'ದೀದಿ ಕೆ ಬೊಲೋ' ಅಭಿಯಾನದಲ್ಲಿ ಟಿಎಂಸಿ ನಾಯಕರಿಗೆ ಶೇಮ್ ಶೇಮ್!
ಕೋಲ್ಕತ್ತಾ, ಆಗಸ್ಟ್ 20: ತೃಣಮೂಲ ಕಾಂಗ್ರೆಸ್ 2020 ರ ವಿಧಾನಸಭೆ ಚುನಾವಣೆಗೆ ಈಗಾಗಲೆ ತಯಾರಿ ಆರಂಭಿಸಿದ್ದು, ಜನರನ್ನು ತಲುಪಿವ ಸಲುವಾಗಿ 'ದೀದಿ ಕೆ ಬೊಲೋ' ಅಭಿಯಾನವನ್ನು ಆರಂಭಿಸಿದೆ. ಹತ್ತು ಸಾವಿರ ಹಳ್ಳಿಗಳಿಗೆ ಖುದ್ದು ಕಾರ್ಯಕರ್ತರು ತೆರಳಿ ಜನರ ಸಮಸ್ಯೆಯನ್ನು ಆಲಿಸುವುದು ಈ ಕಾರ್ಯಕ್ರಮದ ಉದ್ದೇಶ.
ಆದರೆ... ಜನರ ಸಮಸ್ಯೆಯನ್ನು ಆಲಿಸಿ, ಎಂದಿನಂತೆ ಭರಪೂರ ಆಶ್ವಾಸನೆ ನೀಡುವುದಕ್ಕೆ ಹೊರಟ ರಾಜಕಾರಣಿಗಳಿಗೆ ಜನರಿಂದ ಪ್ರಶ್ನೆಗಳಲ ಸುರಿಮಳೆಯ ಸ್ವಾಗತ ಸಿಕ್ಕಿದೆ. ಇದ್ಯಾವುದನ್ನೂ ನಿರೀಕ್ಷಿಸಿರದ ಟಿಎಂಸಿ ಮುಖಂಡರು ಕ್ಷಣಕಾಲ ಏನು ಮಾಡಬೇಕೆಂದೇ ತಿಳಿಯದೆ ಪೇಚಿಗೆ ಸಿಲುಕಿದ್ದಾರೆ!
ಬಂಗಾಳದಲ್ಲಿ ಹೆಚ್ಚಿದ ಬಿಜೆಪಿ ಪ್ರಭಾವ ತಗ್ಗಿಸಲು 'ದೀದಿಗೆ ಹೇಳಿ'!
ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಸಲಹೆಯ ಮೇರೆಗೆ 'ದೀದಿ ಕೆ ಬೋಲೋ' ಎಂದ ಅಭಿಯಾನವನ್ನು ಆರಂಭಿಸಲಾಗಿದ್ದು, ಈ ಅಭಿಯಾನದ ಅಡಿಯಲ್ಲಿ ಒಟ್ಟು ಹತ್ತು ಸಾವಿರ ಹಳ್ಳಿಗಳಿಗೆ ಟಿಎಂಸಿಯ 1000 ಕ್ಕೂ ಹೆಚ್ಚು ಮುಖಂಡರು ತೆರಳಿ ಜನರ ಸಮಸ್ಯೆಯನ್ನು ಖುದ್ದು ಆಲಿಸಿ, ಪರಿಹಾರ ನೀಡಬೇಕಿದೆ. ಈಗಾಗಲೇ ಈ ಕಾರ್ಯಕ್ರಮ ಆರಂಭವಾಗಿದ್ದು, ಜನರ ಸಮಸ್ಯೆಯಗಳನ್ನು ಆಲಿಸಿ, ಪರಿಹಾರವನ್ನೂ ನೀಡಲಾಗುತ್ತಿದೆ ಎಂದು ಟಿಎಂಸಿ ನಾಯಕರು ಹೇಳಿಕೊಂಡಿದ್ದಾರೆ.
ಆದರೆ ನಾಯಕರು ತೆರಳಿದ ಕಡೆಗಳಲ್ಲಿ ಜನರು ಯಾವ ಭಯವೂ ಇಲ್ಲದೆ, ನೇರವಾಗಿಯೇ ರಾಜಕಾರಣಿಗಳ ಬಳಿ ಅನಪೇಕ್ಷಿತ ಪ್ರಶ್ನೆಗಳನ್ನು ಕೇಳಿದ್ದು, ಮುಖಂಡರಿಗೆ ಇರುಸುಮುರುಸುಂಟುಮಾಡಿತ್ತು.
ಸರ್ಕಾರದ ಕೆಲವು ವಿವಾದಾತ್ಮಕ ನಡೆ, ಮುಖಂಡರ ದುರಹಂಕಾರದ ವರ್ತನೆ ಇತ್ಯಾದಿ ವಿಷಯಗಳ ಬಗ್ಗೆ ಜನರು ನೇರವಾಗಿಯೇ ಪ್ರಶ್ನಿಸಿ, ರಾಜಕಾರಣಿಗಳ ಮಾನ ಹರಾಜು ಹಾಕುತ್ತಿದ್ದಾರೆ. ಆದರೂ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾಠವನ್ನು ನೆನಪಿನಲ್ಲಿಟ್ಟುಕೊಂಡು ಮುಖಂಡರು ಎಲ್ಲವನ್ನೂ ಸಂಯಮದಿಂದ ನುಂಗಿಕೊಂಡು, ನಗುತ್ತಲೇ ಉತ್ತರಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಚ್ಚರಿ, ಮತದಾರನ ಚಿತ್ತ 'ಎಡದಿಂದ ಬಲ'ಕ್ಕೆ!
"ಕರ್ನಾಟಕ ಮತ್ತು ಕೇರಳದಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿಕೊಂಡ ಪಶ್ಚಿಮ ಬಂಗಾಳದ ನಾಗರಿಕರನ್ನು ಸಪರ್ಕಿಸಿ, ಅವರಿಗೆ ನೆರವಾಗುವ ಕೆಲಸ ಮಾಡಿದ್ದೇವೆ. ಜನರ ಸಮಸ್ಯೆಗಳನ್ನು ಆಲಿಸಿ, ತಕ್ಷಣವೇ ಪರಿಹಾರ ನೀಡುವ ಪ್ರಯತ್ನವನ್ನೂ ಮಾಡಿದ್ದೇವೆ" ಎಂದು ಟಿಎಂಸಿ ಮುಖಂಡರು ಹೇಳಿಕೊಂಡಿದ್ದಾರೆ.