ಮೇ 26ರವರೆಗೂ ಶ್ರಮಿಕ್ ರೈಲು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ
ಕೊಲ್ಕತ್ತಾ, ಮೇ 23: ದೇಶಾದ್ಯಂತ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಅವರ ರಾಜ್ಯಗಳಿಗೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಿದೆ. ಈವರೆಗಿನ ವರದಿಯಂತೆ ಪಶ್ಚಿಮ ಬಂಗಾಳಕ್ಕೆ ಅತಿ ಕಡಿಮೆ ಶ್ರಮಿಕ್ ರೈಲು ಸಂಚರಿಸಿದೆ ಎಂದು ಕೇದ್ರ ರೈಲ್ವೆ ಸಚಿವಾಲಯ ಆರೋಪಿಸಿತ್ತು.
Recommended Video
ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ಬರಮಾಡಿಕೊಳ್ಳಲು ಪಶ್ಚಿಮ ಬಂಗಾಳ ಸರ್ಕಾರ ಹಿಂದೇಟು ಹಾಕುತ್ತಿದೆ. ಶ್ರಮಿಕ್ ರೈಲು ಸಂಚರಿಸಲು ಅನುಮತಿ ನೀಡುತ್ತಿಲ್ಲ ಎಂದು ಗೃಹಸಚಿವ ಅಮಿತ್ ಶಾ ಸಹ ಟೀಕಿಸಿದ್ದರು.
ಅಂಫಾನ್: 1000 ಕೋಟಿ ರು ಕೊಟ್ಟಿದ್ದಕ್ಕೆ ಮುನಿಸಿಕೊಂಡ ಮಮತಾ
ಇದೀಗ, ಮೇ 26ರವರೆಗೂ ರಾಜ್ಯಕ್ಕೆ ಯಾವುದೇ ಶ್ರಮಿಕ್ ರೈಲು ಕಳುಹಿಸಬೇಡಿ ಎಂದು ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಈ ಕುರಿತು ಮೇ 22 ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ರಾಜೀವ ಸಿನ್ಹಾ ರೈಲ್ವೆ ಮಂಡಳಿಯ ಅಧ್ಯಕ್ಷ ವಿ ಕೆ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.
''ಅಂಫಾನ್ ಚಂಡಮಾರುತದಿಂದ ಬಂಗಾಳದಲ್ಲಿ ಹೆಚ್ಚು ಹಾನಿಯಾಗಿದೆ. ಜಿಲ್ಲಾಡಳಿತವೂ ಆ ಪರಿಸ್ಥಿತಿಯನ್ನು ಉತ್ತಮಗೊಳಿಸುವಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ, ಶ್ರಮಿಕ್ ರೈಲುಗಳನ್ನು ಸ್ವಾಗತಿಸಲು ಕಷ್ಟವಾಗಬಹುದು'' ಎಂದು ಮನವಿ ಮಾಡಿದ್ದಾರೆ.
ಅಂಫಾನ್ ಚಂಡಮಾರುತಕ್ಕೆ ಈವರೆಗೂ 86ಕ್ಕೂ ಅಧಿಕ ಜನರು ಪ್ರಾಣಕಳೆದುಕೊಂಡಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಅಂಫಾನ್ ದಾಳಿಗೆ ಹಾನಿಯಾಗಿರುವ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ತುರ್ತು ಪರಿಹಾರವಾಗಿ 1000 ಕೋಟಿ ಹಣ ಘೋಷಿಸಿದ್ದಾರೆ.