ದೀದಿ, ಈ ಹಿಂಸಾಚಾರಗಳು ನಿಮ್ಮನ್ನು ಕಾಪಾಡಲು ಸಾಧ್ಯವೇ ಇಲ್ಲ; ಮೋದಿ
ಕೋಲ್ಕತ್ತಾ, ಏಪ್ರಿಲ್ 10: ಪಶ್ಚಿಮ ಬಂಗಾಳದಲ್ಲಿ ಶನಿವಾರ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದ್ದು, ಈ ಸಂದರ್ಭ ಸಂಭವಿಸಿದ ಗಲಭೆ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಗಲಭೆಗೆ ಸಿಎಂ ಮಮತಾ ಬ್ಯಾನರ್ಜಿ ಹೊಣೆ ಎಂದು ದೂರಿದ್ದಾರೆ.
ಸಿತಲ್ಕುಚಿಯ ಕೂಚ್ಬೆಹರ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಗಲಭೆ ಏರ್ಪಟ್ಟಿದೆ. ಈ ಸಂದರ್ಭ ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋದಿ, "ದೀದಿ ಈ ಹಿಂಸಾಚಾರ, ಭದ್ರತಾ ಪಡೆ ವಿರುದ್ಧ ಜನರನ್ನು ಎತ್ತಿಕಟ್ಟುವ ನಿಮ್ಮ ತಂತ್ರ ಹಾಗೂ ಮತದಾನ ಪ್ರಕ್ರಿಯೆಗೆ ಅಡ್ಡಿ ಪಡಿಸುವ ಆಲೋಚನೆಗಳೆಲ್ಲಾ ನಿಮಗೆ ರಕ್ಷಣೆ ನೀಡಲು ಸಾಧ್ಯವಿಲ್ಲ. ಹತ್ತು ವರ್ಷಗಳಿಂದ ನೀವು ನಡೆಸಿರುವ ಕೆಟ್ಟ ಆಡಳಿತ ಹಾಗೂ ಇಂಥ ಹಿಂಸಾಚಾರ ನಿಮ್ಮನ್ನು ಕಾಪಾಡುವುದಿಲ್ಲ" ಎಂದು ಹೇಳಿದ್ದಾರೆ.
ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ಗಲಭೆಯಲ್ಲಿ ನಾಲ್ವರ ಸಾವು
ಸಿಲಿಗುರಿಯಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, "ಕೂಚ್ಬೆಹರ್ನಲ್ಲಿ ನಡೆದ ಘಟನೆ ಶೋಚನೀಯವಾದದ್ದು. ಬಿಜೆಪಿಗೆ ದೊರೆಯುತ್ತಿರುವ ಬೆಂಬಲ ನೋಡಿ ದೀದಿ ಹಾಗೂ ಅವರ ಕಡೆಯವರು ಈ ಹಿಂಸಾಚಾರ ನಡೆಸಿದ್ದಾರೆ. ತಮ್ಮ ಕುರ್ಚಿ ಕುಸಿಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಈ ಮಟ್ಟಕ್ಕೆ ಇಳಿದಿದ್ದಾರೆ" ಎಂದು ದೂರಿದ್ದು, ಟಿಎಂಸಿಯ ನಡೆ ರಾಜ್ಯದಲ್ಲಿ ಇನ್ನು ನಡೆಯುವುದಿಲ್ಲ. ಚುನಾವಣಾ ಆಯೋಗ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೂರು ಹಂತಗಳ ಚುನಾವಣೆ ಪೂರ್ಣವಾಗಿದೆ. ಶನಿವಾರ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ಬಿಗಿ ಭದ್ರತೆ ನಡುವೆಯೂ ಗಲಭೆ ನಡೆದಿದೆ. ಹಿಂಸಾಚಾರ ಸಂಬಂಧ ಇಂದು ಸಂಜೆಯೊಳಗೆ ವರದಿ ನೀಡಬೇಕೆಂದು ಚುನಾವಣಾ ಆಯೋಗ ವಿಶೇಷಾಧಿಕಾರಿಗಳಿಗೆ ತಾಕೀತು ಮಾಡಿದೆ.