ್ಲಿ ತನ್ನ ವಿರುದ್ದದ ಐದು ಪೊಲೀಸ್ ಪ್ರಕರಣಗಳನ್ನು ಬಹಿರಂಗಪಡಿಸಿಲ್ಲ," ಎಂದು ದೂರಿದೆ. ಆದರೆ ಈ ಆರೋಪವನ್ನು ತೃಣಮೂಲ ಕಾಂಗ್ರೆಸ್ ಮಾತ್ರ ಅಲ್ಲಗಳೆದಿದೆ.
ದೀದಿ ಕ್ಷೇತ್ರದಲ್ಲಿ ಬೆಂಗಾಳಿಯೇತರರ ಬೆಂಬಲಕ್ಕಾಗಿ ಟಿಎಂಸಿ ಮಾಸ್ಟರ್ ಪ್ಲ್ಯಾನ್
ತನ್ನ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದು ಬಿಜೆಪಿಯ ಸುವೇಂದು ಅಧಿಕಾರಿಯ ಎದುರು ಸೋಲು ಕಂಡಿದ್ದಾರೆ. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ತನ್ನ ವಿರುದ್ದದ ಐದು ಪ್ರಕರಣಗಳನ್ನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಲ್ಲೇಖ ಮಾಡಿಲ್ಲ ಅಥವಾ ಬಹಿರಂಗ ಪಡಿಸಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ ನಾಯಕರುಗಳು, "ಚಾರ್ಜ್ಶೀಟ್ನಲ್ಲಿ ಮಮತಾ ಬ್ಯಾನರ್ಜಿ ಹೆಸರು ಇದ್ದರೆ ಮಾತ್ರ ಈ ಪ್ರಕರಣಗಳ ಬಗ್ಗೆ ನಾಮಪತ್ರದಲ್ಲಿ ಉಲ್ಲೇಖ ಮಾಡಬೇಕಾಗಿದೆ," ಎಂದು ಸ್ಪಷ್ಟಪಡಿಸಿದೆ.
ಇದಕ್ಕೂ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ, ಭವಾನಿಪುರದಲ್ಲಿ ಸ್ಪರ್ಧೆಗೆ ಇಳಿದಿರುವ ಬಿಜೆಪಿ ಅಭ್ಯರ್ಥಿ, ವಕೀಲೆ ಪ್ರಿಯಾಂಕ ಟಿಬ್ರೆವಾಲ್ರ ಮುಖ್ಯ ಚುನಾವಣಾ ಏಜೆಂಟ್ ಭವಾನಿಪುರ ಚುನಾವಣಾಧಿಕಾರಿಗೆ ಈ ವಿಚಾರದಲ್ಲಿ ದೂರು ದಾಖಲು ಮಾಡಲು ಪತ್ರ ಬರೆದಿದ್ದರು. ಮಮತಾ ಬ್ಯಾನರ್ಜಿಯ ವಿರುದ್ದದ ಪ್ರಕರಣಗಳನ್ನು ನಾಮಪತ್ರದಲ್ಲಿ ಉಲ್ಲೇಖ ಮಾಡಿರುವ ಪ್ರಕರಣಗಳ ಹೊರತಾಗಿ ಇನ್ನೂ ಐದು ಪ್ರಕರಣಗಳು ಇವೆ. ಆದರೆ ಅದನ್ನು ಮಮತಾ ಬ್ಯಾನರ್ಜಿ ಉಲ್ಲೇಖ ಮಾಡಿಲ್ಲ ಎಂದು ಆರೋಪ ಮಾಡಿರುವ ಬಿಜೆಪಿ ಅಭ್ಯರ್ಥಿ, ವಕೀಲೆ ಪ್ರಿಯಾಂಕ ಟಿಬ್ರೆವಾಲ್ರ ಮುಖ್ಯ ಚುನಾವಣಾ ಏಜೆಂಟ್ ಇಂಡಿಯಾ ಟುಡೇ ಸೇರಿದಂತೆ ಮೂರು ಮಾಧ್ಯಮಗಳ ವರದಿಯನ್ನು ಉಲ್ಲೇಖ ಮಾಡಿದ್ದಾರೆ. ಈ ಮಾಧ್ಯಮಗಳು ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಮಮತಾ ಬ್ಯಾನರ್ಜಿಯ ವಿರುದ್ದ ಐದು ಪೊಲೀಸ್ ಪ್ರಕರಣಗಳು ಇದೆ ಎಂದು ವರದಿ ಮಾಡಿದೆ.
(ಒನ್ ಇಂಡಿಯಾ ಸುದ್ದಿ)