ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಏಕೆ? ಹಿನ್ನೆಲೆಯೇನು?
ಕೋಲ್ಕತ್ತಾ, ಜೂನ್ 14: "ವಿ ವಾಂಟ್ ಜಸ್ಟೀಸ್, ವಿ ವಾಂಟ್ ಸೆಕ್ಯುರಿಟಿ" ಕೋಲ್ಕತ್ತದ ಬೀದಿ ಬೀದಿಗಳಲ್ಲಿ ಇಂಥ ಘೋಷಣೆಗಳು ಎಲ್ಲೆಲ್ಲೂ ಪ್ರತಿಧ್ವನಿಸುತ್ತಿವೆ. ಜೀವ ಉಳಿಸಬೇಕಾದ ವೈದ್ಯರು ಸರ್ಕಾರದ ಮೇಲಿನ ಮುನಿಸಿಗೆ ಸೇವೆಗೆ ಒಲ್ಲೆ ಎಂದು ಕುಳಿತಿದ್ದಾರೆ. ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ವೈದ್ಯರ ಬಳಿ ತೆರಳಿ ಮನವೊಲಿಸುವ ಯತ್ನ ನಡೆಸಿದರೂ ಅದಕ್ಕೆ ವೈದ್ಯರು ಸೊಪ್ಪು ಹಾಕಿಲ್ಲ.
ಗುರುವಾರ ಮಧ್ಯಾಹ್ನ 2 ಗಂಟೆಯ ಒಳಗೆ ಸೇವೆಗೆ ಹಾಜರಾಗದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಎಚ್ಚರಿಕೆಗೂ ಬಗ್ಗದ ವೈದ್ಯರು ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ.
2 ಗಂಟೆಯೊಳಗೆ ಸೇವೆಗೆ ಮರಳಿದರೆ ಸರಿ, ಇಲ್ಲಾಂದ್ರೆ... ವೈದ್ಯರಿಗೆ ಮಮತಾ ವಾರ್ನಿಂಗ್
ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಭದ್ರತೆ ನೀಡಲು ಸರ್ಕಾರ ಬದ್ಧವಾದರೆ ಮಾತ್ರ ತಾವು ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ವೈದ್ಯರು ಪಟ್ಟು ಹಿಡಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶಾಂತಿ ಕದಡಿದ ಈ ಪ್ರತಿಭಟನೆಯ ಹಿನ್ನೆಲೆ ಏನು? ವೈದ್ಯರ ಮುನಿಸಿಗೆ ಮೂಲ ಕಾರಣ ಏನು? ಇತ್ಯಾದಿ ಮಾಹಿತಿ ಇಲ್ಲಿದೆ.
ಹಿನ್ನೆಲೆ ಏನು?
ಜೂನ್ 10 ರಂದು 80 ವರ್ಷ ವಯಸ್ಸಿನ ರೋಗಿಯೊಬ್ಬರನ್ನು ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದರೆ ಅವರ ಸಾವಿಗೆ ಕಿರಿಯ ವೈದ್ಯರೊಬ್ಬರ ನಿರ್ಲಕ್ಶ್ಯವೇ ಕಾರಣ ಎಂದು ದೂರಿ, ರೋಗಿಯ ಸಂಬಂಧಿಗಳು ಪರಿಬೊನೊ ಮುಖರ್ಜಿ ಎಂಬ ವೈದ್ಯರ ಮೇಲೆ ದಾಳಿ ನಡೆಸಿದ್ದರು. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ವೈದ್ಯರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸಹಜವಾಗಿ ಸಂಭವಿಸಿದ ಘಟನೆಗೆ, ವೈದ್ಯರನ್ನು ಹೊಣೆಯಾಗಿಸುವುದು ಸರಿಯಲ್ಲ, ಆಸ್ಪತ್ರೆಯ ಹಾಸ್ಟೆಲ್ ಆವರಣದಲ್ಲೇ ವೈದ್ಯರ ಮೇಲೆ ದಾಳಿ ನಡೆಯುತ್ತಿದ್ದರೂ ವೈದ್ಯರ ರಕ್ಷಣೆಗೆ ಯಾರೂ ಇರಲಿಲ್ಲ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಭದ್ರತೆ ಒದಗಿಸಬೇಕು ಎಂಬುದು ವೈದ್ಯರ ಒತ್ತಾಯ.
ಮೂರು ದಿನಗಳಿಂದ ಪ್ರತಿಭಟನೆ
ಸಹೋದ್ಯೋಗಿ ವೈದ್ಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ, ಕಳೆದ ಮೂರು ದಿನಗಳಿಂದ ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆಗೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ರೋಗಿಗಳು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ಖಾಸಗಿ ಆಸ್ಪತ್ರೆಯ ಬಾಗಿಲು ತಟ್ಟಬೇಕಾದ ಪರಿಸ್ಥಿತಿ ಬಂದೆರಗಿದೆ. ಗುರುವಾರ ಮಧ್ಯಾಹ್ನ 2 ಗಂಟೆಯ ಒಳಗೆ ವೈದ್ಯರು ಕರ್ತವ್ಯಕ್ಕೆ ಮರಳದೆ ಇದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳೇ ಖುದ್ದಾಗಿ ಎಚ್ಚರಿಕೆ ನೀಡದಿದರೂ ವೈದ್ಯರು ಆ ಮಾತಿಗೆ ಕ್ಯಾರೇ ಎಂದಿಲ್ಲ.
ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರ ವಿಷಾದದ ಟ್ವೀಟ್
ಇತರ ರಾಜ್ಯಗಳಿಂದಲೂ ಬೆಂಬಲ
ಕೇವಲ ಪಶ್ಚಿಮ ಬಂಗಾಳಕ್ಕಷ್ಟೇ ಸೀಮಿತವಾಗಿದ್ದ ವೈದ್ಯರ ಪ್ರತಿಭಟನೆಗೆ ಇದೀಗ ದೆಹಲಿ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳ ವೈದ್ಯರೂ ಕೈಜೋಡಿಸಿದ್ದಾರೆ. ಇದರಿಂದ ಹಲವು ರಾಜ್ಯಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಇಂದು ಒಪಿಡಿ, ತುರ್ತು ಸೇವೆಯೂ ಬಂದ್!
ಇಷ್ಟು ದಿನ ಪ್ರತಿಭಟನೆ ನಡೆಯುತ್ತಿದ್ದಾದರೂ ಹೊರ ರೋಗಿಗಳ ವಿಭಾಗ ಮತ್ತು ತುರ್ತು ಸೇವೆಗಳಿಗೆ ಯಾವುದೇ ವ್ಯತ್ಯಯವಿರಲಿಲ್ಲ. ಆದರೆ ಶುಕ್ರವಾರ ಈ ಸೇವೆಗಳನ್ನೂ ಬಂದ್ ಮಾಡಲು ವೈದ್ಯರು ನಿರ್ಧರಿಸಿದ್ದು, ಪ್ರತಿಭಟನೆ ಅತ್ಯಂತ ಗಂಭೀರ ಸ್ವರೂಪ ತಾಳುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಕೆಲವು ವೈದ್ಯರು ರಾಜೀನಾಮೆ ನೀಡಿದ ಘಟನೆಯೂ ನಡೆದಿದೆ.