ಎಂಥ ಮಗಳನ್ನು ಬಂಗಾಳ ಬಯಸುತ್ತಿದೆ?; ಸ್ಮೃತಿ ಇರಾನಿ
ಕೋಲ್ಕತ್ತಾ, ಮಾರ್ಚ್ 12: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದು, "ರಾಜ್ಯದಲ್ಲಿ ದೀದಿ ಸುಮ್ಮನೆ ಗಲಭೆ ಎಬ್ಬಿಸುತ್ತಿದ್ದಾರೆ. ಇಲ್ಲಿನ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ" ಎಂದು ದೂರಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಷ್ಠಾ ಕಣ ನಂದಿಗ್ರಾಮದಿಂದ ಸ್ಪರ್ಧಿಸಲು ಬಿಜೆಪಿಯಿಂದ ಸುವೇಂದು ಅಧಿಕಾರಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಉಪಸ್ಥಿತರಿದ್ದರು.
ಅಮೇಥಿ ಕುರಿತ ಹೇಳಿಕೆಗೆ ರಾಹುಲ್ ವಿರುದ್ಧ ಸ್ಮೃತಿ ಇರಾನಿ ಆಕ್ರೋಶ
ಈ ಸಂದರ್ಭ ತೃಣಮೂಲ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದ ಸ್ಮೃತಿ ಇರಾನಿ, ಕೇಂದ್ರದ ಆಯುಷ್ ಮಾನ್ ಭಾರತ ಯೋಜನೆಯ ಪ್ರಯೋಜನವನ್ನು ದೇಶಾದ್ಯಂತ ಜನರು ಪಡೆಯುತ್ತಿದ್ದಾರೆ. ಆದರೆ ಈ ಸೌಲಭ್ಯಗಳಿಂದ ಪಶ್ಚಿಮ ಬಂಗಾಳದ ಜನರನ್ನು ದೀದಿ ವಂಚಿತಗೊಳಿಸಿದ್ದಾರೆ. ಅಲ್ಲದೇ ಮೋದಿ ಮಾಡಿದ ಕಾರ್ಯಗಳನ್ನು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
"ಬಂಗಾಳ ತಮ್ಮ ಮಗಳನ್ನೇ ಬಯಸುತ್ತದೆ" ಎಂಬ ಟಿಎಂಸಿ ಘೋಷಣೆಯನ್ನೇ ಹೆಕ್ಕಿ ಮಾತನಾಡಿದ ಅವರು, "ಎಂಥ ಮಗಳನ್ನು ಬಂಗಾಳ ಬಯಸುತ್ತಿದೆ? 80 ವರ್ಷದ ವೃದ್ಧೆ ಮೇಲೆ ಹಲ್ಲೆ ನಡೆಸಿದ ಮಗಳನ್ನೇ? ಬಿಜೆಪಿ ಕಾರ್ಯಕರ್ತರನ್ನು ಗಲ್ಲಿಗೇರಿಸಿದವರನ್ನೇ? ದುರ್ಗೆ ಹಾಗೂ ಸರಸ್ವತಿ ಪೂಜೆಗೆ ಅವಕಾಶ ಮಾಡಿಕೊಡದ ಮಗಳನ್ನು ಬಂಗಾಳ ಬಯಸುತ್ತಿದೆಯೇ? ಎಂದು ಪ್ರಶ್ನಿಸಿದರು.
ಮಮತಾ ದೀದಿ, ನಿಮ್ಮ ಮನಸ್ಸಿಗೆ ಬಂದಂತೆ ನೀವು ಮಾಡಿ, ಆದರೆ ನರೇಂದ್ರ ಮೋದಿ ಅವರಿಗೆ ಮಾತ್ರ ಇಲ್ಲಿ ನಿಜವಾದ ಪರಿವರ್ತನೆ ತರಲು ಸಾಧ್ಯ ಎಂದು ಸವಾಲು ಹಾಕಿದರು.