ಪಶ್ಚಿಮ ಬಂಗಾಳ: ಬಿಜೆಪಿ ಮುಖಂಡ ದಿಲೀಪ್ ಘೋಷ್ಗೆ 24 ಗಂಟೆ ಚುನಾವಣಾ ಪ್ರಚಾರಕ್ಕೆ ನಿರ್ಬಂಧ
ಕೋಲ್ಕತ್ತಾ, ಏಪ್ರಿಲ್ 15: ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ದಿಲೀಪ್ ಘೋಷ್ಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರವನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರಿಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರವನ್ನು ನಿಷೇಧಿಸಲಾಗಿದೆ.
ದಿಲೀಪ್ ಘೋಷ್ಗೆ ಏಪ್ರಿಲ್ 16ರ ಬೆಳಗ್ಗೆ 7 ಗಂಟೆಯಿಂದ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ನ ಸೀತಾಲಕುಚಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಮಮತಾ ಬ್ಯಾನರ್ಜಿಗೆ 24 ಗಂಟೆ ಚುನಾವಣಾ ಪ್ರಚಾರಕ್ಕೆ ನಿಷೇಧ
ಘಟನೆಗೆ ಸಂಬಂಧಿಸಿದಂತೆ ದಿಲೀಪ್ ಘೋಷ್ ಅವರು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸೀತಾಲಕುಚಿಯಲ್ಲಿನ ಪುಂಡ ಹುಡುಗರು ಗುಂಡೇಟು ತಿಂದಿದ್ದಾರೆ. ಮುಂದಿನ ಹಂತದ ಮತದಾನದಲ್ಲಿ ಪುಂಡತನ ತೋರಿದರೆ ಮತ್ತಷ್ಟು ಗುಂಡೇಟು ತಿನ್ನಬೇಕಾಗುತ್ತದೆ ಎಂದು ದಿಲೀಪ್ ಘೋಷ್ ಹೇಳಿದ್ದರು. ಇದೀಗ ಚುನಾವಣಾ ಪ್ರಚಾರಕ್ಕೆ ಒಂದು ದಿನ ಬ್ರೇಕ್ ಹಾಕಲಾಗಿದೆ.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರವನ್ನು ನಿರ್ಬಂಧಿಸಲಾಗಿತ್ತು. ಬಳಿಕ ಈ ನಿರ್ಧಾರವನ್ನು ವಿರೋಧಿಸಿ ಅವರು ಪ್ರತಿಭಟನೆ ನಡೆಸಿದ್ದರು.
ಮುಸ್ಲಿಂ ಮತಗಳ ಕ್ರೂಢೀಕರಣ ಮತ್ತು ಕೇಂದ್ರ ಭದ್ರತಾ ಪಡೆಗಳ ವಿರುದ್ಧ ಸಂಘರ್ಷಕ್ಕಿಳಿಯುವಂತೆ ಜನರಿಗೆ ಕರೆ ನೀಡಿದ ಆರೋಪದ ಮೇಲೆ, ಮಮತಾ ಬ್ಯಾನರ್ಜಿ ಅವರಿಗೆ ಸ್ಪಷ್ಟನೆ ಕೋರಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತ್ತು.